ಕುಕ್ಕೆ ಸುಬ್ರಮಣ್ಯದಲ್ಲಿ ಮಡೆಸ್ನಾನ ಆರಂಭ
ಸುಳ್ಯ ತಾಲೂಕಿನ ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ಶುಕ್ರವಾರದಿಂದ ಚಂಪಾಷಷ್ಠಿ ಆರಂಭವಾಗಿದೆ. ಶುಕ್ರವಾರ ಮಧ್ಯಾಹ್ನ ನಡೆದ ಮಡೆಸ್ನಾದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು. ಸುಮಾರು 100 ಜನ ಭಕ್ತರು ಮೊದಲ ದಿನದ ಮಡೆಸ್ನಾದಲ್ಲಿ ಪಾಲ್ಗೊಂಡಿದ್ದರು. ಇನ್ನೂ ಎರಡು ದಿನ ಮಡೆಸ್ನಾನ ಆಚರಣೆ ಯಥಾಸ್ಥಿತಿಯಂತೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿಕೆ ನೀಡಿದೆ. (ಮಡೆಸ್ನಾನ ವಿರೋಧಿಸಿ ನಿಡುಮಾಮಿಡಿ ಶ್ರೀ ಉಪವಾಸ)
ಮಡೆಸ್ನಾದ ಕುರಿತು ಮಾಹಿತಿ ನೀಡಿರುವ ದೇವಾಲಯದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೃಷ್ಣ ಪ್ರಸಾದ್ ಸುಪ್ರೀಂಕೋರ್ಟ್ ನಿರ್ದೇಶನದಂತೆ ಮಡೆಸ್ನಾನ ನಡೆಸಲಾಗುತ್ತಿದೆ ಎಂದು ಹೇಳಿದರು. ಜಿಲ್ಲಾಡಳಿತ ಸಹ ಮಡೆಸ್ನಾನ ನಡೆಸಲು ಅನುಮತಿ ನೀಡಿದೆ ಎಂದು ಅವರು ಹೇಳಿದ್ದಾರೆ. ಮಡೆಸ್ನಾನಕ್ಕೆ ಅವಕಾಶ ನೀಡಿದ್ದನ್ನು ವಿರೋಧಿಸಿ ಪ್ರಗತಿಪರ ಸಂಘಟನೆಗಳು ಶನಿವಾರ ಮಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿವೆ.
ಬೆಂಗಳೂರಿನ ಬಸನವಗುಡಿಯಲ್ಲಿರುವ ನಿಡುಮಾಮಿಡಿ ಮಠದಲ್ಲಿ ಸುಮಾರು 20 ಕ್ಕೂ ಅಧಿಕ ಮಠಾಧೀಶರೊಂದಿಗೆ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಗುರುವಾರ ಮಠದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ಸೂರ್ಯೋದಯವಾದಾಗ ಆರಂಭವಾದ ಉಪವಾಸ ಸತ್ಯಾಗ್ರಹ ಸೂರ್ಯಾಸ್ತವಾಗುವ ತನಕ ನಡೆಯಿತು. ಮಡೆಸ್ನಾನಕ್ಕೆ ಅವಕಾಶ ನೀಡಬಾರದು ಎಂದು ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿದರು.