ಕಾಸರಗೋಡು: ಪೊದೆಯೊಂದರಲ್ಲಿ ಮಾರಕಾಸ್ತ್ರಗಳು ಪತ್ತೆ!
ಕಾಸರಗೋಡು/ಮಂಗಳೂರು, ಮಾರ್ಚ್ 27 : ದುಷ್ಕ್ರತ್ಯ ಎಸಗಲು ಅಪಾರ ಪ್ರಮಾಣ ಮಾರಕಾಸ್ತ್ರಗಳನ್ನು ಸಂಗ್ರಹಿಸಿಟ್ಟಿರುವುದು ಕಾಸರಗೂಡು ಹೊರವಲಯದ ಪೊದೆಯೊಂದರಲ್ಲಿ ಪತ್ತೆಯಾಗಿವೆ.
ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ತಲವಾರು, ಮಚ್ಚು, ಕಬ್ಬಿಣದ ರಾಡ್, ದೊಣ್ಣೆಗಳು, ಮರದ ತುಂಡು, ಬಿಯರ್ ಬಾಟಲ್ ಗಳು, ಪಾತ್ರೆಗಳು ಸೇರಿದಂತೆ ಮತ್ತಿತರ ಸೊತ್ತುಗಳು ಪತ್ತೆಯಾಗಿವೆ.
ಮಾರಕಾಸ್ತ್ರಗಳು ಬಿದ್ದಿರುವುದು ಕಂಬಾರ್ ಪೆರಿಯಡ್ಕದ ನಿವಾಸಿಯೊಬ್ಬರಿಗೆ ಸೇರಿದ ಜಾಗ ಎಂದು ಹೇಳಲಾಗುತ್ತಿದೆ. ಗಲಭೆ ಸೃಷ್ಟಿಸುವ ಸಂಚಿನ ಹಿನ್ನೆಲೆಯಲ್ಲಿ ಇಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಾರಕಾಸ್ತ್ರಗಳನ್ನು ಸಂಗ್ರಹಿಸಿಡಲಾಗಿತ್ತು ಎಂದು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ಅಲ್ಲದೆ, ಇಲ್ಲಿಗೆ ಆಗಮಿಸಿದ್ದ ತಂಡ ಒಂದು ರಾತ್ರಿ ಇಲ್ಲಿಯೇ ತಂಗಿದ್ದು, ಮುಂದಿನ ದಿನಗಳಲ್ಲಿ ವ್ಯಾಪಕವಾಗಿ ಗಲಭೆ ಸೃಷ್ಟಿಸುವ ಹುನ್ನಾರ ನಡೆಸಿತ್ತು ಎನ್ನುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ.
ಈ ಹಿಂದೆ ಕಾಸರಗೋಡಿನ ಸುತ್ತಮುತ್ತ ಗಲಭೆ ನಡೆಸಲು ಸಂಚು ನಡೆದಿದೆ ಎಂದು ಗುಪ್ತಚರ ಇಲಾಖೆ ಖಚಿತಪಡಿಸಿದ ಬೆನ್ನಲ್ಲೇ ಇಷ್ಟೊಂದು ಪ್ರಮಾಣದಲ್ಲಿ ಮಾರಕಾಸ್ತ್ರಗಳು ಕೂಡಾ ಸಿಗುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ.
ಕಾಸರಗೋಡು ನಗರ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಅಬ್ದುಲ್ ರಹೀಮ್ ನೇತೃತ್ವದ ಪೊಲೀಸ್ ತಂಡ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ತೀವ್ರಗೊಳಿಸಿದೆ.