ಕೊನೆ ಕ್ಷಣದ ನಿರ್ಧಾರ, ಶ್ರೀಲಂಕಾದಲ್ಲಿ ಮಂಗಳೂರಿನ ದಂಪತಿ ಪಾರು
ಮಂಗಳೂರು, ಏಪ್ರಿಲ್ 22:ಕೊನೆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಶ್ರೀಲಂಕಾದಲ್ಲಿ ಮಂಗಳೂರಿನ ದಂಪತಿ ಸುರಕ್ಷಿತರಾದ ಪ್ರಸಂಗ ಬೆಳಕಿಗೆ ಬಂದಿದೆ.
ಮಂಗಳೂರಿನ ವೈದ್ಯರೊಬ್ಬರು ಪತ್ನಿಯೊಂದಿಗೆ ಶ್ರೀಲಂಕಾಕ್ಕೆ ಪ್ರವಾಸಕ್ಕೆ ತೆರಳಿದ್ದು, ಕೊನೆ ಕ್ಷಣದಲ್ಲಿ ವಾಸ್ತವ್ಯದ ಹೋಟೆಲ್ ಬದಲಾವಣೆ ಮಾಡಿರುವ ಕಾರಣ ಸರಣಿ ಬಾಂಬ್ ಸ್ಫೋಟದಿಂದ ಬಚಾವ್ ಆಗಿದ್ದಾರೆ.
ಶ್ರೀಲಂಕಾದ ಸರಣಿ ಬಾಂಬ್ ಸ್ಫೋಟದಲ್ಲಿ ಮಂಗಳೂರು ಮೂಲದ ಮಹಿಳೆ ಸಾವು
ಮಂಗಳೂರು ವೇದಂ ಆಯು ಆಯುರ್ವೇದ ಆಸ್ಪತ್ರೆಯ ಡಾ.ಕೇಶವರಾಜ್ ಹಾಗೂ ಅವರ ಪತ್ನಿ ಶ್ರೀದೇವಿ ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವ ಆಚರಿಸಲು ದ್ವೀಪರಾಷ್ಟ್ರ ಶ್ರೀಲಂಕಾ ಪ್ರವಾಸಕ್ಕೆ ತೆರಳಲು ನಿರ್ಧಾರ ಮಾಡಿದ್ದರು. ಸುಂದರ ಕಡಲ ಕಿನಾರೆಯಲ್ಲಿ ವಿಹಂಗಮ ನೋಟ ಸವಿಯುವ ಯೋಚನೆಯೊಂದಿಗೆ ಏಪ್ರಿಲ್ 20ರಂದು ಮಧ್ಯಾಹ್ನ ಕೊಲೊಂಬೋಗೆ ತೆರಳಿದ್ದರು.
ಸ್ಫೋಟ ನಡೆದ ಸ್ಥಳ ಹೊಟೇಲ್ ಸಿನಮನ್ ಗ್ರಾಂಡ್ನಲ್ಲಿ ಉಳಿದುಕೊಳ್ಳಬೇಕಾಗಿದ್ದ ಡಾ.ಕೇಶವರಾಜ್ ಹಾಗೂ ಪತ್ನಿ ಶ್ರೀದೇವಿ ಕೊನೆಯ ಕ್ಷಣದಲ್ಲಿ ಅದನ್ನು ರದ್ದು ಮಾಡಿ ನೆಗೊಂಬೋ ರಸ್ತೆಯ ಇನ್ನೊಂದು ಹೊಟೇಲ್ ಕ್ಲಾರಿಯನ್ ಹಬ್ ನಲ್ಲಿ ತಂಗಿದರು.
ಆ ನಂತರ ಅವರು ಉಳಿದಿದ್ದ ಹೋಟೆಲ್ ಬಳಿ ಮರುದಿನ ಮುಂಜಾನೆ ಸ್ಫೋಟದ ಸದ್ದು ಕೇಳಿ ಬೆಚ್ಚಿಬಿದ್ದಿದ್ದಾರೆ. ನೆಲ ನಡುಗಿಸುವ ಆ ಶಬ್ದದ ಕುರಿತು ತಮ್ಮ ಟೂರ್ ಏಜೆಂಟರಲ್ಲಿ ವಿಚಾರಿಸುವಾಗ ಇದು ಬಾಂಬ್ ಸ್ಫೋಟವೆನ್ನುವುದು ಗೊತ್ತಾಗಿದೆ. ತಾವು ಉಳಿದುಕೊಳ್ಳಬೇಕಾದ ಹೊಟೇಲ್ ನಲ್ಲೇ ಸ್ಫೋಟ ಸಂಭವಿಸಿ ಅಪಾರ ಜೀವಹಾನಿ ಸಂಭವಿಸಿದ್ದು ಕೇಳಿ ಡಾ.ಕೇಶವರಾಜ್ ಹಾಗು ಪತ್ನಿ ಶ್ರೀದೇವಿ ಬೆಚ್ಚಿಬಿದ್ದಿದ್ದಾರೆ.
ನಗುತ್ತಾ ದುಬೈ ವಿಮಾನ ಹತ್ತಿದ ಪತಿ ಇಳಿದ ತಕ್ಷಣ ಕೇಳಿದ್ದು ಪತ್ನಿ ಸಾವಿನ ಸುದ್ದಿ
ಸರಣಿ ಸ್ಫೋಟದಿಂದಾಗಿ ಡಾ. ಕೇಶವರಾಜ್ ದಂಪತಿ ಪ್ರವಾಸದ ಖುಷಿ ಅನುಭವಿಸಲಾಗದೆ ಹಿಂದಿರುಗಲು ನಿರ್ಧರಿಸಿದ್ದಾರೆ. ಸದ್ಯ ಕೊಲೊಂಬೋ ಸುತ್ತಮುತ್ತ ಮೊಬೈಲ್ ನೆಟ್ವರ್ಕ್ ಜಾಂ ಆಗಿದ್ದು ಸಂಪರ್ಕ ಮಾಡಲಾಗುತ್ತಿಲ್ಲ. ಡಾ ಕೇಶವರಾಜ್ ಅವರೊಂದಿಗೆ ಕುಟುಂಬಸ್ಥರ ಸಂಪರ್ಕ ಸಾಧ್ಯವಾಗುತ್ತಿಲ್ಲ. ಕೆಲ ಕ್ಷಣ ಅಣ್ಣನೊಂದಿಗೆ ಮಾತನಾಡಿದ್ದೇನೆ, ಅವರಿಬ್ಬರು ಸುರಕ್ಷಿತವಾಗಿದ್ದಾರೆ, ಹೋಟೆಲ್ ನಲ್ಲೇ ಇದ್ದಾರೆ ಎಂದು ಡಾ ಕೇಶವ ರಾಜ್ ಅವರ ಸೋದರ ಕಾರ್ತಿಕ್ರಾಜ್ ತಿಳಿಸಿದ್ದಾರೆ.
ಶ್ರೀಲಂಕಾ ಸ್ಫೋಟ: ಚರ್ಚ್ ದಾಳಿಗೂ ಮೊದಲು ಉಗ್ರನನ್ನು ಪ್ರಶ್ನಿಸಿದ್ದ ಪಾದ್ರಿ
ಇದೇ ಏಪ್ರಿಲ್ 24ರಂದು ಡಾ ಕೇಶವರಾಜ್ ದಂಪತಿ ಮಂಗಳೂರಿಗೆ ಹಿಂದಿರುಗಲಿದ್ದಾರೆ. ಸದ್ಯ ಕರ್ಫ್ಯೂ ಇರುವುದರಿಂದ ಎಲ್ಲಿಗೂ ತೆರಳಲಾಗುತ್ತಿಲ್ಲ ಎಂದು ಕೇಶವರಾಜ್ ಕುಟುಂಬಸ್ಥರಿಗೆ ತಿಳಿಸಿದ್ದಾರೆ.