ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ರಾಜೇಶ್ ಭಟ್ ಪತ್ತೆಗಾಗಿ ಲುಕ್ಔಟ್ ನೋಟಿಸ್ ಜಾರಿ
ಮಂಗಳೂರು, ನವೆಂಬರ್ 9: ಮಂಗಳೂರಿನ ಖ್ಯಾತ ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್, ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ.
ತನ್ನ ವಿರುದ್ಧ ಪ್ರಕರಣ ದಾಖಲಾಗುತಿದ್ದಂತೆ ತಲೆಮರೆಸಿಕೊಂಡಿರುವ ವಕೀಲ ಕೆ.ಎಸ್.ಎನ್. ರಾಜೇಶ್ಗಾಗಿ ಮಂಗಳೂರು ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ನಡುವೆ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಗುಪ್ತಚರ ಸಂಸ್ಥೆ ಮೂಲಕ, ಕೆ.ಸಿ.ಎನ್. ರಾಜೇಶ್ ವಿರುದ್ಧ ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಮಂಗಳೂರಿನಲ್ಲಿ ಹೈಪ್ರೊಫೈಲ್ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿ ವಕೀಲ ಎಸ್ಕೇಪ್
ಕಾನೂನು ಪದವಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ವಕೀಲ ಕೆ.ಎಸ್.ಎನ್. ರಾಜೇಶ್ ಪತ್ತೆಗಾಗಿ ಮಂಗಳೂರು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ವಕೀಲ ಕೆ.ಎಸ್.ಎನ್. ರಾಜೇಶ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಮಂಗಳೂರು ಪೊಲೀಸರ 6 ತಂಡ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ಬೆಂಗಳೂರಿನಲ್ಲಿ ಬೀಡು ಬಿಟ್ಟಿವೆ. ಈ ನಡುವೆ ಆರೋಪಿ ಕೆ.ಎಸ್.ಎನ್. ರಾಜೇಶ್ ದೇಶ ಬಿಟ್ಟು ತೆರಳದಂತೆ ಬೇಹುಗಾರಿಕಾ ಸಂಸ್ಥೆ ಐಬಿ (ಗುಪ್ತಚರ ಸಂಸ್ಥೆ) ಮೂಲಕ ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಗೆ ಲುಕ್ಔಟ್ ನೋಟಿಸ್ನ್ನು ಮಂಗಳೂರು ಪೊಲೀಸರು ಜಾರಿ ಮಾಡಿದ್ದಾರೆ.
ಇಷ್ಟು ಮಾತ್ರವಲ್ಲದೇ ಆರೋಪಿ ವಕೀಲ ಕೆ.ಎಸ್.ಎನ್. ರಾಜೇಶ್ ಪತ್ತೆಗಾಗಿ ತಮಿಳುನಾಡು, ತೆಲಂಗಾಣ, ಗೋವಾ, ಕೇರಳ, ಆಂಧ್ರಪ್ರದೇಶ ಪೊಲೀಸರ ನೆರವನ್ನೂ ಮಂಗಳೂರು ಪೊಲೀಸರು ಕೇಳಿದ್ದಾರೆ. ಪ್ರಕರಣದ ತನಿಖೆಗಾಗಿ ಮಂಗಳೂರು ಪೊಲೀಸರ ವಿಶೇಷ 6 ತಂಡವನ್ನು ರಚಿಸಲಾಗಿದ್ದು, ಈ ತಂಡ ವಿವಿಧ ಕಡೆಗಳಿಗೆ ತೆರಳಿ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.
ಆದರೆ, ವಕೀಲ ರಾಜೇಶ್ ಮೊಬೈಲ್ ಬಳಸದೆ ತಿರುಪತಿ, ಚೆನ್ನೈ, ಹೈದರಾಬಾದ್ ಹೀಗೆ ವಿವಿಧ ಕಡೆಗಳಿಗೆ ಪೊಲೀಸರಿಂದ ತಪ್ಪಿಸಿಕೊಂಡು ತಿರುಗಾಡುತ್ತಿದ್ದಾನೆ ಎನ್ನಲಾಗುತ್ತಿದೆ. ಹೀಗಾಗಿ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಲುಕ್ಔಟ್ ನೋಟಿಸ್ನ್ನು ಬರೆಯಲಾಗಿದ್ದು, ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಪೊಲೀಸ್ ಠಾಣೆಗಳಿಗೆ ರವಾನಿಸಲಾಗಿದೆ.
ತಲೆಮರೆಸಿಕೊಂಡಿರುವ ಆರೋಪಿ ರಾಜೇಶ್ಗೆ ಸೇರಿದ ಸುಮಾರು 12 ಬ್ಯಾಂಕ್ ಖಾತೆಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಆರೋಪಿ ರಾಜೇಶ್ಗೆ ಹಣ ರವಾನೆಯಾಗಲು ಸಾಧ್ಯವಾಗದ ರೀತಿಯಲ್ಲಿ ಪೊಲೀಸರು ಎಚ್ಚರ ವಹಿಸಿದ್ದಾರೆ. ಒಂದು ವೇಳೆ ಇತರರ ಬ್ಯಾಂಕ್ ಖಾತೆಯಿಂದ ಹಣದ ಚಲಾವಣೆ ಆದರೂ ಪೊಲೀಸರಿಗೆ ಮಾಹಿತಿ ಬರುವಂತೆ ಪ್ಲಾನ್ ಮಾಡಿಕೊಂಡಿದ್ದಾರೆ.
ಒಟ್ಟಿನಲ್ಲಿ ತನ್ನ ಕಚೇರಿಗೆ ವಕೀಲ ವೃತ್ತಿ ಕಲಿಯಲು ಬಂದ ಕಾನೂನು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ತಲೆಮರೆಸಿಕೊಂಡಿರುವ ಆರೋಪಿ ವಕೀಲ ಕೆ.ಎಸ್.ಎನ್. ರಾಜೇಶ್ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದಾರೆ. ಪ್ರಕರಣ ನಡೆದು ತಿಂಗಳುಗಳೇ ಕಳೆದರೂ ಪೊಲೀಸರಿಗೆ ಆರೋಪಿಯ ಸುಳಿವು ಲಭ್ಯವಾಗಿಲ್ಲ.