ಕರ್ನಾಟಕದಲ್ಲಿ ಲಾಕ್ ಡೌನ್; ಸುಳಿವು ಕೊಟ್ಟ ಬಿಜೆಪಿ ಅಧ್ಯಕ್ಷರು
ಮಂಗಳೂರು, ಏಪ್ರಿಲ್ 20; ಕರ್ನಾಟಕದಲ್ಲಿ ಕೋವಿಡ್ ಹರಡುವಿಕೆ ನಿಯಂತ್ರಣ ಮಾಡಲು ಲಾಕ್ ಡೌನ್ ಜಾರಿ ಮಾಡುವ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸುಳಿವು ನೀಡಿದರು.
ಮಂಗಳವಾರ ರಾಜ್ಯಪಾಲರ ನೇತೃತ್ವದಲ್ಲಿ ನಡೆದ ಸರ್ವ ಪಕ್ಷಗಳ ಸಭೆ ಬಳಿಕ ಮಾತನಾಡಿದ ಅವರು, "ಕೋವಿಡ್ ಈ ಹಿಂದಿಗಿಂತ ಹೆಚ್ಚಾಗಿ ಹರಡುತ್ತಿದೆ. ವೈರಸ್ ಪರಿಣಾಮ ಕೂಡಾ ಜಾಸ್ತಿಯಾಗಿದೆ. ಆದರೆ ಜನರು ಮಾಸ್ಕ್ ಹಾಕದೆ ತಿರುಗಾಡುತ್ತಿದ್ದಾರೆ. ಸಾಮಾಜಿಕ ಅಂತರವೂ ಕಡಿಮೆಯಾಗಿದೆ" ಎಂದರು.
"ಕಳೆದ ಬಾರಿಗಿಂತ ವೇಗವಾಗಿ ಕೊರೊನಾ ಹರಡುತ್ತಿದೆ. ಇದನ್ನು ತಪ್ಪಿಸಲು ಕಠಿಣ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬಹುದು" ಎಂದು ಹೇಳಿದರು. ಈ ಮೂಲಕ ಲಾಕ್ ಡೌನ್ ಘೋಷಣೆ ಸುಳಿವು ಕೊಟ್ಟರು.
"ಜನರು ಸರ್ಕಾರದ ನಿರ್ಧಾರಕ್ಕೆ ಬೆಂಬಲ ನೀಡಬೇಕು. ಎಲ್ಲಾ ಪಕ್ಷದವರೂ ಸರ್ಕಾರದ ನಿರ್ಧಾರಕ್ಕೆ ಬೆಂಬಲ ನೀಡಬೇಕು. ಈಗಾಗಲೇ ಪ್ರತಿಪಕ್ಷದ ಮುಖಂಡರು ಅಭಿಪ್ರಾಯ ನೀಡಿದ್ದಾರೆ" ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
"ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಸಿದ್ಧರಾಮಯ್ಯ ಸಲಹೆ ನೀಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ತಜ್ಞರ ಜೊತೆ ಸಭೆ ಬಳಿಕ ಅಂತಿಮ ನಿರ್ಧಾರ ಹೊರಬೀಳಲಿದೆ" ಎಂದು ತಿಳಿಸಿದರು.
ರಾಜ್ಯಪಾಲರ ಸಭೆ ಸಂವಿಧಾನ ವಿರೋಧಿ ಎಂದು ದೂರಿದ್ದ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಸಿದ್ಧರಾಮಯ್ಯ ಈ ಸಭೆಯಲ್ಲೂ ರಾಜಕೀಯವನ್ನು ತುರಕಿಸಲು ನೋಡಿದ್ದಾರೆ. ಸಿದ್ಧರಾಮಯ್ಯಗೆ ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ಬಸವರಾಜ ಹೊರಟ್ಟಿಯವರು ಮನವರಿಕೆ ಮಾಡಿದ್ದಾರೆ" ಎಂದರು.