ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ 14 ದಿನ ಲಾಕ್ಡೌನ್?
ಮಂಗಳೂರು, ಜು. 21: ರಾಜ್ಯದಲ್ಲಿ ಅತಿಹೆಚ್ಚು ಕೋವಿಡ್ ಸೋಂಕಿತರು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಲಾಕ್ಡೌನ್ ವಿಸ್ತರಣೆ ಮಾಡುವ ಸಾಧ್ಯತೆಯಿದೆ.
Recommended Video
ಸೋಂಕು ಕಡಿಮೆ ಮಾಡಲು ಸ್ವಯಂ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದಲೇ ಲಾಕ್ಡೌನ್ ಮಾಡಲು ಒಲವು ಕಂಡುಬಂದಿದೆ. ಹೀಗಾಗಿ ಮತ್ತೆ ಹದಿನಾಲ್ಕು ದಿನಗಳ ಕಾಲ ಲಾಕ್ಡೌನ್ ವಿಸ್ತರಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಬಂದಿದೆ.
ಜಿಲ್ಲಾಡಳಿತದ ಮುಂದೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಈ ಬಗ್ಗೆ ಒತ್ತಾಯ ಮಾಡಲಾಗಿದೆ. ಈ ಬಗ್ಗೆ ನಾಳೆ ಸಿಎಂ ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಯಲಿದೆ. ಹೀಗಾಗಿ ಇವತ್ತು ಮಂಗಳೂರಿನಲ್ಲಿ ಜನಪ್ರತಿನಿಧಿಗಳ ಸಭೆ ನಡೆಯುತ್ತಿದ್ದು, ಲಾಕ್ಡೌನ್ ವಿಸ್ತರಿಸಬೇಕೇ ಎಂಬ ಕುರಿತು ಚರ್ಚೆ ನಡೆಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಭಾನುವಾರದ ಲಾಕ್ಡೌನ್ ರಾಜ್ಯಾದ್ಯಂತ ಮುಂದುವರಿಕೆ!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ಡೌನ್ ಮುಂದುವೆಸುವ ಬಗ್ಗೆ ಸಿಎಂ ಜೊತೆ ಚರ್ಚೆ ಬಳಿಕ ಅಂತಿಮ ನಿರ್ಧಾರ ಮಾಡಲಾಗುವುದು. ನಾಳೆ ಸಂಜೆ ವೇಳೆಗೆ ಲಾಕ್ಡೌನ್ ವಿಸ್ತರಣೆ ಕುರಿತ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಜಿಲ್ಲಾಡಳಿತ ನಿರ್ಧಾರದಂತೆ ಈಗಾಗಲೇ ಆರು ದಿನಗಳ ಲಾಕ್ಡೌನ್ ಮುಂದುವರೆದಿದೆ. ಜುಲೈ 23 ರ ಬೆಳಿಗ್ಗೆ 5 ಗಂಟೆಗೆ ಸದ್ಯದ ಲಾಕ್ಡೌನ್ ಮುಕ್ತಾಯವಾಗಲಿದೆ. ಹೀಗಾಗಿ ಲಾಕ್ಡೌನ್ ವಿಸ್ತರಣೆ ಸಾಧ್ಯತೆ ಕುರಿತು ನಾಳೆಯೇ ನಿರ್ಧಾರ ಮಾಡಲಾಗುವುದು. ಲಾಕ್ಡೌನ್ ವಿಸ್ತರಿಸಿದರೆ ನಾಗರ ಪಂಚಮಿ ಹಾಗೂ ಬಕ್ರೀದ್ ಹಬ್ಬಕ್ಕೆ ಹೆಚ್ಚಿನ ನಿರ್ಬಂಧ ಹಾಕುವ ಸಾಧ್ಯತೆಗಳಿವೆ.