ಪ್ರವೀಣ್ ಹತ್ಯೆ ಹಂತಕರೂ ಸ್ಥಳೀಯರೇ, ಮತ್ತಷ್ಟು ಹತ್ಯೆಗೂ ಸಂಚು: ಆರಗ ಜ್ಞಾನೇಂದ್ರ
ಮಂಗಳೂರು, ಆಗಸ್ಟ್ 6: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಹತ್ಯೆಯನ್ನು ಸ್ಥಳೀಯ ಯುವಕರೇ ಸೇರಿಕೊಂಡು ನಡೆಸಿರುವ ಸ್ಫೋಟಕ ವಿಚಾರ ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ರಾಜ್ಯ ಗೃಹಸಚಿವರೇ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದು, ಹಂತಕರು ಕೇರಳ ಮೂಲದವರು ಎಂದು ಬಿಂಬಿಸಲು ಪ್ರಯತ್ನಿಸಲಾಗಿದೆ ಎಂದು ತಿಳಿಸಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವೊಂದು ಸಿಕ್ಕಿದೆ. ಪ್ರವೀಣ್ ಹತ್ಯೆಯ ಹಂತಕರು ಸ್ಥಳೀಯರೇ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳುವ ಮೂಲಕ ಪ್ರಕರಣಕ್ಕೆ ದೊಡ್ಡ ತಿರುವು ನೀಡಿದ್ದಾರೆ. ಪ್ರಾರಂಭದಲ್ಲಿ ಕೇರಳದಿಂದ ಬಂದಿದ್ದ ಹಂತಕರು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಹಂತಕರು ಸ್ಥಳೀಯರೇ ಆಗಿದ್ದು, ಕೇರಳ ಮೂಲದವರು ಎಂದು ಬಿಂಬಿಸಲು ಕೃತ್ಯಕ್ಕೆ ಕೇರಳ ನೋಂದಣಿಯ ಬೈಕ್ನ್ನು ಬಳಸಿರುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಪ್ರಮುಖ ಹಂತಕರ ಪೈಕಿ ಓರ್ವ ಬೆಳ್ಳಾರೆ ಮೂಲದವನು, ಮತ್ತೊಬ್ಬ ಸುಳ್ಯ ಮೂಲದವನು ಎಂಬ ಮಾಹಿತಿಯು ಪೊಲೀಸರಿಗೆ ತಿಳಿದುಬಂದಿದೆ.
ಫಾಜಿಲ್ ಹತ್ಯೆ: ಆರೋಪಿಗಳ ಪ್ಲಾನ್ ವಿವರಿಸಿದ ಪೊಲೀಸ್ ಆಯುಕ್ತರು
ಕೇರಳದೊಂದಿಗೆ ನಂಟು ಹೊಂದಿರುವ ಈ ಸ್ಥಳೀಯ ಯುವಕರಿಗೆ ವಿದೇಶಿ ಶಕ್ತಿಗಳು ಸಹ ಸಹಾಯ ಮಾಡಿರುವ ಗುಮಾನಿ ಇದೆ. ಸದ್ಯ ಕೃತ್ಯದ ಬಳಿಕ ಹಂತಕರು ಕೇರಳಕ್ಕೆ ತೆರಳಿರುವುದು ದೃಢವಾಗಿದ್ದು, ಆರೋಪಿಗಳು ಹೊರ ದೇಶಕ್ಕೆ ತೆರಳುವ ಸಾಧ್ಯತೆ ಹಿನ್ನಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಕೃತ್ಯದ ಬಳಿಕ ಹಂತಕರು ಮೊಬೈಲ್ನ್ನು ಇಲ್ಲೆ ಬಿಟ್ಟು ಹೋಗಿದ್ದು, ಪೊಲೀಸರಿಗೆ ಹಂತಕರು ಯಾರೆಂಬ ಮಾಹಿತಿ ಗೊತ್ತಾಗಿದೆ. ಹೀಗಾಗಿ ಹತ್ಯೆಯ ಪ್ರಮುಖ ಆರೋಪಿಗಳನ್ನು ಶೀಘ್ರದಲ್ಲೇ ಹಿಡಿದು ತರುವ ವಿಶ್ವಾಸವನ್ನು ಇಲಾಖೆ ವ್ಯಕ್ತಪಡಿಸಿದೆ. ಇನ್ನು ಪ್ರವೀಣ್ ಹತ್ಯೆಯ ಜೊತೆಗೆ ಹಂತಕರು ಕೆಲ ಹಿಂದೂ ಯುವಕರ ಹತ್ಯೆಗೂ ಪ್ಲ್ಯಾನ್ ಮಾಡಿದ್ದರು ಎಂದು ತಿಳಿದುಬಂದಿದೆ. ಹಂತಕರ ಹಿಟ್ ಲಿಸ್ಟ್ನಲ್ಲಿ ಹಿಂದೂ ಲೀಡರ್ಸ್ ಇದ್ದರೂ ಎಂಬುದು ಗೊತ್ತಾಗಿದೆ.
ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಎನ್ಐಎಗೆ ಕೇಂದ್ರ ಗೃಹ ಸಚಿವಾಲಯ ಲಿಖಿತ ಆದೇಶ ನೀಡಿದೆ. ಒಟ್ಟಿನಲ್ಲಿ ಪ್ರವೀಣ್ ಹತ್ಯೆಯ ಹಂತಕರು ಶೀಘ್ರ ಪತ್ತೆಯಾಗಬೇಕಿದ್ದು, ದಕ್ಷಿಣಕನ್ನಡ ಜಿಲ್ಲಾ ಪೊಲೀಸರ ಆರು ತಂಡ ಈ ಕಾರ್ಯ ನಡೆಸುತ್ತಿದೆ.