ಪಾದ್ರಿಯಾಗಲು ಹೊರಟಿದ್ದ ಜಾರ್ಜ್ ಹೋರಾಟದ ಹಾದಿ ತುಳಿದಿದ್ದಾದರೂ ಏಕೆ?
ಮಂಗಳೂರು, ಜನವರಿ 29:ಸುಮಾರು 40ರ ದಶಕದಲ್ಲಿ ಮಂಗಳೂರಿನ ಮೈದಾನವೊಂದರ ಕಲ್ಲು ಬೆಂಚಿನ ಮೇಲೆ ಒಬ್ಬ ಬಾಲಕ ಮಲಗಿದ್ದ. ಮನೆಯವರು ಕ್ರೈಸ್ತ ಪಾದ್ರಿ ಆಗು ಎಂದು ಬೆಂಗಳೂರಿಗೆ ಕಳುಹಿಸಿದ್ದರೆ, ಆ ಬಾಲಕ ಮಾತ್ರ ಅಲ್ಲಿನ ತಾರತಮ್ಯಕ್ಕೆ ಬೇಸತ್ತು, ಅಲ್ಲಿಯ ಆಚಾರಕ್ಕೂ ವಿಚಾರಕ್ಕೂ ಇದ್ದ ವ್ಯತ್ಯಯದಿಂದ ಜಿಗುಪ್ಸೆಕೊಂಡು ಹೊರಬಂದಿದ್ದ.
ಸೆಮಿನರಿ ಶಿಕ್ಷಣವನ್ನು ಅರ್ಧದಲ್ಲೇ ಬಿಟ್ಟು ಮಂಗಳೂರಿಗೆ ಮರಳಿದ್ದ. ತನ್ನ ವರ್ತನೆಯ ಬಗ್ಗೆ ಮನೆಮಂದಿಯ ಮೂದಲಿಕೆಯೂ ಸೇರಿದ್ದರಿಂದ ಬಾಲಕನಿಗೆ ಎಲ್ಲವನ್ನೂ ಕಳೆದುಕೊಂಡ ಅನಾಥ ಭಾವ ಕಾಡುತ್ತಿತ್ತು.
ಇಂತಹ ಕ್ಲಿಷ್ಟಕರ ಸಮಯದಲ್ಲಿ ಒಬ್ಬ ಯುವಕನೋರ್ವ ಬಾಲಕನ ಬಳಿಗೆ ತೆರಳಿ ಅವನ ಬೆನ್ನು ತಟ್ಟಿ ಪ್ರೀತಿಯಿಂದ ಮಾತನಾಡಿಸಿದ. ಆ ಬಾಲಕನನ್ನು ಸಂತೈಸಿದ್ದೂ ಅಲ್ಲದೇ, ಮುಂದೆ ತನ್ನ ಜೊತೆಗೆ ಸೇರಿಸಿಕೊಂಡು ತನ್ನ ರಾಜಕೀಯ ಚಟುವಟಿಕೆ, ಹೋರಾಟಗಳಲ್ಲಿ ನಿರಂತರ ಭಾಗಿಯಾಗುವಂತೆ ಮಾಡಿದ. ಆ ಬಾಲಕನ ಮೇಲೆ ಪ್ರಭಾವ ಬೀರಿದ ಆ ಯುವಕ ಸ್ವಾತಂತ್ರ ಹೋರಾಟಗಾರ ಅಮ್ಮಂಬಳ ಬಾಳಪ್ಪ.
ಫರ್ನಾಂಡಿಸ್ ಅಂತಿಮ ಆಸೆಯಂತೆ ದೇಹಕ್ಕೆ ಅಗ್ನಿ,ಮಣ್ಣಿಗೆ ಚಿತಾಭಸ್ಮ
ಅಮ್ಮೆಂಬಳ ಬಾಳಪ್ಪ ಅವರ ಮಾರ್ಗದರ್ಶನದಿಂದ ಪ್ರಭಾವಿತಗೊಂಡ ಬಾಲಕ ಮುಂದೆ ಮುಂಬೈ ನಗರವನ್ನು ಸೇರಿ ಅಲ್ಲಿ ಬಡವರ ಧ್ವನಿಯಾಗಿ, ಕಾರ್ಮಿಕ ವರ್ಗದ ಶಕ್ತಿಯಾಗಿ ಹೋರಾಟದ ಬದುಕನ್ನೇ ಅಪ್ಪಿ ಮುಂದುವರೆದ. ಆ ಹೋರಾಟದ ಹಾದಿಯನ್ನು ತುಳಿದ ಆ ಬಾಲಕ ಮುಂದೆ ದೇಶದ ಓರ್ವ ಪ್ರಭಾವಿ ರಾಜಕಾರಣಿಯಾಗಿ ಮೂಡಿಬಂದ. ಮಾತ್ರವಲ್ಲದೆ ದೇಶದ ಅತ್ಯುತ್ತಮ ರಕ್ಷಣಾ ಸಚಿವನಾಗಿಯೂ ಸೇವೆ ಸಲ್ಲಿಸಿದರು. ಅವರೇ ಜಾರ್ಜ್ ಫರ್ನಾಂಡಿಸ್.
ರಣಕಹಳೆಗಳ ಮೂಲಕ ದೇಶದ ರಾಜಕೀಯ ವ್ಯವಸ್ಥೆಯನ್ನು ಅಲುಗಾಡಿಸುತ್ತಿದ್ದ ಬೆಂಕಿ ಉಗುಳುವ ಮಾತುಗಾರ ಜಾರ್ಜ್ ಫರ್ನಾಂಡಿಸ್ ಈಗ ತಣ್ಣಗಾಗಿದ್ದಾರೆ . ಅಲ್ಝಮೈರ್ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಇಂದು ದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಜನಪರ ಹೋರಾಟಗಳ ಮೂಲಕ ಬೆಳೆದರು
ಬೆಂಕಿ ಉಗುಳುವ ಮಾತುಗಾರಿಕೆಗೆ ಜಾರ್ಜ್ ಫರ್ನಾಂಡಿಸ್ ಹೆಗ್ಗುರುತು ಬಹಳ ರೋಚಕ. ಭಾರತದ ಕಾರ್ಮಿಕ ಸಂಘಟನೆಯಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿ, ಅದರ ಮೂಲಕವೇ ನಾಯಕತ್ವದ ಪಟ್ಟವನ್ನು ಸ್ವಯಾರ್ಜಿತವಾಗಿ ಪಡೆದುಕೊಂಡದ್ದು ಅವರ ಹೆಗ್ಗಳಿಕೆ. ಮಂಗಳೂರಿನಲ್ಲಿ ಹುಟ್ಟಿ ಚರ್ಚ್ನಲ್ಲಿ ಪಾದ್ರಿಯಾಗುವ ಅವಕಾಶವನ್ನು ಕೈಬಿಟ್ಟು ಮುಂಬೈ ಸೇರಿ ಬಿಹಾರದ ಮೂಲಕ ದೆಹಲಿಯಲ್ಲಿ ಪ್ರತ್ಯಕ್ಷವಾಗಿ ಇಡೀ ಭಾರತ ಕಣ್ಣರಳಿಸಿ ನೋಡುವಂತೆ ಮಾಡಿದ ಜಾರ್ಜ್ ಫರ್ನಾಂಡಿಸ್, ರಾಜಕೀಯ ಕೌಶಲ್ಯದ ಹಿಂದಿರುವುದು ಜನಶಕ್ತಿ. ಅವರು ಆ ಮಟ್ಟಕ್ಕೆ ಬೆಳೆದಿದ್ದು ಜನಪರ ಹೋರಾಟಗಳ ಮೂಲಕ . ಸೆಮಿನರಿ ಶಿಕ್ಷಣಕ್ಕೆ ಗುಡ್ ಬೈ ಹೇಳಿದ ಜಾರ್ಜ್ ತುಳಿದಿದ್ದು ಹೋರಾದ ಹಾದಿಯನ್ನು. 1930 ರಲ್ಲಿ ಜನಿಸಿದ ಜಾರ್ಜ್, ಉದ್ಯೋಗ ನಿಮ್ಮಿತ್ತ ಮುಂಬೈಗೆ ತೆರಳಿದ ಅವರ ಬದುಕಿನ ಹಾದಿಯೇ ಬದಲಾಯಿತು. ಕಾರ್ಮಿಕ ಹೋರಾಟದಿಂದ ಜನಪ್ರಿಯರಾದ ಅವರು 1961 ರಲ್ಲಿ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ಸದಸ್ಯರಾಗಿ ಚುನಾಯಿತರಾದರು. ನಂತರ ಸಂಯುಕ್ತ ಸೋಶಿಯಲಿಸ್ಟ್ ಪಾರ್ಟಿಗೆ ಸೇರ್ಪಡೆಯಾದರು. 1967 ರ ಚುನಾವಣೆಯಲ್ಲಿ ಅವರು ಪಕ್ಷದ ಅಭ್ಯರ್ಥಿ ಕಾಂಗ್ರೆಸ್ ನ ಬಲಿಷ್ಠ ನಾಯಕ ಪಾಟೀಲ್ ಅವರನ್ನೇ ಸೋಲಿಸಿ ರಾಷ್ಟ್ರ ರಾಜಕೀಯದ ಗಮನ ಸೆಳೆದರು. '
ಜಾರ್ಜ್ ಫರ್ನಾಂಡಿಸ್ ಅಗಲಿಕೆ ನನಗೆ ಅಘಾತ ತಂದಿದೆ:ಸಿದ್ದರಾಮಯ್ಯ
ವಾಜಪೇಯಿ ಸರ್ಕಾರಕ್ಕೆ ಮುನ್ನುಡಿ ಬರೆದರು
ರೈಲ್ವೆ ನೌಕರರ ಹೋರಾಟದ ಮುಂಚುಣಿಯಲ್ಲಿದ್ದ ಜಾರ್ಜ್ 1975 ರಲ್ಲಿ ತುರ್ತು ಪರಿಸ್ಥತಿ ವಿರುದ್ಧ ಸಿಡಿದೆದ್ದರು . ಬರೋಡಾ ದಲ್ಲಿ ಡೈನಮೆಟ್ ಬಳಸಿ ಸ್ಫೋಟ ನಡೆಸಲು ಉದ್ದೇಶಿಸಿದ ಆರೋಪದ ಹಿನ್ನೆಲೆಯಲ್ಲಿ ಭೂಗತರಾದರು. 1976ರಲ್ಲಿ ಕೊಲ್ಕತ್ತಾದಲ್ಲಿ ಜಾರ್ಜ್ ಅವರ ಬಂಧನವಾಯಿತು. ಬಿಹಾರದಲ್ಲಿ ಅವರು ಸೆರೆಮನೆ ವಾಸ ಅನುಭವಿಸಿದರು . 1977 ರ ಮಹಾಚುನಾವಣೆಯಲ್ಲಿ ಜಾರ್ಜ್ ಜೈಲಿನಲ್ಲಿದ್ದೇ ಜನತಾಪರ್ಟಿಯ ಅಭ್ಯರ್ಥಿಯಾಗಿ ಬಿಹಾರದ ಮುಜಾಫರ್ ಪುರ ಕ್ಷೇತ್ರದಿಂದ ಸ್ಪರ್ಧಿಸಿದರು. 3 ಲಕ್ಷ ಮತಗಳ ಅಂತರದಲ್ಲಿ ಜಯಗಳಿಸಿ ಮೊರಾರ್ಜಿ ದೇಸಾಯಿ ಅವರ ಸರಕಾರದಲ್ಲಿ ಕೈಗಾರಿಕಾ ಸಚಿವರಾದರು. ಮೂಲ ಜನತಾ ಪಾರ್ಟಿ ಒಡೆದು ಹೋದ ಬಳಿಕ 80 ರ ಚುನಾವಣೆಯಲ್ಲಿ ಮುಜಾಫರ್ ಪುರ ಕ್ಷೇತ್ರದಲ್ಲಿ ಜನತಾ (ಎಸ್ ) ಪಕ್ಷದಿಂದ ಸ್ಪರ್ಧಿಸಿ ಗೆದ್ದರು. 84ರ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡರು. ಮತ್ತೆ ಬಿಹಾರದತ್ತ ಮುಖ ಮಾಡಿದ ಜಾರ್ಜ್ ಅವರು ಸತತ ಗೆಲುವು ಕಂಡರು . ಜನತಾದಳ ಸೇರಿದ ಅವರು ವಿಪಿ ಸಿಂಗ್ ಸರ್ಕಾರದಲ್ಲಿ ರೈಲ್ವೆ ಸಚಿವರಾದರು . ಜನತಾದಳ ಒಡೆದಾಗ ಸಮತಾ ಪರ್ಟಿ ಕಟ್ಟಿದ ಜಾರ್ಜ್ ಎನ್ ಡಿ ಎ ಸಂಚಾಲಕರಾಗಿ ವಾಜಪೇಯಿ ಅವರ ಅರಕಾರಕ್ಕೆ ಮುನ್ನುಡಿ ಬರೆದರು.
ಹುಟ್ಟು ಹೋರಾಟಗಾರ ಜಾರ್ಜ್ ನಡೆದು ಬಂದ ದಾರಿ, ಸಾಧನೆ
ಪತ್ರಿಕೆಗಳ ಸಂಪಾದಕರಾಗಿಯೂ ಕೆಲಸ ಮಾಡಿದ್ದರು
ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸೋನಿಯಾ ಗಾಂಧಿಯ ಫೋಟೋ ನೋಡಿ ಅದನ್ನು ಕಿತ್ತು ಬಿಸಾಕಿದ್ದರು ಜಾರ್ಜ್ ಫರ್ನಾಂಡಿಸ್. ಇಲ್ಲಿ ಇದನ್ನ ಒಬ್ಬ ಗುಲಾಮನೇ ಹಾಕಲು ಸಾಧ್ಯ ಎಂದು ಮಾಧ್ಯಮದ ಮುಂದೆ ಕುಟುಕಿದ್ದರು. ಅಷ್ಟು ನೇರ ಮತ್ತು ನಿಷ್ಠುರವಾದಿಯಾಗಿದ್ದರು ನಮ್ಮ ಜಾರ್ಜ್ ಫರ್ನಾಂಡಿಸ್. ನಮ್ಮ ದೇಶದ ಅತ್ಯತ್ತಮ ರಕ್ಷಣಾ ಸಚಿವರ ಸಾಲಿನಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲುವ ಇವರ ಕಾರ್ಯದಲ್ಲೇ, ಪೋಕರಣ್ ನಲ್ಲಿ ಅಣುಬಾಂಬ್ ಪರೀಕ್ಷೆ ಮಾಡಿದ್ದು. ಇವರು ದೇಶದ ರಕ್ಷಣಾ ಸಚಿವರಾಗಿದ್ದಾಗಲೇ ದೇಶ ಕಾರ್ಗಿಲ್ ಯುದ್ಧವನ್ನು ಗೆದ್ದಿದ್ದು. ಜಾರ್ಜ್ ಫರ್ನಾಂಡಿಸ್ ಅವರ ಕಾರಣದಿಂದಲೇ ಇವತ್ತು ದಕ್ಷಿಣ ಭಾರತವನ್ನು ಉತ್ತರ ಭಾರತಕ್ಕೆ ಸಂಪರ್ಕಿಸುವ ಕೊಂಕಣ ರೈಲು ಕರಾವಳಿಯಲ್ಲಿ ಓಡುತ್ತಿರುವುದು. 10 ಭಾಷಾ ಪ್ರವೀಣ್ಯತೆ ಹೊದಿದ್ದ ಜಾರ್ಜ್ ಫರ್ನಾಂಡಿಸ್ ಮರಾಠಿ, ಲ್ಯಾಟಿನ್ , ಉರ್ದು, ಹಿಂದಿ, ಇಂಗ್ಲಿಷ್ ಸೇರಿದಂತೆ 10 ಭಾಷೆ ಬಲ್ಲ ಜಾರ್ಜ್, ಕೊಂಕಣಿ ಯುವಕ್, ರೈತ ವಾಣಿ ಪತ್ರಿಕೆಗಳ ಸಂಪಾದಕರಾಗಿಯೂ ಕೆಲಸ ಮಾಡಿದ್ದರು.
ಜಾರ್ಜ್ ಗೆ ಉಸಿರು ಬಿಡುವುದೂ ಕಷ್ಟವಾಗಿತ್ತು
ಬೆಂಕಿ ಚೆಂಡಿನಂತಹ ಮಾತನಾಡುವ ಜಾರ್ಜ್ ಅವರ ಕೊನೆ ದಿನಗಳಲ್ಲಿ ಮಾತೇ ಇರಲಿಲ್ಲ. ಅವರನ್ನು ನೋಡುವುದು ಎಲ್ಲರಿಗೂ ಸಾಧ್ಯವಿರಲಿಲ್ಲ. ಜತೆಯಲ್ಲಿ ಹುಟ್ಟಿ ಬೆಳೆದ ಸೋದರರೂ ಕೂಡ ಅಣ್ಣನನ್ನು ನೋಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಸಮೂಹ ಚೈತನ್ಯದಲ್ಲಿಯೇ ತಮ್ಮ ಚೈತನ್ಯವನ್ನು ಕಂಡರಸುತ್ತಿದ್ದವರು ಕೊನೇ ದಿನಗಳಲ್ಲಿ ಒಬ್ಬಂಟಿಯಾದರು. ರಣಕಹಳೆಗಳ ಮೂಲಕ ದೇಶದ ರಾಜಕೀಯ ವ್ಯವಸ್ಥೆಯನ್ನು ಅಲುಗಾಡಿಸುತ್ತಿದ್ದವರಿಗೆ ಈಗ ಕೊಂಬು ಕಹಳೆ ತಮಟೆಗಳ ನಾದ ನಿನಾದಗಳ ಪರಿವೆಯೇ ಇರಲಿಲ್ಲ. ಸದಾ ಕಾಲ ಹಾಸಿಗೆಯ ಮೇಲೆಯೇ ವಾಸ. ನಿರಂತರವಾಗಿ ಸಿಗರೇಟ್ ಸೇದುತ್ತಿದ್ದವರಿಗೆ ಈಗ ಹೊಗೆಯಾಗಲೀ ಇಲ್ಲವೆ ಬೆಂಕಿಯಾಗಲೀ ಅಪಥ್ಯ. ಪಟ್ಟಭದ್ರ ಹಿತಾಸಕ್ತಿಗಳ ಕಿವಿ ತೂತಾಗುವಂತೆ ಅಬ್ಬರಿಸುತ್ತಿದ್ದವರಿಗೆ ಮಾತೆಂಬುದು ಜ್ಯೋತಿರ್ಲಿಂಗವಾಗಿತ್ತು. ಭೋರ್ಗರೆವ ಮಾತಿನ ನಡುವೆ ಪರಿಣಾಮಕ್ಕಾಗಿ ಸಂಗೀತ ಕಛೇರಿಯಲ್ಲಿ ತನಿ ಬಿಡುವ ರೀತಿಯಲ್ಲಿ ಸಿಗರೇಟಿನ ಹೊಗೆಯನ್ನು ಬಿಡುತ್ತಿದ್ದ ಜಾರ್ಜ್ ಗೆ ಉಸಿರುಬಿಡುವುದೂ ಕಷ್ಟವಾಗಿತ್ತು. ಜಾರ್ಜ್ ಪತ್ನಿ ಲೈಲಾ ಕಬೀರ್ ಕಣ್ಗಾವಲು ಸದಾ ಕಾಲ ಇರುತ್ತಿತ್ತು.
ಸಂಬಂಧಿ ಮೆಲ್ವಿನ್ ಪಿಂಟೊ ಹೇಳುವಂತೆ
ಜಾರ್ಜ್ ಫರ್ನಾಂಡಿಸ್ ಅವರ ಸಂಬಂಧಿ ಮೆಲ್ವಿನ್ ಪಿಂಟೊ ಜಾರ್ಜ್ ಅವರ ಬಗ್ಗೆ ಹೇಳುವುದು ಹೀಗೆ....ಜಾರ್ಜ್ ಬಾಲ್ಯದಿಂದಲೂ ಅನ್ಯಾಯದ ವಿರುದ್ಧ ಸಿಡಿದೇಳುವ ವ್ಯಕ್ತಿತ್ವ ಹೊಂದದ್ದರು. ವಲ್ಲದ ಮನಸ್ಸಿನಿಂದ ತಂದೆಯವರ ಒತ್ತಾಯಕ್ಕೆ ಮಣಿದು, ಸೆಮಿನರಿ ಶಿಕ್ಷಣ ಪಡೆಯಲು ತೆರಳಿದ್ದರು. ಆದರೆ ಅಲ್ಲಿಯ ತಾರತಮ್ಯ ವ್ಯವಸ್ಥೆಯಿಂದ ಬೇಸತ್ತು ಮನೆಗೆ ಹಿಂದಿರುಗಿದ್ದರು. ಅಭಿವೃದ್ಧಿ ಹರಿಕಾರರಾದ ಜಾರ್ಜ್ ದೇಶಕ್ಕೆ ಮಾತ್ರವಲ್ಲದೆ ವಿಶ್ವ ಮಾನವರಾಗಿದ್ದರು. ದೇಶದ ರಾಜಕಾರಣಿಗಳ ಪೈಕಿ ಭ್ರಷ್ಟಮುಕ್ತ ರಾಜಕೀಯ ಮುತ್ಸದ್ದಿ ಜಾರ್ಜ್. ಇವರ ರಾಜಕೀಯ ಜೀವನದಲ್ಲಿ ಇವರನ್ನು ರಾಜಕೀಯವಾಗಿ ಹತ್ಯೆ ನಡೆಸಲು ಸಂಚು ರೂಪಿಸಲಾಗಿತ್ತು. ಆದರೆ ಅದನೆಲ್ಲಾ ಮೀರಿ ಬೆಳೆದ ಜಾರ್ಜ್ ಫರ್ನಾಂಡಿಸ್ ಮಂಗಳೂರಿಗೆ ಅವರ ಕೊಡುಗೆ ಅಪಾರವಾದುದು. ತಮ್ಮ ರಾಜಕೀಯದಲ್ಲಿ ತನ್ನ ಸ್ವಆಸ್ತಿಯನ್ನು ಆರೋಗ್ಯ ಸೇವೆಗೆ ನೀಡಿದ್ದು, ಮಂಗಳೂರಿನ ಫಾದರ್ ಮುಲ್ಲರ್ ಕಿಡ್ನಿ ಫೌಂಡೇಶನ್ ಟ್ರಸ್ಟ್ ಗೆ ಸಂಪೂರ್ಣ ಆಸ್ತಿ ದಾನ ಮಾಡಿದ್ದರು ಎಂದು ಜಾರ್ಜ್ ಅವರನ್ನು ನೆನೆಸಿಕೊಳ್ಳುತ್ತಾರೆ ಮೆಲ್ವಿನ ಪಿಂಟೊ.