ಮೂಡುಬಿದಿರೆ: ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು
ಮಂಗಳೂರು, ಸೆಪ್ಟೆಂಬರ್ 19 : ಇಲ್ಲಿನ ಬಡಗಮಜಾರು ಗ್ರಾಮದಲ್ಲೇ ಕಳೆದ ಮೂರು ದಿನಗಳಿಂದ ಬೀಡು ಬಿಟ್ಟು ಕೋಳಿ, ನಾಯಿ, ದನ, ಕರುಗಳನ್ನು ತಿಂದು ಜನರ ನಿದ್ದೆ ಕೆಡಿಸಿದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬಡಗಮಜಾರು ಗ್ರಾಮದ ಮಂಜನ ಬೈಲು ಎಂಬಲ್ಲಿನ ಫ್ರಾನ್ಸಿಸ್ ಎಂಬವರ ಮನೆಯ ಬಳಿ ಅರಣ್ಯ ಇಲಾಖೆಯು ಇರಿಸಿದ ಬೋನಿನಲ್ಲಿ ಚಿರತೆಯೊಂದು ಬಿದ್ದಿದ್ದು, ಮೂಡುಬಿದಿರೆ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಇಂದು (ಮಂಗಳವಾರ) ಬೆಳಿಗ್ಗೆ ಕುದುರೆಮುಖ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.
ಮೂರು ದಿನಗಳ ಹಿಂದೆ ಫ್ರಾನ್ಸಿಸ್ ಅವರ ಮನೆಯ ಆಸುಪಾಸಿನಲ್ಲಿ ಚಿರತೆ ಒಡಾಡುತ್ತಿದ್ದು ಅಲ್ಲದೇ ಕೋಳಿಗಳನ್ನು ತಿಂದು ಹಾಕಿತ್ತು. ಈ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಮಾಹಿತಿ ಮೇರೆಗೆ ಮೂಡುಬಿದಿರೆ ಅರಣ್ಯಾಧಿಕಾರಿಗಳು ಶನಿವಾರ ಫ್ರಾನ್ಸಿಸ್ ಅವರ ಮನೆಯ ಬಳಿ ಬೋನನ್ನು ಇಟ್ಟಿದ್ದರು. ಭಾನುವಾರ ರಾತ್ರಿ ಚಿರತೆ ಬೋನಿಗೆ ಬಿದ್ದಿದೆ.
ಸ್ಥಳೀಯರ ನೆರವಿನೊಂದಿಗೆ ಮೂಡುಬಿದಿರೆ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ, ನಿರ್ದೇಶನದಂತೆ ಶಿರ್ತಾಡಿ ಉಪವಲಯ ಅರಣ್ಯಾಧಿಕಾರಿ ಚಂದ್ರಕಾಂತ್, ಹೊಸ್ಮಾರು ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಗಾಣಿಗ, ಅರಣ್ಯ ರಕ್ಷಕ ವಿನಾಯಕ, ಬಸಪ್ಪ, ಅರಣ್ಯ ವೀಕ್ಷಕ ಶಿವಾನಂದ ಬಗಲಿ, ವಾಹನ ಚಾಲಕ ಮಿಥುನ್ ಮತ್ತು ಸ್ಥಳೀಯರ ನೆರವಿನೊಂದಿಗೆ ಚಿರತೆಯನ್ನು ಹಿಡಿದು ಕುದುರೆಮುಖ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.
ಕೆಲವು ದಿನಗಳ ಹಿಂದೆ ಚಿರತೆಯು ರಾಮಮೂರ್ತಿ ಎಂಬವರ ಮನೆಯ ನಾಯಿ, ಬಾಲಕೃಷ್ಣ ರಾವ್ ಹಾಗೂ ವೆಂಕಪ್ಪ ಗೌಡ ಎಂಬವರ ದನಗಳನ್ನು ತಿಂದು ಹಾಕಿತ್ತು.