13 ವರ್ಷಗಳಿಂದ ಮಳೆಯಲ್ಲೇ ನೆನೆಯುತ್ತಿದ್ದಾನೆ ಕುಕ್ಕೆ ಸುಬ್ರಹ್ಮಣ್ಯ
ಮಂಗಳೂರು, ಜುಲೈ 3: ನಂಬಿದವರ ಇಷ್ಟಾರ್ಥವನ್ನು ಸಿದ್ಧಿಗೊಳಿಸುವ, ಅಭೀಷ್ಠೆಗಳನ್ನು ಪೂರೈಸುವ ದಕ್ಷಿಣ ಭಾರತದ ಪರಮ ಪವಿತ್ರ ಪುಣ್ಯಕ್ಷೇತ್ರ ಸುಬ್ರಹ್ಮಣ್ಯ ದೇವರು ಮಳೆಗೆ ಮೈ ಒಡ್ಡಿ 13 ವರ್ಷಗಳೇ ಕಳೆದುಹೋಗಿದೆ.
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಹಾಗೂ ರಾಜ್ಯದ ಅತೀ ಶ್ರೀಮಂತ ದೇವಸ್ಥಾನ ಕುಕ್ಕೆಶ್ರೀ ಸುಬ್ರಹ್ಮಣ್ಯದ ಸನ್ನಿಧಿ ಮಳೆಗಾಲದಲ್ಲಿ ಸೋರಲಾರಂಭಿಸಿ ಹದಿಮೂರು ವರ್ಷಗಳಾಗಿವೆ. ಸುಬ್ರಹ್ಮಣ್ಯ ಸ್ವಾಮಿಯ ದೇವರ ಗರ್ಭಗುಡಿಯ ಸುತ್ತು ಪೌಳಿಯ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡಿದ್ದು, ಪ್ರತೀ ಮಳೆಗಾಲದಲ್ಲೂ ಸುಬ್ರಹ್ಮಣ್ಯ ಸ್ವಾಮಿ ಮಳೆಯ ನೀರಿಗೆ ಮೈಯೊಡ್ಡುತ್ತಿದ್ದಾನೆ.
ಜುಲೈ 7ರಿಂದ ವಿಸ್ಟಾಡಾಮ್ ಕೋಚ್ ರೈಲಿನಲ್ಲಿ ಸಾಗುತ್ತಾ ಪಶ್ಚಿಮ ಘಟ್ಟದ ಸೌಂದರ್ಯ ಸವಿಯಿರಿ
ಈ ಅವ್ಯವಸ್ಥೆ ಆರಂಭವಾಗಿ 13 ವರ್ಷಗಳು ಕಳೆದಿದೆ. 13 ವರ್ಷದೊಳಗೆ ಕ್ಷೇತ್ರದಲ್ಲಿ ಬಂದ ಎಲ್ಲಾ ವ್ಯವಸ್ಥಾಪನಾ ಸಮಿತಿಗಳೂ ಮುಜಾರಾಯಿ ಇಲಾಖೆಗೆ ದುರಸ್ಥಿ ಸರಿಪಡಿಸುವಂತೆ ಕ್ರಿಯಾ ಯೋಜನೆ ಮಾಡಿ ಕಳುಹಿಸಿದೆ. ಈ ಮೊದಲು 7 ಕೋಟಿ ರೂಪಾಯಿ ಮೌಲ್ಯದ ಕ್ರಿಯಾ ಯೋಜನೆ ಮಾಡಿದರೂ ಆನಂತರದ ಸಮಿತಿಗಳು 16 ಕೋಟಿಯ ವೆಚ್ಚದಲ್ಲಿ ಶಾಶ್ವತವಾದ ಪರಿಹಾರ ಮಾಡುವ ಕ್ರಿಯಾ ಯೋಜನೆ ರೂಪಿಸಿತ್ತು.
ಆದರೆ ಅಂದಿನಿಂದ ಇಂದಿನವರೆಗೆ ಮುಜರಾಯಿ ಇಲಾಖೆ ಮಾತ್ರ ಇತ್ತ ಗಮನವನ್ನೇ ಹರಿಸಿಲ್ಲ. ಹೀಗಾಗಿ ಈ ಬಾರಿಯ ಮಳೆಗಾಲದಲ್ಲೂ ಸುಬ್ರಹ್ಮಣ್ಯ ಸ್ವಾಮಿಗೆ ಬೆಚ್ಚನೆಯ ಛಾವಣಿ ಇಲ್ಲದೆ, ಮಳೆ ನೀರಿನ ಹೊಡೆತಕ್ಕೆ ಭಕ್ತರಿಗೆ ದರ್ಶನ ನೀಡಬೇಕಿದೆ.
ರಾಜ್ಯದ ಶ್ರೀಮಂತ ದೇವಸ್ಥಾನದಲ್ಲೇ ಈ ರೀತಿಯ ದುರಾವಸ್ಥೆಗೆ ಕಾರಣವಾದ ವ್ಯವಸ್ಥೆಯ ವಿರುದ್ಧ ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ಕೋಟ್ಯಂತರ ಭಕ್ತರ ಆರಾಧ್ಯಮೂರ್ತಿ ಕುಕ್ಕೆ ಸುಬ್ರಹ್ಮಣ್ಯನಿಗೆ ಮಳೆಯಲ್ಲಿ ನೆನೆಯಬೇಕಾದ ಸ್ಥಿತಿಬಂದಿದ್ದು, ತನ್ನನ್ನು ನಂಬಿ ಬಂದ ಭಕ್ತರ ಸಂಕಷ್ಟಗಳನ್ನು ದೂರಮಾಡುವ ಸುಬ್ರಹ್ಮಣ್ಯ ಮಳೆಯಲ್ಲೇ ನೆನಯಬೇಕಿದೆ.
ಕ್ಷೇತ್ರದ ಗರ್ಭಗುಡಿ ಸುತ್ತುಪೌಳಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಕಳೆದ 13 ವರ್ಷಗಳಿಂದ ಗರ್ಭಗುಡಿಯ ಸುತ್ತಪೌಳಿಯು ಮಳೆಯಿಂದ ಸೋರುತ್ತಿದ್ದು, ಪ್ಲಾಸ್ಟಿಕ್ ಹೊದಿಕೆಯಲ್ಲೇ ಮಳೆಗಾಲವನ್ನು ಕಳೆಯಲಾಗುತ್ತಿದೆ. ಈ ಬಾರಿ ಮತ್ತೆ ಪ್ಲಾಸ್ಟಿಕ್ ಹೊದಿಕೆಯೇ ಅನಿವಾರ್ಯವಾಗಿದೆ. ಈ ಹಿಂದೆ ಪ್ಲಾಸ್ಟಿಕ್ ಹೊದಿಕೆಯ ಬಗ್ಗೆ ಭಕ್ತರಿಂದ ಆಕ್ರೋಶ ಕೇಳಿಬಂದಾಗ ವೈದಿಕ ಚಿಂತನೆ ಮೂಲಕ ಸುತ್ತುಪೌಳಿ ತೆಗೆಯುವ ನಿರ್ಧಾರದ ಬಗ್ಗೆ ಚಿಂತಿಸೋದಾಗಿ ಇಲಾಖೆ ಹೇಳಿತ್ತು.
ಕಳೆದ 13 ವರ್ಷಗಳಿಂದ ಇದೇ ಮಾತು ಮುಂದುವರೆದಿದ್ದು, ಈವರೆಗೂ ಸುಬ್ರಹ್ಮಣ್ಯನಿಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಈ ಹಿನ್ನಲೆ ಈ ಬಾರಿ ಮತ್ತೊಮ್ಮೆ ಕುಕ್ಕೆ ಹಿತರಕ್ಷಣಾ ಸಮಿತಿಯಿಂದ ಮತ್ತೆ ಧಾರ್ಮಿಕ ದತ್ತಿ ಇಲಾಖೆಗೆ ಮನವಿ ಮಾಡಿದೆ.
ರಾಜ್ಯದ ಬೊಕ್ಕಸಕ್ಕೆ ಪ್ರತಿವರ್ಷ ಭಾರೀ ಆದಾಯ ನೀಡುವ ಕುಕ್ಕೆ ದೇವಸ್ಥಾನಕ್ಕೆ ಸರ್ಕಾರದಿಂದ ವಿಶೇಷ ಅನುದಾನವೇನೂ ಬೇಕಾಗಿಲ್ಲ. ದೇವಸ್ಥಾನದ ಆದಾಯವನ್ನೇ ಬಳಸಿ ದುರಸ್ತಿ ಕಾರ್ಯ ಮಾಡಬಹುದಾಗಿದೆ. ಆದರೆ ಅದೂ ಸಾಧ್ಯವಾಗದಿರುವುದು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾನೋ ಅಥವಾ ಪರಿಹಾರ ಕಾಣುವ ಯೋಗ ಕುಕ್ಕೆಯ ಸ್ವಾಮಿಗಿಲ್ಲವೋ ಎಂಬುವುದನ್ನು ಕಾಲವೇ ಉತ್ತರಿಸಬೇಕಿದೆ.