ಲಾಕ್ಡೌನ್ ನಡುವೆಯೂ ಧರ್ಮಸ್ಥಳದಲ್ಲಿ ಭಕ್ತರ ದಂಡು
ಮಂಗಳೂರು, ಜೂನ್ 18: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ಡೌನ್ ಮುಂದುವರೆದಿದೆ. ಬೆಳಗ್ಗೆ 10 ಗಂಟೆಯ ಬಳಿಕ ಪೊಲೀಸರು ನಾನಾ ಕಡೆಗಳಲ್ಲಿ ನಾಕಾಬಂಧಿ ಹಾಕಿದ್ದು ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಾಗುತ್ತಿದೆ. ಆದರೆ ಇತರ ಜಿಲ್ಲೆಗಳು ಅನ್ಲಾಕ್ ಆಗುತ್ತಿದ್ದಂತೆಯೇ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭಕ್ತರ ದಂಡು ಹರಿದುಬರುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗಗಳಲ್ಲಿ ಪೊಲೀಸರು ನಾಕಾಬಂಧಿ ಹಾಕಿದ್ದರೂ, ಪ್ರವಾಸಿಗರು ಮಾತ್ರ ಜಿಲ್ಲೆಯತ್ತ ಬರುತ್ತಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥಸ್ವಾಮಿಯ ದರ್ಶನಕ್ಕೂ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದ್ದು, ಸಾವಿರಕ್ಕೂ ಹೆಚ್ಚು ಭಕ್ತರು ಪ್ರತಿದಿನ ಕ್ಷೇತ್ರದತ್ತ ಆಗಮಿಸುತ್ತಿದ್ದಾರೆ.
ಜೂ. 22ರಿಂದ ಮಂತ್ರಾಲಯಕ್ಕೆ ಭೇಟಿ ಕೊಡಿ, ಸಮಯದ ವಿವರ
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ನೇತ್ರಾವತಿ ನದಿ ಮೈದುಂಬಿ ಹರಿಯುತ್ತಿದೆ. ರಭಸವಾಗಿ ಹರಿಯುತ್ತಿರುವ ನೇತ್ರಾವತಿ ನದಿಯಲ್ಲಿ ತೀರ್ಥ ಸ್ನಾನವನ್ನು ಭಕ್ತರು ಮಾಡುತ್ತಿದ್ದು, ಆ ಬಳಿಕ ದೇವಸ್ಥಾನದಲ್ಲಿ ದೇವರ ದರ್ಶನ ಮಾಡುತ್ತಿದ್ದಾರೆ. ಭಕ್ತರಿಗೆ ದೇವರ ಕೆಲ ಸೇವೆಗಳೂ ಆರಂಭಗೊಂಡಿದ್ದು, ಈ ಹಿನ್ನಲೆಯಲ್ಲಿ ಭಕ್ತರ ಸಂಖ್ಯೆಯೂ ಜಾಸ್ತಿಯಾಗಿದೆ.
ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಕರಾವಳಿಯ ದೇವಸ್ಥಾನದತ್ತ ಬರುತ್ತಿದ್ದಾರೆ. ಧರ್ಮಸ್ಥಳ ಹೊರತುಪಡಿಸಿ ಬೇರೆ ಎಲ್ಲಾ ಕಡೆಗಳಲ್ಲೂ ಭಕ್ತರಿಗೆ ದೇವಸ್ಥಾನದ ಪ್ರವೇಶಕ್ಕೆ ತಡೆಯಿದ್ದು, ಧರ್ಮಸ್ಥಳದಲ್ಲಿ ದರ್ಶನ ಮುಗಿಸಿ ತಮ್ಮೂರಿನತ್ತ ತೆರಳುತ್ತಿದ್ದಾರೆ. ಧರ್ಮಸ್ಥಳ ದೇಗುಲದ ಒಳಭಾಗದಲ್ಲೂ ಭಕ್ತರಿಗೆ ಶೀಘ್ರ ದರ್ಶನಕ್ಕೆ ಮಾತ್ರ ವ್ಯವಸ್ಥೆ ಮಾಡಲಾಗಿದೆ. ವಸತಿ ಗೃಹದಲ್ಲೂ ಕೊವೀಡ್ ಮುನ್ನೆಚ್ಚರಿಕೆ ವಹಿಸಿ ರೂಂಗಳನ್ನು ನೀಡಲಾಗುತ್ತಿದೆ.
ರಾಜ್ಯ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಇತರ ದೇವಸ್ಥಾನಗಳಲ್ಲಿ ಭಕ್ತರಿಗೆ ಸರ್ಕಾರ ಇನ್ನೂ ಅವಕಾಶ ನೀಡಿಲ್ಲ. ಕೊರೊನಾ ಎರಡನೇ ಅಲೆ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಬೇರೆ ದೇವಸ್ಥಾನಗಳಲ್ಲೂ ಸರ್ಕಾರ ಅವಕಾಶ ನೀಡುವಂತೆ ಭಕ್ತರು ಮನವಿ ಮಾಡಿದ್ದಾರೆ.