ಆಶ್ಲೇಷ ಸೇವೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ದಂಡು
ಮಂಗಳೂರು, ಅಕ್ಟೋಬರ್ 12: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಷ್ಟೋ ತಿಂಗಳ ನಂತರ ಇಂದು ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಇಂದು ಆಶ್ಲೇಷ ನಕ್ಷತ್ರದ ಹಿನ್ನೆಲೆಯಲ್ಲಿ ಆಶ್ಲೇಷ ಬಲಿ ಸೇವೆ ನೆರವೇರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು.
ಕೊರೊನಾ ಲಾಕ್ ಡೌನ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಕ್ಷೇತ್ರದ ಪ್ರಮುಖ ಸೇವೆಗಳಾದ ಆಶ್ಲೇಷ ಹಾಗೂ ಸರ್ಪ ಸಂಸ್ಕಾರ ಸೇವೆಗಳನ್ನು ನಿಗದಿತ ಸಂಖ್ಯೆಯಲ್ಲಿ ಮಾತ್ರ ನೆರವೇರಿಸಲಾಗುತ್ತಿದೆ. ದಿನಕ್ಕೆ ಕೇವಲ 150 ಆಶ್ಲೇಷ ಬಲಿ ಸೇವೆಯನ್ನು ನೆರವೇರಿಸಲು ಅವಕಾಶ ನೀಡಲಾಗಿದೆ. ಆದ್ದರಿಂದ ಸೇವೆಯ ಚೀಟಿ ಪಡೆಯಲು ಭಕ್ತರು ನಿನ್ನೆ ರಾತ್ರಿಯಿಂದಲೇ ಸೇವಾ ಕೌಂಟರ್ ನಲ್ಲಿ ಸಾಲುಗಟ್ಟಿ ನಿಂತಿದ್ದರು.
ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಲ್ಲಾ ಸೇವೆಗಳು ಪುನರಾರಂಭ
ಮೊದಲ 150 ಜನರಿಗೆ ಮಾತ್ರ ಸೇವೆ ನೆರವೇರಿಸುವ ಅವಕಾಶವನ್ನು ನೀಡಲಾಗಿತ್ತು. ಹೀಗಾಗಿ ಭಕ್ತರು ಕೌಂಟರ್ ತೆರೆಯುವ ಮುನ್ನವೇ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದ ದೃಶ್ಯ ಕಂಡುಬಂತು. ಇಂದು ಮತ್ತೆ ಆಶ್ಲೇಷ ಸೇವೆ ನೆರವೇರಿಸಲು ಇನ್ನಷ್ಟು ಮಂದಿ ಕ್ಷೇತ್ರಕ್ಕೆ ಬಂದಿದ್ದರು. ಆದರೆ ನಿಗದಿತ ಸೇವೆಗಳು ಮೊದಲೇ ಬುಕ್ ಆಗಿದ್ದ ಕಾರಣ ದೇವರ ದರ್ಶನ ಪಡೆದು ವಾಪಸ್ ತೆರಳಿದರು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೆಪ್ಟೆಂಬರ್ 14ರಿಂದ ದೇವರ ಸೇವೆಗಳನ್ನು ಆರಂಭಿಸಲಾಗಿತ್ತು. ಮುಜರಾಯಿ ಇಲಾಖೆಯ ಆದೇಶದಂತೆ ಸೂಕ್ತ ಮುಂಜಾಗೃತಾ ಕ್ರಮದೊಂದಿಗೆ, ನಿಗದಿತ ಭಕ್ತರೊಂದಿಗೆ ಸೇವೆಗಳ ಪುನರಾರಂಭವನ್ನು ಮಾಡಲಾಗಿತ್ತು. ಇದೀಗ ತಿಂಗಳು ಕಳೆದ ನಂತರ ದೇಗುಲದಲ್ಲಿ ಭಕ್ತರ ಸಂಖ್ಯೆ ಏರಿಕೆಯಾಗಿದೆ. ಕೊರೋನಾ ಲಾಕ್ ಡೌನ್ ಅನ್ ಲಾಕ್ ಜಾರಿಗೆ ಬಂದ ಬಳಿಕ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆಯಲ್ಲೂ ಕ್ರಮೇಣ ಹೆಚ್ಚಳ ಕಂಡು ಬರುತ್ತಿದೆ.