ಮಂಗಳೂರು: 150 ಲಂಗೂರ್ ಗಳನ್ನು ತಿಂದು ತೇಗಿದ ಬೇಟೆಗಾರರು
ಮಂಗಳೂರು, ಅಕ್ಟೋಬರ್ 25: ಲಂಗೂರ್ ಅಥವಾ ಮುಸುವ ಇತ್ತೀಚಿನ ದಿನಗಳಲ್ಲಿ ಅವನತಿಯ ಅಂಚಿಗೆ ಸರಿಯುತ್ತಿದೆ. ಮಾನವನ ಮಾಂಸದ ಲಾಲಸೆಗೆ ಈ ಲಂಗೂರ್ ಗಳು ಬಲಿಯಾಗುತ್ತಿವೆ.
ಕಾಡುಗಳು ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ನಾಡು ಸೇರುತ್ತಿರುವ ಈ ಲಂಗೂರ್ ಗಳು ಬೇಟೆಗಾರರ ಗುರಿಗೆ ಸಿಕ್ಕಿ ಸಾಯುತ್ತಿವೆ. ಹೀಗೆ ಆಹಾರ ಅರಸಿ ನಾಡಿಗೆ ಬಂದ ಲಂಗೂರ್ ಗಳ ಕುಟುಂಬವನ್ನೇ ಕೊಂದು ತಿಂದು ತೇಗಿದ ಘಟನೆ ಬೆಳ್ತಂಗಡಿಯಲ್ಲಿ ಬೆಳಕಿಗೆ ಬಂದಿದೆ.
ಪಶ್ಚಿಮ ಘಟ್ಟದ ಕೆಲವು ಭಾಗಗಳಲ್ಲಿ ಕಂಡು ಬರುವ ಈ ಲಂಗೂರ್ ಅಥವಾ ಮುಸುವಗಳ ಕುಟುಂಬವೊಂದು ಇತ್ತೀಚೆಗೆ ಬೆಳ್ತಂಗಡಿ ತಾಲ್ಲೂಕಿನ ಪದ್ಮುಂಜ ಎಂಬಲ್ಲಿಗೆ ಕೆಲ ತಿಂಗಳ ಹಿಂದೆ ವಲಸೆ ಬಂದಿದ್ದವು. ಇಲ್ಲಿನ ಮಲೆಂಗಲ್ಲು ಕಾಡಿನಲ್ಲಿ 150 ಕ್ಕೂ ಹೆಚ್ಚು ಮುಸುವಗಳು ಬೀಡು ಬಿಟ್ಟಿದ್ದವು.
ದೇವರಕಾಡಲ್ಲಿ ನೆಲೆನಿಂತಿದ್ದ ಲಂಗೂರ್ ಗಳು
ಪದ್ಮುಂಜ ದಲ್ಲಿ ಉಮಾಮಹೇಶ್ವರ ದೇವಸ್ಥಾನದವಿರುವುದರಿಂದ ಈ ಕಾಡಿಗೆ ದೇವರ ಕಾಡು ಎಂಬ ಹೆಸರೂ ಇದೆ. ಕೃಷಿಕರಿಗೇನು ತೊಂದರೆ ನೀಡದ ಈ ಪ್ರಾಣಿಗಳು ಕಾಡಿನ ಮರದಲ್ಲಿರುವ ಹೂ, ಹಣ್ಣು, ಬಳ್ಳಿಗಳನ್ನಷ್ಟೇ ತಿಂದು ಬದುಕುತ್ತಿದ್ದವು .
ಮುಸುವಗಳ ಮಾರಣಹೋಮ
ಮುಸುವಗಳ ದೊಡ್ಡ ಹಿಂಡು ದೇವರ ಕಾಡಿನಲ್ಲಿರೋದನ್ನು ಅರಿತ ಬೇಟೆಗಾರರು ದೇವರ ಕಾಡಲ್ಲಿ ಮುಸುವ ಗಳ ಮಾರಣಹೋಮ ನಡೆಸಿದ್ದಾರೆ. ಮುಸುವಗಳನ್ನು ಸಿಕ್ಕ ಸಿಕ್ಕಲ್ಲಿ ಗುಂಡು ಹೊಡೆದು ಮಂಸಮಾಡಿ ತಿಂದು ತೇಗಿದ್ದಾರೆ. ಬೇಟೆಗಾರರ ಅಮಾನುಷ ಕೃತ್ಯದ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಅರಣ್ಯ ಇಲಾಖೆ ಮಾತ್ರ ಕಣ್ಣಿದ್ದೂ ಕುರುಡಾಗಿ ಕುಳಿತಿದೆ.
150ರಲ್ಲಿ ಉಳಿದಿದ್ದು ಬೆರಳೆಣಿಕೆ
ಈ ದೇವರ ಕಾಡಿನಲ್ಲಿ 150 ರಷ್ಟಿದ್ದ ಮುಸುವಗಳ ಹಿಂಡಿನಲ್ಲಿ ಈಗ ಉಳಿದುಕೊಂಡಿರೋದು ಕೇವಲ ಬೆರಳೆಣಿಕೆಯ ಲಂಗೂರ್ ಗಳು ಮಾತ್ರ. ಅವುಗಳಿಗೂ ಬೇಟೆಗಾರರು ಈಗ ಸ್ಕೆಚ್ ಹಾಕಿದ್ದಾರೆ. ಹೀಗೆ ದೇವರ ಕಾಡಿಗೆ ನೆಮ್ಮದಿಯನ್ನರಿಸಿ ಬಂದ ಲಂಗೂರ್ ಗಳಿಗೆ ಈಗ ನಿಲ್ಲಲು ನೆಲೆಯಿಲ್ಲದಂತಾಗಿದೆ. ಬೇಟೆಗಾರರ ಬಂದೂಕಿನ ನಳಿಗೆಗೆ ಮುಸುವ ಸಂತತಿಯೇ ನಾಶವಾಗಿದೆ.
ಮಾನವನ ಕ್ರೂರ ಕೃತ್ಯಕ್ಕೆ ಬಲಿ
ಈ ನಡುವೆ ಮುಸುವ ಒಂದು ಗುಂಡೇಟಿನಿಂದ ಗಾಯಗೊಂಡು ಜನವಸತಿ ಪ್ರದೇಶಕ್ಕೆ ಬಂದು ಬಿದ್ದಿದೆ. ಕಾಡಿನಲ್ಲಿ ಮರದಲ್ಲಿ ಅತ್ತಿಂದ ಇತ್ತ ಹಾರುತ್ತಿದ್ದ ಮುಸುವ ಮಾನವನ ಕ್ರೂರ ಕೃತ್ಯಕ್ಕೆ ಬಲಿಯಾಗಿ ಸೊಂಟದ ಭಾಗವನ್ನೇ ಕಳೆದುಕೊಂಡಿದೆ. ಸ್ಥಳಿಯರು ಗಾಯಗೊಂಡಿದ್ದ ಆ ಮುಸುವವನ್ನು ಆರೈಕೆ ಮಾಡಿ ಈಗ ಆಸ್ಪತ್ರೆ ಗೆ ಸಾಗಿಸಿದ್ದಾರೆ.