ಪಶ್ಚಿಮಘಟ್ಟ ಸಾಲಿನಲ್ಲಿ ಹೆಚ್ಚಿದೆ ಭೂಕುಸಿತ; ಮೊದಲಿನಂತಾಗುವುದೆ ಬಾಳು?
ಮಂಗಳೂರು ಆಗಸ್ಟ್ 19: ಕರಾವಳಿ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಈ ಬಾರಿ ಸುರಿದ ಮಳೆಗೆ ಭಾರೀ ಅನಾಹುತಗಳೇ ಸಂಭವಿಸಿವೆ. ಒಂದೆಡೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ ಸೇರಿದಂತೆ ಇತರ ಭಾಗಗಳಲ್ಲಿ ಪ್ರವಾಹ ಪ್ರರಿಸ್ಥಿತಿ ಸೃಷ್ಟಿಯಾದರೆ, ಇನ್ನೊಂದೆಡೆ ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿ, ಕುಮಾರಧಾರಾ ನದಿ ಉಕ್ಕಿಹರಿದಿವೆ. ಗುಡ್ಡಗಳೇ ಕುಸಿದು ಜನವಸತಿ ಪ್ರದೇಶಗಳೂ ನಾಶವಾಗಿವೆ. ಯಾರೂ ಊಹಿಸದಂತೆ ಪ್ರಕೃತಿ ತನ್ನ ಪ್ರಕೋಪ ತೋರಿದೆ.
ಈ ಬಾರಿ ಮಳೆಗೆ ಪಶ್ಚಿಮ ಘಟ್ಟ ಸಾಲಿನ ಸುಮಾರು 9 ಬೆಟ್ಟಗಳಲ್ಲಿ ಬೃಹತ್ ಕುಸಿತ ಕಂಡುಬಂದಿದೆ. ಬೆಟ್ಟದ ತಪ್ಪಲು ಪ್ರದೇಶದಲ್ಲಿ ನೆಮ್ಮದಿಯಿಂದ ಬದುಕುತಿದ್ದವರು ಪ್ರಕೃತಿಯ ರುದ್ರ ನರ್ತನ ಕಂಡು ನಲುಗಿಹೋಗಿದ್ದಾರೆ. ಜೀವ ಉಳಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ಬಂದವರು ಈಗ ಮೂಲಸ್ಥಾನಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.
ಪುತ್ತೂರು ಬಳಿಕ ಸುಳ್ಯದಲ್ಲಿ ಬಾಯಿ ತೆರೆದ ಭೂಮಿ, ಜನರಲ್ಲಿ ಆತಂಕ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪ್ರದೇಶದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬೆಟ್ಟ, ಎಳನೀರು, ಬಂಗ್ರಪಲ್ಕೆ, ಗಾಳಿಗಂಡಿ ಬೆಟ್ಟ, ಇರೆಬೈಲು ಬೆಟ್ಟ, ಮೈದಾಡಿ ಬೆಟ್ಟ, ಬಳ್ಳಾಲರಾಯನ ದುರ್ಗ, ಅಗಲ್ದಬೆಟ್ಟ, ಬಣ್ಣಕಲ್ಲು ಬೆಟ್ಟ, ಕಡ್ತಿಕಲ್ಲು ಬೆಟ್ಟದಲ್ಲಿ ಭಾರೀ ಭೂಕುಸಿತ ಸಂಭವಿಸಿದೆ.
ನೇತ್ರಾವತಿಯ ಉಪನದಿಗಳ ಪಥವೂ ಬದಲಾಗಿದೆ. ಹಲವೆಡೆ ಹೊಸ ಜಲಪಾತ, ನದಿಮೂಲಗಳ ಉಗಮವಾಗಿದೆ. ಪರಿಸರ ತಜ್ಞರ ಪ್ರಕಾರ ಪಶ್ಚಿಮಘಟ್ಟದ 9 ಬೆಟ್ಟಗಳಲ್ಲಿ 456 ಪ್ರದೇಶಗಳಲ್ಲಿ ಬೃಹತ್ ಪ್ರಮಾಣದಲ್ಲಿ ಬಂಡೆ ಸಹಿತ ಮಣ್ಣು ಕುಸಿತವಾಗಿದ್ದು, ಬೆಟ್ಟ ಪ್ರದೇಶಲ್ಲಿ ಬರೆ ಎಳೆದಂತೆ ಕಾಣುತ್ತಿದೆ.
ಜಲ ಸ್ಫೋಟಗೊಂಡು ಗುಡ್ಡ ಕುಸಿತವಾಗಿದ್ದಷ್ಟೇ ಅಲ್ಲ, ಬೆಟ್ಟದ ಮೇಲಿಂದ ಭಾರೀ ಪ್ರಮಾಣದಲ್ಲಿ ಹರಿದು ಬರುವ ನೀರು, ಮಣ್ಣಿನ ರಭಸಕ್ಕೆ ಬೃಹತ್ ಮರಗಳು ತರಗೆಲೆಗಳಂತೆ ಬುಡಸಮೇತ ಕೆಳಗೆ ಜಾರಿ ಬಂದಿವೆ. ಇದರಿಂದ ನೇತ್ರಾವತಿಯ ಪ್ರಮುಖ ನದಿಮೂಲಗಳಾದ ಮೃತ್ಯುಂಜಯ, ಅಣಿಯೂರುಹಳ್ಳ, ಸುನಾಳಹೊಳೆ, ನೆರಿಯಹೊಳೆ, ಎಳನೀರು ಹೊಳೆ ಪಾತ್ರಗಳೇ ಬದಲಾಗಿವೆ.
ಗುಡ್ಡಕಂಪನಕ್ಕೆ ಕೆಲವು ನೀರಿನ ಒರತೆಗಳು ಮುಚ್ಚಿ, ಬೇರೊಂದು ಪ್ರದೇಶದ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿರುವುದು ಕಂಡುಬಂದಿದೆ. ನಂದಿ ಬೆಟ್ಟ, ಪಾತಾಲಿಕೆ ಅರಣ್ಯ ವ್ಯಾಪ್ತಿಯಲ್ಲಿ ಹೊಸ ಹೊಳೆಯೇ ಸೃಷ್ಟಿಯಾಗಿದೆ.
ಪಶ್ವಿಮಘಟ್ಟದ ಪ್ರಮುಖ ಬೆಟ್ಟಗಳಲ್ಲಿ ಬೃಹತ್ ಪ್ರಮಾಣದ ಕುಸಿತ ಸಂಭವಿಸಿದ್ದರಿಂದ ಈ ಪ್ರದೇಶದ ಕೆಲವು ವಸತಿ ಪ್ರದೇಶಗಳ ಮರು ನಿರ್ಮಾಣ ಕಷ್ಟಸಾಧ್ಯ ಎಂದು ಹೇಳಲಾಗಿದೆ. ಚಾರ್ಮಾಡಿ ಘಾಟಿ ಪ್ರದೇಶದ ಬಿದಿರುತಳ, ಅಲೆಖಾನ್, ಹೊರಟ್ಟಿ, ಮಲೆಮನೆ, ಬಾವಳೆ, ಬಾಲೂರು, ಮೇಗೂರಿನ 1 ಸಾವಿರ ಎಕರೆ ವ್ಯಾಪ್ತಿ ಪ್ರದೇಶದಲ್ಲಿ ಮಣ್ಣು ತುಂಬಿಕೊಂಡಿದ್ದು, ಮನೆಗಳು ಹೂತುಹೋಗಿವೆ. ಈ ಪ್ರದೇಶದ ನಿವಾಸಿಗಳ ಪ್ರಕಾರ ಕುಸಿತಗೊಂಡ ಜನವಸತಿ ಪ್ರದೇಶ ಮರು ನಿರ್ಮಾಣ ಅಸಾಧ್ಯವೆನಿಸಿದೆ.