ಬಂಟ್ವಾಳದಲ್ಲಿ ಹೆಲ್ಮೆಟ್ ಧರಿಸದ ಯುವಕರಿಗೆ ಗುಲಾಬಿ ನೀಡಿ ಬುದ್ಧಿವಾದ ಹೇಳಿದ ಮಹಿಳಾ ಎಸ್ಸೈ
ಮಂಗಳೂರು, ಫೆಬ್ರವರಿ 08: ಇತ್ತೀಚಿನ ದಿನಗಳಲ್ಲಿ ಬೈಕ್ ನಲ್ಲಿ ಸುತ್ತುವ ಯುವಕರಿಗೆ ಹೆಲ್ಮೆಟ್ ಧರಿಸುವುದೆಂದರೆ ಅಲರ್ಜಿ. ಬೈಕ್ ನಲ್ಲಿ ಝೂಮ್ ಝುಮ್ ಎಂದು ರಸ್ತೆಯಲ್ಲಿ ಶರವೇಗದೊಂದಿಗೆ ಸಾಗುವುದು, ರಸ್ತೆ ಮಧ್ಯ ಸಂಚಾರಿ ಪೊಲೀಸರು ಅಡ್ಡ ಹಾಕಿದರೆ ತಪ್ಪಿಸಿಕೊಂಡು ಹೋಗುವುದೆಂದರೆ ಯುವಕರಿಗೆ ಏನೋ ಥ್ರಿಲ್.
ಹೆಲ್ಮೆಟ್ ಧರಿಸುವ ಅನಿವಾರ್ಯತೆಯ ಬಗ್ಗೆ ಎಷ್ಟು ಜಾಗೃತಿ ಮೂಡಿಸಿದರೂ ಯುವಕರಿಗೆ ನಿರ್ಲಕ್ಷ್ಯ.ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಹೆಲ್ಮೆಟ್ ಧರಿಸದೇ ಸುತ್ತಾಡುವ ಯವಕರಿಗೆ ತಕ್ಕ ಪಾಠ ಕಲಿಸಿದ್ದಾರೆ.
ಹೆಲ್ಮೆಟ್ ಧರಿಸದೇ ಬೈಕ್ ನಲ್ಲಿ ಸುತ್ತಾಡುತ್ತಿದ್ದ ಯುವಕರನ್ನ ಅಡ್ಡ ಹಾಕಿದ ಮಹಿಳಾ ಸಬ್ ಇನ್ಸ್ ಪೆಕ್ಟರ್ ಒಬ್ಬರು ಯುವಕನಿಗೆ ಗುಲಾಬಿ ಕೊಟ್ಟು, ಇನ್ನಾದರೂ ಹೆಲ್ಮೆಟ್ ಧರಿಸಿ ಸಂಚರಿಸು ಎಂದು ಬುದ್ಧಿವಾದ ಹೇಳಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ. ಇಲ್ಲಿಯ ಮಡಂತ್ಯಾರಿನಲ್ಲಿ ಈ ಘಟನೆ ನಡೆದಿದ್ದು, ಈ ಕುರಿತ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ಯುವಕರಿಬ್ಬರು ಹಲವು ಬಾರಿ ಹೆಲ್ಮೆಟ್ ಧರಿಸದೇ ಸುತ್ತಾಡುತ್ತಿದ್ದರು. ಯಥಾ ಪ್ರಕಾರ ನಿನ್ನೆ ಗುರುವಾರ (ಫೆ.07) ಮಡಂತ್ಯಾರು ಪೇಟೆಯಲ್ಲಿ ಈ ಯುವಕರಿಬ್ಬರು ಬೈಕ್ ನಲ್ಲಿ ಬರುತ್ತಿರುವುದನ್ನು ಗಮನಿಸಿದ ಸೌಮ್ಯರಾಣಿ ಬೈಕನ್ನು ನಿಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್ಸೈ ಸೌಮ್ಯ ಅವರು ಬೈಕ್ ನಲ್ಲಿದ್ದ ಯುವಕನಿಗೆ ಗುಲಾಬಿ ಕೊಟ್ಟು ಬುದ್ಧಿ ಮಾತು ಹೇಳಿದ್ದಾರೆ. ಇನ್ನಾದರೂ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಸಾರ್ವಜನಿಕರು ಕೂಡ ಈ ಘಟನೆಗೆ ಸಾಕ್ಷಿಯಾಗಿದ್ದಾರೆ. ಯುವಕರಿಗೆ ಗುಲಾಬಿ ಹೂ ನೀಡಿ, ಎಸ್ಸೈ ಬುದ್ದಿವಾದ ಹೇಳುತ್ತಿರುವ ಫೋಟೋ ಒಂದು ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.