"ಮಗನೇ ಎಲ್ಲಿದ್ದೀಯಪ್ಪ"?ಡೈಲಾಗ್ ಹೇಳಿದ ಯಕ್ಷ ಕಲಾವಿದನ ವಿರುದ್ಧ ದೂರು
ಉಡುಪಿ, ಮಾರ್ಚ್ 18 : ಯಕ್ಷಗಾನ ಪ್ರಸಂಗದಲ್ಲಿ ಮಗನೇ ಎಲ್ಲಿದ್ದೀಯಪ್ಪ? ಎಂದು ಡೈಲಾಗ್ ಹೇಳಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದ್ದ ಯಕ್ಷಗಾನದ ಹಾಸ್ಯ ಕಲಾವಿದನಿಗೆ ಈಗ ಸಂಕಷ್ಟ ಎದುರಾಗಿದೆ.
ಯಕ್ಷಗಾನ ಪ್ರಸಂಗದಲ್ಲಿ ಮಗನೇ ಎಲ್ಲಿದ್ದೀಯಪ್ಪ? ಎಂದು ಡೈಲಾಗ್ ಹೇಳಿದ್ದ ವೀಡಿಯೋ ತುಣುಕು ಟ್ರೋಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕುಮಾರಸ್ವಾಮಿ ಅವರ ಡೈಲಾಗ್ ಅನ್ನು ಯಕ್ಷಗಾನದಲ್ಲಿ ಹಾಸ್ಯಕ್ಕೆ ಬಳಸಿದ ಕಲಾವಿದನ ಮೇಲೆ ಈಗ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ .
ಯಕ್ಷಗಾನಕ್ಕೂ ಬಂತು "ಮಗನೇ ಎಲ್ಲಿದ್ದೀಯಪ್ಪ"? ಡೈಲಾಗ್
ಕರ್ನಾಟಕ ಕಾರ್ಮಿಕರ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ರವಿ ಶೆಟ್ಟಿ ಬೈಂದೂರು ಮತ್ತು ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಬೈಂದೂರು ಠಾಣೆಯಲ್ಲಿ ಕಲೆಗೆ ಮತ್ತು ಕಲಾವಿದರನ್ನು ಮತ್ತು ಯಕ್ಷ ಪ್ರಿಯರನ್ನು ಅವಮಾನಿಸಿ ಮತ್ತು ಅಸಂಬದ್ಧ ಮಾತನ್ನು ಆಡಿದ್ದಾರೆ ಎಂಬ ಆರೋಪದಡಿ ಯಕ್ಷಗಾನ ಕಲಾವಿದನ ಮೇಲೆ ದೂರು ದಾಖಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರವಿ ಶೆಟ್ಟಿ, ಇದು ರಾಜಕೀಯ ಉದ್ದೇಶಕ್ಕಾಗಿ ಕೊಟ್ಟ ದೂರಲ್ಲ. ಕರ್ನಾಟಕ ಕಾರ್ಮಿಕರ ವೇದಿಕೆ ವತಿಯಿಂದ ದೂರು ನೀಡಿದ್ದೇವೆ. ರಾಜಕೀಯದಲ್ಲಿ ಬರುವ ಕೊಳಕು ವಿಷಯಗಳನ್ನು ದೇವರ ಸೇವೆಯ ಆಟದಲ್ಲಿ ಬಳಸುವುದು ಎಷ್ಟು ಸರಿ? ಆದ್ದರಿಂದ ಪಕ್ಷಾತೀತವಾಗಿ ಒಂದು ಸಂಘಟನೆಯ ಮುಖಂಡನಾಗಿ ಮತ್ತು ಯಕ್ಷ ಅಭಿಮಾನಿಯಾಗಿ ಈ ದೂರನ್ನು ನೀಡಿದ್ದೇನೆ ಎಂದು ತಿಳಿಸಿದರು.
ಕಾಪುವಿನ ಪಳ್ಳಿಯಲ್ಲಿ ಬಪ್ಪನಾಡು ಕ್ಷೇತ್ರದ ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ಈ ಡೈಲಾಗ್ ಹೇಳಲಾಗಿತ್ತು. ಹಾಸ್ಯ ಪಾತ್ರಧಾರಿ ಕುಮಾರಸ್ವಾಮಿ ಡೈಲಾಗ್ ಹೇಳಿ ನೆರೆದವರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ. "ಮಗನೇ ಎಲ್ಲಿದ್ದೀಯಪ್ಪಾ"? ಅಂದಾಗ ಪ್ರೇಕ್ಷಕರಿಂದ ಸಿಳ್ಳೆ ಚಪ್ಪಾಳೆ ಬಂದಿದ್ದವು.