ಕುದ್ರೋಳಿ ದಸರಾ ಶೋಭಾಯಾತ್ರೆಯಲ್ಲಿ ಭಕ್ತವೃಂದದ್ದೇ ವೈಭವ
ಮಂಗಳೂರು, ಅಕ್ಟೋಬರ್, 24 : ಕುದ್ರೋಳಿ ದಸರಾ ಹಾಗೂ ನವರಾತ್ರಿ ಮಹೋತ್ಸವದಲ್ಲಿ ಗಣಪತಿ, ಶಾರದೆ ಮಾತೆ, ನವದುರ್ಗೆಯರ ವಿಗ್ರಹಗಳ ಆರಾಧನಾ ಶೋಭಾಯಾತ್ರೆಯು ಶುಕ್ರವಾರ ಸಂಜೆ ಅಕ್ಟೋಬರ್ 23ರಂದು ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ನಡೆಯಿತು. ಶೋಭಾಯಾತ್ರೆಗೆ ಭಕ್ತ ವೃಂದವೇ ಹರಿದು ಬಂದಿತು.
ಕುದ್ರೋಳಿ ದೇವಸ್ಥಾನದ ಗೋಕರ್ಣ ಕಲಾ ಸ್ವರ್ಣ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ, ಆದಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದ ಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿದಾತ್ರಿ, ಶಾರದ ಮಾತೆಯನ್ನುಯನ್ನು ಸಂಜೆ ದೇವಸ್ಥಾನದ ಆವರಣಕ್ಕೆ ತಂದಿರಿಸಲಾಯಿತು. ಅಲ್ಲಿಂದ ಭಕ್ತ ಜನಸಾಗರದ ಜಯಘೋಷಗಳೊಂದಿಗೆ ಅಲಂಕೃತ ವಾಹನಗಳಿಗೆ ಏರಿಸಲಾಯಿತು. ಜೊತೆಗೆ ಕುದ್ರೋಳಿ ಶ್ರೀಗೋಕರ್ಣನಾಥ ದೇವಸ್ಥಾನದ ನವೀಕರಣ ರಜತ ಮಹೋತ್ಸವ ಜೋರಾಗಿಯೇ ನಡೆಯಿತು.[ದಸರಾ ವೇಳೆ ಹೃದಯಾಘಾತದಿಂದ 'ಝಾನ್ಸಿರಾಣಿ' ಸಾವು]
ಕುದ್ರೋಳಿ ದಸರಾದಲ್ಲಿ ಏನೆಲ್ಲಾ ಇತ್ತು?
ಸಾಲು ಸಾಲು ಬಣ್ಣದ ಕೊಡೆಗಳು, ಕಿವಿಗಡಚಿಕ್ಕುವ ಚೆಂಡೆ ವಾದನ, ನಾಸಿಕ್ ಬ್ಯಾಂಡ್ ಅಬ್ಬರ, ಭಜನಾ ತಂಡಗಳ ಶಿಸ್ತುಬದ್ಧ ಕುಣಿತ, ಕೋಲಾಟ, ವೀರಗಾಸೆ, ಕಂಸಾಳೆ , ಡೋಲು, ಜಾಗಟೆ, ಕೊಂಬು, ಕಹಳೆಯ ನಿನಾದ, ಮುಗಿಲು ಮುಟ್ಟಿದ ಭಕ್ತರ ಜಯಘೋಷ, ವೈವಿಧ್ಯಮಯ ನೃತ್ಯ, ಅಲ್ಲಲ್ಲಿ ಸಂಗೀತದ ರಸದೌತಣದ ಮೂಲಕ ಶ್ರೀ ಮಹಾಗಣಪತಿ, ಶಾರದೆ, ಆದಿಶಕ್ತಿ, ಶ್ರೀ ಕ್ಷೇತ್ರದ ವಿಶಿಷ್ಟ ಪರಂಪರೆಯಾದ ನವದುರ್ಗೆಯರ ಶೋಭಾಯಾತ್ರೆಯು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಳದಿಂದ ಪ್ರಾರಂಭವಾಗಿದೆ.
ಶೋಭಾಯಾತ್ರೆ ಸಾಗಿದ ರಸ್ತೆಯುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು, ಸ್ವಾಗತ ಕೋರುವ ದೇವಿಯ ಚಿತ್ರದ ಫ್ಲೆಕ್ಸ್ಗಳು ರಾರಾಜಿಸುತ್ತಿದ್ದವು. ಅಲ್ಲಲ್ಲಿ ಭಕ್ತಾಧಿಗಳು ಆರತಿ ಪೂಜೆ ಸಲ್ಲಿಸಿದರು. ಮೆರವಣಿಗೆ ವೀಕ್ಷಿಸಲು ಮಕ್ಕಳು, ಮಹಿಳೆಯರು ಸೇರಿದಂತೆ ಲಕ್ಷಾಂತರ ಮಂದಿ ಸಂಜೆಯಿಂದಲೇ ರಸ್ತೆ ಪಕ್ಕದಲ್ಲಿ ಗುಂಪುಗುಂಪಾಗಿ ನೆರೆದಿದ್ದರು.[ಪ್ರವಾಸಿಗರಿಗೆ ಮೈಸೂರೆಂದರೆ ಅದೇಕೆ ಅಷ್ಟು ಇಷ್ಟವಾಗುತ್ತೆ?]
ಶ್ರೀ ದೇವರ ಸೇವೆ ಮಾಡಿವರಿಗೆ ಹಾಗೂ ಇತರ ಸಾಧಕರಿಗೆ ಕ್ಷೇತ್ರದ ವತಿಯಿಂದ ಗೌರವ -ಸನ್ಮಾನ :
ಶೋಭಾಯಾತ್ರೆ ಆರಂಭಕ್ಕೆ ಮೊದಲು ಶ್ರೀ ಶಾರದೆಯ ಸನ್ನಿಧಿಯಲ್ಲಿ ಜನಾರ್ದನ ಪೂಜಾರಿ ಸೇವಾಕತೃಗಳನ್ನು ಸಮ್ಮಾನಿಸಿದರು. ಸಚಿವರಾದ ಬಿ. ರಮಾನಾಥ ರೈ, ಯು.ಟಿ. ಖಾದರ್, ಮಾಜಿ ಮೇಯರ್ ಮಹಾಬಲ ಮಾರ್ಲ, ಉಪ ಮೇಯರ್ ಪುರುಷೋತ್ತಮ ಚಿತ್ರಪುರ, ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಕ್ಷೇತ್ರಾಭಿವೃದ್ಧಿ ಮಂಡಳಿ ಅಧ್ಯಕ್ಷ ಜಯ ಸಿ. ಸುವರ್ಣ ಮುಂಬಯಿ, ರಾಘವೇಂದ್ರ ಕೂಳೂರು, ಪದ್ಮರಾಜ ಆರ್. ಅಡ್ವೋಕೇಟ್ ಹರಿಕೃಷ್ಣ ಬಂಟ್ವಾಳ, ರವಿಶಂಕರ್ ಮಿಜಾರ್, ಕೆ. ಮಹೇಶ್ಚಂದ್ರ, ದೇವೇಂದ್ರ ಪೂಜಾರಿ, ಡಾ| ಅನುಸೂಯಾ, ರಾಧಾಕೃಷ್ಣ ಮುಂತಾದವರು ಉಪಸ್ಥಿತರಿದ್ದರು.
ಬಿಗಿ ಪೊಲೀಸ್ ಬಂದೋಬಸ್ತ್:
ದಸರಾ ಮೆರವಣಿಗೆ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಬದಲಾವಣೆ ಮಾಡಲಾಗಿತ್ತು. ಮೆರವಣಿಗೆ ಸಾಗುವ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.[ಸುಂದರ ಜಂಬೂ ಸವಾರಿಯೊಂದಿಗೆ ಸರಳ ದಸರಾಗೆ ತೆರೆ]
ವಾಹನ ಸಂಚಾರ ನಿಷೇಧ:
ಮೆರವಣಿಗೆಯ ಹಿನ್ನಲೆಯಲ್ಲಿ ಶುಕ್ರವಾರ 3ರಿಂದ ಮೆರವಣಿಗೆ ಸಾಗುವ ದಾರಿಗಳಲ್ಲಿ ಹಾಗೂ ರಸ್ತೆ ಅಕ್ಕಪಕ್ಕಗಳಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆಯನ್ನು ನಿಷೇಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೆರವಣಿಗೆ ಆರಂಭವಾದ ಕೂಡಲೇ ನ್ಯೂ ಚಿತ್ರದಿಂದ ಕುದ್ರೋಳಿ ಕಡೆಗೆ, ಅಳಕೆ ಜಂಕ್ಷನ್ ನಿಂದ ಕುದ್ರೋಳಿ ದೇವಸ್ಥಾನದ ಕಡೆಗೆ ವಾಹನ ಸಂಚಾರ ನಿಷೇಧ ಮಾಡಲಾಗಿತ್ತು. ಕುದ್ರೋಳಿ ದೇವಸ್ಥಾನದ ದಕ್ಷಿಣ ಗೇಟ್ ಮತ್ತು ಉತ್ತರ ಗೇಟ್ ರಸ್ಥೆಗಳಲ್ಲಿ ನಿಷೇಧ ಹೇರಲಾಗಿತ್ತು.
ಮೆರವಣಿಗೆಯಲ್ಲಿ ಪಟಾಕಿ ನಿಷೇಧ :
ಶೋಭಾಯಾತ್ರಯಲ್ಲಿ ಏನಾದರೂ ಅವಘಡಗಳು ಸಂಭವಿಸಬಹುದೆಂದು ಮುಂದಾಲೋಚಿಸಿದ ಕ್ಷೇತ್ರಮಂಡಳಿಯವರು ಈ ಮೊದಲೇ ತಿಳಿಸಿದಂತೆ ಮೆರವಣಿಗೆ ಸಂದರ್ಭ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿತ್ತು. ಕ್ಷೇತ್ರ ಮಂಡೆಳಿಯವರ ಆದೇಶವನ್ನು ಜನರು ಅಚ್ಚುಕಟ್ಟಾಗಿ ಪಾಲಿಸಿದರು.