ಕೆಎಸ್ಆರ್ಟಿಸಿ ಹೋಟೆಲ್ ಗಳಲ್ಲಿ ಶೋಷಣೆ, ಫೇಸ್ಬುಕ್ ಪೋಸ್ಟ್ ವೈರಲ್
ಮಂಗಳೂರು, ಆಗಸ್ಟ್ 30: ಊಟ ಮತ್ತು ತಿಂಡಿಗಾಗಿ ಕೆಎಸ್ಆರ್'ಟಿಸಿ ಬಸ್ಸುಗಳು ಎಲ್ಲೆಲ್ಲಾ ನಿಲ್ಲುತ್ತವೆಯೋ ಅಲ್ಲೆಲ್ಲಾ ಪ್ರಯಾಣಿಕರ ಸುಲಿಗೆ, ಕಳಪೆ ಸೇವೆ, ಗುಣಮಟ್ಟವಿಲ್ಲದ ಆಹಾರ ನೀಡುವುದು ನಿರಂತರವಾಗಿ ನಡೆಯುತ್ತಲೇ ಇದೆ. ಆದರೆ ಹೆಚ್ಚಿನ ಪ್ರಯಾಣಿಕರು ಹೀಗೆ ಸುಲಿಗೆ ನಡೆದಾಗ ಅನಿವಾರ್ಯವಾಗಿ ಹಣ ತೆತ್ತು ಗೊಣಗಿಕೊಂಡು ಸುಮ್ಮನಾಗುತ್ತಾರೆ ಅಷ್ಟೆ.
ಆದರೆ ಮಂಗಳೂರಿನ ಹೋರಾಟಗಾರ ಎಂ.ಜಿ ಹೆಗಡೆ ಮಾತ್ರ ಇಷ್ಟಕ್ಕೆ ಸುಮ್ಮನಾಗದೆ, ಗ್ರಾಹಕರಿಗೆ ಹೋಟೆಲೊಂದರಲ್ಲಿ ನಡೆಯುತ್ತಿದ್ದ ಸುಲಿಗೆ ಬಗ್ಗೆ ಕೆಎಸ್ಆರ್'ಟಿಸಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಲ್ಲದೆ ಹೋಟೆಲ್ ಮೇಲೆ ಕ್ರಮ ಕೈಗೊಳ್ಳುವಂತೆ ಮಾಡಿದ್ದಾರೆ.
ಈ ಬಗ್ಗೆ ಇವರು ತಮ್ಮ ಫೇಸ್ಬುಕ್ ನಲ್ಲಿ ಕೆಎಸ್ಆರ್'ಟಿಸಿ ನೀಡಿದ ಆದೇಶ ಪ್ರತಿ ಸಹಿತ ಪೋಸ್ಟ್ ಹಾಕಿದ್ದಾರೆ. ಇದಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು ತಾವೂ ಈ ರೀತಿಯ ಸುಲಿಗೆಗೆ ಒಳಗಾಗಿದ್ದೇವೆ ಎಂದು ಹಲವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗಿದೆ.
ಪ್ರಯಾಣಿಕರಿಗಾಗುತ್ತಿರುವ ತೊಂದರೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಸ್ಆರ್ಟಿಸಿ ನಿರ್ದೇಶಕ ಟಿ.ಕೆ ಸುಧೀರ್, "ಇಂತಹ ದೂರುಗಳು ಈಗಾಗಲೇ ನಮಗೆ ಬಂದಿವೆ. ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೆಎಸ್ಆರ್ಟಿಸಿ ಡಿಸಿ ಅವರಿಗೆ ನಾನು ಸೂಚನೆ ಕೂಡ ನೀಡಿದ್ದೇನೆ," ಎಂದಿದ್ದಾರೆ.
"ಇನ್ನು ಪ್ರತಿ ಆರು ತಿಂಗಳಿಗೊಮ್ಮೆ ಕೆಎಸ್ಆರ್ ಟಿಸಿ ಜತೆಯಲ್ಲಿ ಒಪ್ಪಂದ ಮಾಡಿಕೊಂಡಿರುವ ಹೋಟೆಲ್ಗಳ ಆಹಾರ, ಶೌಚಾಲಯ ವ್ಯವಸ್ಥೆ ಕುರಿತು ತನಿಖೆ ನಡೆಸುತ್ತೇವೆ. ಪ್ರಯಾಣಿಕರಿಗೆ ನೆರವಾಗಲು ಇನ್ನು ಮುಂದೆ ಕೆಎಸ್ಆರ್ ಟಿಸಿ ವೆಬ್ ಸೈಟ್ ನಲ್ಲೂ ಈ ಮಾಹಿತಿಗಳನ್ನು ಹಾಕುತ್ತೇವೆ," ಎಂದು ಅವರು ಹೇಳಿದ್ದಾರೆ.
"ರಾಜ್ಯದಲ್ಲಿ ಸರಿ ಸುಮಾರು ಹದಿನೈದು ಕೆಎಸ್ಆರ್ ಟಿಸಿ ಡಿವಿಷನ್ ಗಳಿವೆ. ಇದರಲ್ಲಿ ಪ್ರತಿ ದಿನ ಒಂದು ಸಾವಿರಕ್ಕೂ ಅಧಿಕ ಬಸ್ಸುಗಳು ಲಾಂಗ್ ರೂಟ್ನಲ್ಲಿ ಪ್ರಯಾಣ ಮಾಡುತ್ತವೆ. ದಿನಕ್ಕೆ ಟಿಫನ್ ಊಟ ಎಂದು ನಾಲ್ಕು ಹೋಟೆಲ್ಗಳ ಬಳಿ ಸರಕಾರಿ ಬಸ್ಗಳು ಪ್ರಯಾಣಿಕರನ್ನು ತಂದು ನಿಲ್ಲಿಸುತ್ತವೆ. ಆದರೆ, ಈ ಹೋಟೆಲ್ ಗಳಲ್ಲಿ ದುಬಾರಿ ಮೊತ್ತ ತೆತ್ತು ಪ್ರಯಾಣಿಕರು ಊಟೋಪಚಾರವನ್ನು ಮಾಡಿಕೊಳ್ಳಬೇಕು. ಕೆಲವೊಂದು ಹೋಟೆಲ್ ಗಳಲ್ಲಿ ಶೌಚಾಲಯದ ವ್ಯವಸ್ಥೆಯೂ ಇಲ್ಲ. ಬೇರೆ ಕಡೆಗೆ ಹೋಗಿ ಶೌಚ ಮುಗಿಸಿ ಕೊಳ್ಳಬೇಕಾದ ಪರಿಸ್ಥಿತಿ ಇದೆ," ಎನ್ನುವುದು ಪ್ರಯಾಣಿಕ ಶಶಿಧರ್ ಅವರ ಮಾತು.