ಕುಟುಂಬ ಸಮೇತ ಧರ್ಮಸ್ಥಳಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
ಮಂಗಳೂರು, ಮೇ 25: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಧರ್ಮಸ್ಥಳ ಪ್ರವಾಸ ಕೈಗೊಂಡಿದ್ದು, ಧರ್ಮಸ್ಥಳ ಹೆಲಿಪ್ಯಾಡ್ಗೆ ಕುಟುಂಬ ಸಮೇತವಾಗಿ ಬಂದಿಳಿದರು.
ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್, ಇದೊಂದು ಖಾಸಗಿ ಭೇಟಿಯಾಗಿದ್ದು, ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯದಲ್ಲಿ ವೈದ್ಯರುಗಳನ್ನು ಭೇಟಿಯಾಗಬೇಕಿದೆ. ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಅವಕಾಶವಿದ್ದರೆ ದರ್ಶನ ಮಾಡುವುದಾಗಿ ಹೇಳಿದರು.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ಡಿಕೆ ಶಿವಕುಮಾರ್, ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಕೇಸ್ಗಳು ಅತೀ ಹೆಚ್ಚಾಗಿ ಕಂಡುಬರುತ್ತಿದೆ. ಈ ಬಗ್ಗೆ ಸರ್ಕಾರದ ಮಂತ್ರಿಗಳಿಗೆ ಸಮರ್ಪಕ ಮಾಹಿತಿಗಳಿಲ್ಲ. ಒಬ್ಬರು ಫಂಗಸ್ ಇದೆ ಅಂದ್ರೆ, ಇನ್ನೊಬ್ಬರು ಫಂಗಸ್ ಅನ್ನೋದೇ ಇಲ್ಲ ಅಂತಿದ್ದಾರೆ. ಫಂಗಸ್ನಿಂದ ಯಾರೂ ಸತ್ತಿಲ್ಲ ಅಂತಾ ಮತ್ತೊಬ್ಬರು ಹೇಳುತ್ತಾರೆ ಎಂದು ಕಿಡಿಕಾರಿದರು.
ರಾಜ್ಯದ ಜನ ಮೊದಲೇ ಆತಂಕದಲ್ಲಿದ್ದಾರೆ, ಸರ್ಕಾರದ ಬೇಜವಾಬ್ದಾರಿ ನಡೆಯಿಂದ ಜನ ಮತ್ತಷ್ಟು ಗೊಂದಲಕ್ಕೊಳಗಾಗಿದ್ದಾರೆ. ಇನ್ನೊಂದೆಡೆ ರಾಜ್ಯದಲ್ಲಿ ಈ ರೋಗಕ್ಕೆ ಬೇಕಾದ ಔಷಧ ಇಲ್ಲ ಅನ್ನೋದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೇಂದ್ರ ಸರ್ಕಾರ ಗುಜರಾತ್ಗೆ ಔಷಧಿ ನೀಡಿದೆ. ರಾಜ್ಯ ಸರ್ಕಾರ ಗುಜರಾತಿನಿಂದಾದರೂ ಔಷಧಿ ತರಬೇಕು ಎಂದು ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಇನ್ನು ಚಿಕ್ಕಮಗಳೂರಿನಲ್ಲಿ ದಲಿತ ಯುವಕನಿಗೆ ಮೂತ್ರ ಕುಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಈಗ ಯಾಕೆ ಮುಂದೆ ಹೋಗಿಲ್ಲ, ತಕ್ಷಣ ಇಲಾಖೆಯಿಂದ ಕೇಸ್ ದಾಖಲು ಮಾಡಬೇಕು. ಸಚಿವ ಶ್ರೀರಾಮುಲು ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಬೇಕು. ಮಾನವ ಹಕ್ಕುಗಳ ಆಯೋಗ ಕೂಡಾ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಕೇವಲ ಅಮಾನತು ಮಾಡುವುದರಿಂದ ನ್ಯಾಯ ಸಿಗಲ್ಲವೆಂದು ಡಿಕೆ ಶಿವಕುಮಾರ್ ಒತ್ತಾಯಿಸಿದರು.
ಇನ್ನು ಮಂಗಳೂರಿನ ಎಂಆರ್ಪಿಎಲ್ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದಿರುವ ಬಗ್ಗೆ ಸ್ಥಳೀಯ ನಾಯಕರಿಂದ ಮಾಹಿತಿ ಪಡೆದ ಡಿಕೆ ಶಿವಕುಮಾರ್, ರಾಜ್ಯದಲ್ಲಿ ಸರೋಜಿನಿ ಮಹಿಷಿ ವರದಿ ಪಾಲನೆಯಾಗುತ್ತಿಲ್ಲ. ನಿಯಮ ಪ್ರಕಾರ ಶೇ.78ರಷ್ಟು ಉದ್ಯೋಗ ಸ್ಥಳೀಯರಿಗೆ ನೀಡಬೇಕೆಂಬ ಸೂಚನೆ ಇದ್ದರೂ ಪಾಲಿಸಲಾಗುತ್ತಿಲ್ಲ ಎಂದರು.
ಸಂಸದ ಕಟೀಲ್ ಸಾಹೆಬರು ಕಂಪನಿ ಎಂ.ಡಿಯನ್ನು ಕರೆದು ಸಭೆ ಮಾಡಬೇಕು. ಹಿಂದಿನ ಪಟ್ಟಿಯನ್ನು ರದ್ದು ಮಾಡಬೇಕು. ಇಲ್ಲವಾದಲ್ಲಿ ಕರಾವಳಿ ಮತ್ತು ಮಲೆನಾಡಿನ ಜನ ಹೋರಾಟಬೇಕಾಗಬಹುದು ಅಂತಾ ಕೆಪಿಸಿಸಿ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದರು.