ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ- ಚೆನ್ನಯ ಹೆಸರು
ಮಂಗಳೂರು, ಜುಲೈ 3: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರ ಪುರುಷರಾದ ಕೋಟಿ- ಚೆನ್ನಯ ಅವರ ಹೆಸರಿಡಲು ನಿರ್ಧರಿಸಲಾಗಿದೆ. ಈ ಕುರಿತ ಪ್ರಸ್ತಾಪವನ್ನು ಈಗಾಗಲೇ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲಿ ಈ ಬಗ್ಗೆ ಚರ್ಚಿಸಿ ನಂತರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು.
ನಿನ್ನೆ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಿಇಒ ಡಾ.ಸೆಲ್ವಮಣಿ ಈ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರ ಪುರುಷರಾದ ಕೋಟಿ- ಚೆನ್ನಯ ಅವರ ಹೆಸರಿಡುವಂತೆ ನಿರ್ಣಯಿಸಿ ಕಳುಹಿಸಬೇಕೆಂದು ಆಗ್ರಹಿಸಿದಾಗ ಡಾ.ಸೆಲ್ವಮಣಿ ಈ ಮಾಹಿತಿ ನೀಡಿದರು.
ಲೋಕಸಭೆಯಲ್ಲಿ ಪ್ರತಿಧ್ವನಿಸಿದ ರನ್ ವೇಯಿಂದ ವಿಮಾನ ಜಾರಿದ ಘಟನೆ
ಸಭೆಯಲ್ಲಿ ಸರ್ಕಾರಿ ವೈದ್ಯರನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರು ನಿಂದಿಸಿ ಬೆದರಿಸಿದ್ದಾರೆ ಎಂಬ ಆರೋಪದ ಕುರಿತು ಪ್ರಸ್ತಾಪಿಸಲಾಯಿತು. ಪುತ್ತೂರು ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯನಿರತ ಮಹಿಳಾ ವೈದ್ಯರನ್ನು ಜಿಲ್ಲಾ ಪಂ.ಅಧ್ಯಕ್ಷೆ ಅವಮಾನಿಸಿದ್ದಾರೆಂಬ ವೈದ್ಯರ ಆರೋಪಗಳು ಮಂಗಳವಾರ ನಡೆದ ಜಿಪಂ ಮುಂದುವರಿದ ಸಾಮಾನ್ಯ ಸಭೆಯಲ್ಲಿಯೂ ಪ್ರತಿಧ್ವನಿಸಿತು. ಸದಸ್ಯ ಎಂ.ಎಸ್. ಮುಹಮ್ಮದ್ ವಿಷಯ ಪ್ರಸ್ತಾಪಿಸಿ, ಅಧ್ಯಕ್ಷರು ವೈದ್ಯರನ್ನು ಬೈದು, ಅವಮಾನಿಸಿದ್ದಾರೆ ಎಂಬ ಆರೋಪ ವೈದ್ಯರಿಂದ ಬಂದಿದೆ. ಇದು ಇಡೀ ಜಿಲ್ಲಾ ಪಂಚಾಯತ್ ಗೌರವದ ಪ್ರಶ್ನೆ. ಆದ್ದರಿಂದ ಇದಕ್ಕೆ ಅಧ್ಯಕ್ಷರು ಸ್ಪಷ್ಟನೆ ಕೊಡಬೇಕು ಎಂದರು.
ನಾನು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಬಗ್ಗೆ ವಿಚಾರಿಸಿದೆ. ನನಗೆ ಯಾವುದೇ ಉತ್ತರ ಸಿಕ್ಕಿಲ್ಲ. ಮುಕ್ಕಾಲು ಗಂಟೆ ಕಾದಿದ್ದೇನೆ. ಪದೇ ಪದೇ ಕೇಳಿದರೂ ಯಾವುದೇ ಮಾಹಿತಿ ಕೊಟ್ಟಿಲ್ಲ. ಸೌಜನ್ಯದಿಂದ ವರ್ತಿಸಿಲ್ಲ. ಆಗ, ವೈದ್ಯರ ಕ್ಯಾಬಿನ್ ಗೆ ಹೋಗಿ ಖಡಕ್ ಮಾತನಾಡಿದ್ದೇನೆ. ಅದನ್ನು ಯಾರೋ ವಿಡಿಯೋ ಮಾಡಿ ವೈರಲ್ ಮಾಡಿರುವುದು ನನಗೆ ಗೊತ್ತಿಲ್ಲ ಎಂದು ಅಧ್ಯಕ್ಷೆ ಮೀನಾಕ್ಷಿ ಹೇಳಿದರು.