ಕೋಟ ಡಬಲ್ ಮರ್ಡರ್:ಪ್ರಮುಖ ಆರೋಪಿಗಳಿಬ್ಬರ ಬಂಧನ
ಉಡುಪಿ, ಫೆಬ್ರವರಿ 08: ಉಡುಪಿ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಕೋಟ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಪ್ರಮುಖ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಈ ಇಬ್ಬರು ಪ್ರಮುಖ ಆರೋಪಿಗಳನ್ನು ಮಡಿಕೇರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಜಶೇಖರ ರೆಡ್ಡಿ ಮತ್ತು ರವಿ ಎಂದು ಗುರುತಿಸಲಾಗಿದೆ.
ಜನವರಿ 26ರ ತಡರಾತ್ರಿ ಕೋಟದಲ್ಲಿ ಭರತ್ ಹಾಗು ಯತೀಶ್ ಎಂಬವವರ ಭೀಕರ ಕೊಲೆಯಾಗಿತ್ತು. ಜನವರಿ 26 ರ ತಡರಾತ್ರಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಭರತ್ ಮತ್ತು ಯತೀಶ್ ಅವರ ಮೇಲೆ ತಲವಾರಿನಿಂದ ದಾಳಿ ನಡೆಸಿದ್ದರು. ಕೋಟ ರಾಜಲಕ್ಷ್ಮಿ ಸಭಾಂಗಣದ ಸರ್ವೀಸ್ ರೋಡ್ ನಲ್ಲಿ ದುಷ್ಕರ್ಮಿಗಳು ಅಡ್ಡಗಟ್ಟಿ ದಾಳಿ ನಡೆಸಿದ್ದರು.
ಈ ಕೊಲೆ ಜಮೀನಿಗೆ ಸಂಬಂಧಿಸಿದ ವಿಚಾರದಲ್ಲಿ ನಡೆದಿದೆ ಎನ್ನಲಾಗಿತ್ತು. ಟಾಯ್ಲೆಟ್ ಪಿಟ್ ಒಂದಕ್ಕೆ ಸಂಬಂಧಿಸಿದ ಜಮೀನಿನ ವಿವಾದದಲ್ಲಿ ಸ್ನೇಹಿತ ಲೋಹಿತ್ ಎಂಬುವವನಿಗೆ ಬೆಂಬಲಿಸಿದ್ದಕ್ಕೆ ಭರತ್ ಮತ್ತು ಯತೀಶ್ ಮೇಲೆ ದಾಳಿ ನಡೆಸಲಾಗಿತ್ತು ಎಂದು ಶಂಕಿಸಲಾಗಿತ್ತು.
ಈ ಡಬಲ್ ಮರ್ಡರ್ ಕೊಲೆ ಪ್ರಕರಣದಲ್ಲಿ ರೌಡಿ ಶೀಟರ್ ಹರೀಶ್ ರೆಡ್ಡಿ ಮತ್ತು ಆತನ ಸಹಚರರು ಪ್ರಮುಖ ಆರೋಪಿಗಳು ಎಂದು ಹೇಳಲಾಗಿತ್ತು. ಕೃತ್ಯ ಎಸಗಿ ಹರೀಶ್ ರೆಡ್ಡಿ ಮತ್ತು ಆತನ ಸಹಚರರು ತೆಲೆಮರೆಸಿಕೊಂಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಕೋಟ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಗಳನ್ನು ಮಡಿಕೇರಿಯಲ್ಲಿ ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಇನ್ನೂ ಆರು ಆರೋಪಿಗಳ ಬಂಧನವಾಗಬೇಕಿದೆ ಎಂದು ಹೇಳಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಹರೀಶ್ ರೆಡ್ಡಿ ತಲೆ ಮರೆಸಿಕೊಂಡಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.