ಕೊಂಕಣ್ ರೈಲ್ವೆ ರೂಟ್ ನಲ್ಲಿ ಮತ್ತೆ ರೈಲು ಸಂಚಾರ ಆರಂಭ
ಮಂಗಳೂರು, ಸಪ್ಟೆಂಬರ್ 01: ಮಂಗಳೂರು-ಮುಂಬಯಿ ಸಂಪರ್ಕಿಸುವ ಕೊಂಕಣ್ ರೇಲ್ವೆ ರೂಟ್ ನಲ್ಲಿ ಮತ್ತೇ ರೈಲು ಸಂಚಾರ ಆರಂಭಗೊಂಡಿದೆ.
ಮಂಗಳೂರು ಹೊರವಲಯದ ಪಡೀಲ್- ಕುಲಶೇಖರ ನಡುವೆ ರೈಲು ಹಳಿಯ ಮೇಲೆ ಬಿದ್ದಿದ್ದ ಮಣ್ಣನ್ನು ತೆರವು ಗೊಳಿಸಲಾಗಿದ್ದು ಪಡೀಲ್- ಕುಲಶೇಖರ ಪ್ರದೇಶದಲ್ಲಿ ನಿರ್ಮಿಸಲಾದ ಹೊಸ ಪರ್ಯಾಯ ಹಳಿಯ ಮೇಲೆ ರೈಲು ಓಡಾಟ್ ಆರಂಭಗೊಂಡಿದೆ.
ಭಾರೀ ಮಳೆಯ ಪರಿಣಾಮ ಪಡೀಲ್ - ಕುಲಶೇಖರ ನಡುವೆ ಗುಡ್ಡ ಕುಸಿದು ಬಿದ್ದ ಪರಿಣಾಮ ಕಳೆದ 8 ದಿನಗಳಿಂದ ಈ ರೂಟ್ ನಲ್ಲಿ ರೈಲು ಸಂಚಾರ ರದ್ದುಗೊಳಿಸಲಾಗಿತ್ತು.
ಗಣೇಶ ಚತುರ್ಥಿ : ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು
ಗುಡ್ಡ ಕುಸಿತ ಘಟನೆ ಮುಂದುವರೆದ ಪರಿಣಾಮ ಪಡೀಲ್ - ಕುಲಶೇಖರ ನಡುವೆ ಪ್ರಯಾಣಕ್ಕೆ ಹೊಸ ಪರ್ಯಾಯ ಹಳಿ ಅಳವಡಿಸುವ ಕಾಮಗಾರಿ ನಡೆದಿತ್ತು. ಈ ಹಳಿಗಳ ಮೇಲೆ ರೈಲು ಓಡಾಟಕ್ಕೆ ಅರ್ಹವಾಗಿರುವುದನ್ನು ರೈಲ್ವೆ ಇಲಾಖೆ ತಂತ್ರಜ್ಞರು ಖಾತರಿಪಡಿಸಿದ್ದು, ಹೊಸ ಮಾರ್ಗದಲ್ಲಿ ರೈಲು ಸೇವೆ ಪುನರಾರಂಭಗೊಂಡಿದೆ.ಇದರಿಂದ ಬೆಂಗಳೂರು, ದಕ್ಷಿಣ ಕನ್ನಡ ಮತ್ತು ಕೇರಳ ಭಾಗದ ರೈಲುಗಳಿಗೆ ಎಂಟು ದಿನಗಳ ಬಳಿಕ ಕೊಂಕಣ ಮಾರ್ಗಕ್ಕೆ ಸಂಪರ್ಕ ಸಾಧ್ಯವಾಗಿದೆ.
ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾದ 400 ಮೀಟರ್ ಹೊಸ ಹಳಿ ಪ್ರಯಾಣಕ್ಕೆ ಸಿದ್ಧವಾಗಿರುವ ಬಗ್ಗೆ ದಕ್ಷಿಣ ರೈಲ್ವೆ ಅರ್ಹತಾ ಪ್ರಮಾಣಪತ್ರ ಒದಗಿಸಿದೆ. ಪ್ರಥಮ ಹಂತದಲ್ಲಿ ಮಂಗಳೂರು ಜಂಕ್ಷನ್ನಿಂದ ಪಣಂಬೂರಿಗೆ ರೈಲ್ವೆ ಸರಕು ಬೋಗಿಗಳನ್ನುನಿನ್ನೆ ಓಡಿಸಲಾಗಿತ್ತು.
ಬಳಿಕ ಇದೇ ಮಾರ್ಗದಲ್ಲಿ ಸರಕು ತುಂಬಿದ ಬೋಗಿಗಳಿರುವ ಗೂಡ್ಸ್ ರೈಲು ವಾಪಸ್ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಬಂದಿದೆ. ಬಳಿಕ ಪ್ರಯಾಣಿಕರ ರೈಲು ಓಡಾಟಕ್ಕೆ ಹಳಿ ಸಜ್ಜುಗೊಂಡಿರುವುದನ್ನು ಹಿರಿಯ ಅಧಿಕಾರಿಗಳು ಖಚಿತಪಡಿಸಿದರು.