ಕೊಂಕಣ ಮಾರ್ಗದಲ್ಲಿ ಇನ್ನೂ ಅರಂಭಗೊಂಡಿಲ್ಲ ರೈಲು ಸಂಚಾರ
ಮಂಗಳೂರು, ಆಗಸ್ಟ್ 27: ಮಂಗಳೂರು- ಮುಂಬೈ ನಡುವೆ ಕೊಂಕಣ ಮಾರ್ಗದಲ್ಲಿ ಇನ್ನೂ ರೈಲು ಸಂಚಾರ ಆರಂಭಗೊಂಡಿಲ್ಲ. ಭಾರೀ ಮಳೆಯಾಗಿದ್ದರಿಂದ ಮಂಗಳೂರು ಹೊರವಲಯದ ಕುಲಶೇಖರ- ಪಟೀಲ್ ನಡುವಿನ ರೈಲು ಹಳಿಗಳ ಮೇಲೆ ಗುಡ್ಡ ಕುಸಿದು ಬಿದ್ದಿದ್ದು, ಭಾರೀ ಪ್ರಮಾಣದ ಮಣ್ಣನ್ನು ತೆರವುಗೊಳಿಸುವ ಕಾಮಗಾರಿ ಭರದಿಂದ ಸಾಗಿದೆ.
ಒಂದೇ ಸಮನೆ ಮಳೆ ಸುರಿಯುತ್ತಿರುವುದರಿಂದ ಮಣ್ಣು ತೆರವು ಕಾಮಗಾರಿಗೆ ತೊಡಕುಂಟಾಗಿದ್ದು, ಇಂದು ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.
ಇಂದಿನಿಂದ ಮಂಗಳೂರು- ಬೆಂಗಳೂರು ರೈಲು ಸಂಚಾರ ಪುನರಾರಂಭ
ಮಂಗಳೂರು ಜಂಕ್ಷನ್- ಸುರತ್ಕಲ್ ರೈಲು ಮಾರ್ಗದ ಕುಲಶೇಖರದಲ್ಲಿ ಭೂಕುಸಿತದಿಂದ ಹಳಿ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸಲಾಗುತ್ತಿದೆ. ತಡೆಗೋಡೆ ನಿರ್ಮಾಣ ಕಾಮಗಾರಿ ಇಂದು ಕೂಡ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರ ರದ್ದುಪಡಿಸಲಾಗಿದೆ.
ಸೋಮವಾರ ಕೊಚ್ಚುವೇಲಿ-ಪೋರ್ಬಂದರ್ ರೈಲು, ಎರ್ನಾಕುಲಂ-ಅಜಮೇಪರ್ ರೈಲುಗಳು ಈ ಮಾರ್ಗದಲ್ಲಿ ಸಂಚರಿಸುವುದಾಗಿ ಪ್ರಕಟಿಸಲಾಗಿತ್ತು. ಆದರೆ ನಿನ್ನೆ ಇಲ್ಲಿ ಮತ್ತೆ ಮಣ್ಣು ಕುಸಿದ ಹಿನ್ನೆಲೆ ಈ ರೈಲುಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಿವೆ. ತಿರುನಂತಪುರ-ವೇರಾವಲ್ ಎಕ್ಸ್ಪ್ರೆಸ್ ರೈಲು ಶೋರ್ನೂರು, ಜೋಲಾರ್ಪೇಟೆ, ರಾಣಿಗುಂಟ, ಜಲಗಾಂವ್ ಮೂಲಕ ಸಂಚರಿಸಲಿದೆ.
ಮಡಗಾಂವ್ನಿಂದ ಮಂಗಳೂರು ಮತ್ತು ಮಂಗಳೂರಿನಿಂದ ಮಡಗಾಂವ್ಗೆ ಸಂಚರಿಸುವ ಇಂಟರ್ಸಿಟಿ ಮತ್ತು ಪ್ಯಾಸೆಂಜರ್ ರೈಲುಗಳ ಸಂಚಾರ ಇಂದು ಕೂಡ ರದ್ದುಗೊಂಡಿದೆ. ಮಡಗಾಂವ್ನಿಂದ ಮಂಗಳೂರಿಗೆ ಆಗಮಿಸುವ ಡೆಮು ಪ್ಯಾಸೆಂಜರ್ ಸುರತ್ಕಲ್ಗೆ ಆಗಮಿಸಿ ಅಲ್ಲಿಂದ ಮರಳಲಿದೆ.