ನಾಗದೇವರ ಕಲ್ಲು ಭಗ್ನಗೊಳಿಸಿದ್ದರ ಹಿಂದಿದೆ ಗಲಭೆಯ ಸ್ಕೆಚ್; 8 ಆರೋಪಿಗಳ ಬಂಧನ
ಮಂಗಳೂರು, ನವೆಂಬರ್ 27: ಕಡಲನಗರಿ ಮಂಗಳೂರಿನಲ್ಲಿ ತಿಂಗಳ ಹಿಂದೆ ನಾಗ ಮೂರ್ತಿಯ ಧ್ವಂಸ ಮಾಡುವ ಸರಣಿ ಕೃತ್ಯ ನಡೆದಿತ್ತು. ಅಕ್ಟೋಬರ್ 20ರಂದು ಕೂಳೂರಿನ ಕೋಟ್ಯಾನ್ ಕುಟುಂಬಕ್ಕೆ ಸೇರಿದ ನಾಗಬನದ ನಾಗನ ಮೂರ್ತಿಯನ್ನು ಧ್ವಂಸಗೊಳಿಸಿದರೆ, ನವೆಂಬರ್ 12ರಂದು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ನಲ್ಲಿನ ನಾಗದೇವರ ಕಟ್ಟೆಯಲ್ಲಿನ ನಾಗವಿಗ್ರಹವನ್ನು ಧ್ವಂಸಗೊಳಿಸಲಾಗಿತ್ತು.
ಈ ರೀತಿಯ ಸರಣಿ ಘಟನೆ ಸಾಕಷ್ಟು ಭಕ್ತರ, ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿ ಕೋಮು ಗಲಭೆ ನಡೆಯುವ ಆತಂಕ ಎದುರಾಗಿತ್ತು. ಆದರೆ ಕೊನೆಗೂ ಈ ಪ್ರಕರಣವನ್ನು ಭೇದಿಸಿರುವ ಮಂಗಳೂರು ಪೊಲೀಸರು ಎಂಟು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮಂಗಳೂರಿನ ಕಾವೂರು ಬಳಿಯ ಶಾಂತಿನಗರ ನಿವಾಸಿ ಸಫ್ವಾನ್, ಕುಳೂರಿನ ಪಂಜಿಮೊಗರು ನಿವಾಸಿ ಪ್ರವೀಣ್ ಅನಿಲ್ ಮೊಂತೆರೋ, ಕಾವೂರಿನ ಶಾಂತಿನಗರ ನಿವಾಸಿ ನಿಖಿಲೇಶ್, ಸುರತ್ಕಲ್ನ ಇಡ್ಯಾ ನಿವಾಸಿ ಜಯಂತ್ ಕುಮಾರ್, ಹಾಸನ ಜಿಲ್ಲೆ ಬೇಲೂರಿನ ಅರೇಹಳ್ಳಿ ನಿವಾಸಿ ನೌಶಾದ್, ಕಾವೂರಿನ ಶಾಂತಿನಗರ ನಿವಾಸಿ ಸುಹೈಬ್, ಬಂಟ್ವಾಳದ ದೇವಸ್ಯ ಪಡೂರ್ ನಿವಾಸಿ ಪ್ರತೀಕ್ ಮತ್ತು ಕೂಳೂರಿನ ಪಡುಕೋಡಿ ನಿವಾಸಿ ಮಂಜುನಾಥ ಎಂದು ಗುರುತಿಸಲಾಗಿದೆ.
ಬಂಧಿತರ ವಿಚಾರಣೆ ಸಂದರ್ಭ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಸರಣಿ ಸರಗಳ್ಳತನ, ದರೋಡೆ ಪ್ರಕರಣಗಳ ತನಿಖೆಯ ಹಿಂದೆ ಬಿದ್ದ ಪೊಲೀಸರ ದಿಕ್ಕು ತಪ್ಪಿಸಲು ಈ ಕೃತ್ಯ ಎಸಗಿರುವುದಾಗಿ ಹೇಳಿದ್ದಾರೆ. ನಾಗದೇವರ ಮೂರ್ತಿ ಭಗ್ನಗೊಳಿಸಿ ಕೋಮು ಗಲಭೆ ಸೃಷ್ಟಿಸಿ ಶಾಂತಿ ಕದಡುವ ಸಂಚು ರೂಪಿಸಿದ್ದನ್ನು ಬಾಯ್ಬಿಟ್ಟಿದ್ದಾರೆ. ಇದಕ್ಕಾಗಿ ಸರಣಿ ಸರಗಳ್ಳತನ, ದರೋಡೆ ನಡೆಸಿದ್ದ ಆರೋಪಿಗಳಾದ ಅಬ್ದುಲ್ ಇಶಾಮ್ ಮತ್ತು ಹ್ಯಾರಿಸ್ ಯಾನೆ ಆಚಿ ಎಂಬುವರು ಉಳಿದ ಆರೋಪಿಗಳಿಗೆ ಪ್ರೇರಣೆ ನೀಡಿದ್ದಾಗಿಯೂ ಗೊತ್ತಾಗಿದೆ.
ಆರೋಪಿಗಳಾದ ಸಫ್ವಾನ್, ಸೊಹೈಬ್ ನೇತೃತ್ವದಲ್ಲಿ ಈ ಕೃತ್ಯಕ್ಕೆ ಸಂಚು ರೂಪಿಸಿದ್ದು, ನಾಗಬನ ಕಲ್ಲು ಧ್ವಂಸಕ್ಕೆ ಪ್ರವೀಣ್ ಮೊಂತೆರೋಗೆ ಸುಪಾರಿಯನ್ನು ಕೊಡಲಾಗಿತ್ತು. ಪ್ರವೀಣ್ ಮೊಂತೋರೂ ಗಾಂಜಾ ವ್ಯಸನಿಗಳಾದ ಜಯಂತ್, ಮಂಜುನಾಥ್, ನಿಕಿಲೇಶ್ ಮತ್ತು ಪ್ರತೀಕ್ ನಾಗಬನಕ್ಕೆ ನಾಗ ದೇವರ ಮೂರ್ತಿಗಳನ್ನು ಧ್ವಂಸ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ.
ನಾಗಬನದ ಸುತ್ತಮುತ್ತ ಸಿಸಿ ಕ್ಯಾಮೆರಾಗಳು ಇರದಿರುವುದನ್ನು ಗಮನಿಸಿದ ಆರೋಪಿಗಳು ಈ ಕೃತ್ಯ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದರ ಜೊತೆಗೆ ಕೋಮು ಗಲಭೆ ಸೃಷ್ಟಿಸಿ ಪೊಲೀಸರ ಗಮನ ಬೇರೆಡೆ ಸೆಳೆಯಲು ಆರೋಪಿಗಳು ಯತ್ನ ಮಾಡಿದ್ದರು.
ನಾಗದೇವರ ಕಲ್ಲುಗಳನ್ನು ಧ್ವಂಸ ಮಾಡಿದವರನ್ನು ಬಂಧಿಸಬೇಕೆಂದು ಆಗ್ರಹಿಸಿ ಕೆಲ ದಿನಗಳ ಹಿಂದೆ ಹಿಂದೂ ಸಂಘಟನೆಗಳು ಕೋಡಿಕಲ್ನಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡಿದ್ದವು. ಪ್ರತಿಭಟನೆ ವೇಳೆ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಆರೋಪಿಗಳನ್ನು ಪೊಲೀಸರು ಶೀಘ್ರವಾಗಿ ಪತ್ತೆ ಹಚ್ಚಿದರೆ, ಪೊಲೀಸರಿಗೆ ಸಾರ್ವಜನಿಕವಾಗಿ ಬಂಗಾರದ ಪದಕ ಹಾಕಿ ಗೌರವಿಸಲಾಗುವುದು ಅಂತಾ ಹೇಳಿದ್ದರು.
ಸ್ವಾಮೀಜಿಗಳ ಆಫರ್ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, "ಸ್ವಾಮೀಜಿಗಳು ಪೊಲೀಸರ ಮೇಲೆ ಗೌರವ ತೋರಿಸಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇವೆ. ಆದರೆ ಸ್ವಾಮೀಜಿಯವರ ಆಫರ್ನ ಅಗತ್ಯವಿಲ್ಲ, ಇದು ನಮ್ಮ ಕರ್ತವ್ಯ. ನಮ್ಮ ಕರ್ತವ್ಯವನ್ನು ಇಲಾಖೆಯೇ ಗುರುತಿಸಿ ಗೌರವಿಸುತ್ತದೆ. ಹೊರಗಿನ ಯಾವುದೇ ಪ್ರಶಸ್ತಿಗಳನ್ನು ತೆಗೆದುಕೊಳ್ಳುವ ನಿಯಮ ಇಲ್ಲ," ಎಂದು ಸ್ವಾಮೀಜಿಗಳ ಆಫರ್ನ್ನು ನಯವಾಗಿಯೇ ನಿರಾಕರಿಸಿದ್ದಾರೆ.
ಇನ್ನೊಂದೆಡೆ ಈ ಘಟನೆಯ ಉನ್ನತ ತನಿಖೆಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಆಗ್ರಹಿಸಿದೆ. ಇದರ ಹಿಂದೆ ವ್ಯವಸ್ಥಿತ ಜಾಲ ಇದೆ. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ದುರುದ್ದೇಶ ಕೂಡಾ ಇರುವ ಸಾಧ್ಯತೆಗಳಿವೆ. ಇದರ ಹಿಂದಿರುವವರನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಕರಾವಳಿಯಲ್ಲಿ ಶಾಂತಿ ಭಂಗ ತಂದಿದ್ದ ಪ್ರಕರಣವನ್ನು ಕಾವೂರು, ಉರ್ವ ಠಾಣಾ ಪೊಲೀಸರು ಸಾಕಷ್ಟು ಶ್ರಮಪಟ್ಟು ಭೇದಿಸಿದ್ದಾರೆ. ಹೀಗಾಗಿ ಪ್ರಕರಣ ಭೇದಿಸಿದ ಅಧಿಕಾರಿಗಳಿಗೆ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ 25 ಸಾವಿರ ನಗದು ಬಹುಮಾನ ಘೋಷಿಸಿ ಬಹುಮಾನ ಮೊತ್ತ ಹಸ್ತಾಂತರಿಸಿದ್ದಾರೆ.