ರಾಜ್ಯದಲ್ಲೇ ವಿನೂತನ ಪ್ರಯೋಗ: ಜೂನ್ 14ಕ್ಕೆ ಕಟೀಲು ದೇಗುಲ ಓಪನ್
ಮಂಗಳೂರು, ಜೂನ್ 11: ಇದೇ ಬರುವ ಭಾನುವಾರ, ಜೂನ್ 14ರಿಂದ ಪುರಾಣ ಪ್ರಸಿದ್ದ ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಭಕ್ತರಿಗೆ ದರ್ಶನ ಭಾಗ್ಯ ಸಿಗಲಿದೆ.
ಆದರೆ, ರಾಜ್ಯದಲ್ಲೇ ವಿನೂತನ ಪ್ರಯೋಗ ಎನ್ನುವಂತೆ, ದೇವಾಲಯಕ್ಕೆ ಭೇಟಿ ನೀಡಲು ಇಚ್ಚಿಸುವ ಭಕ್ತರು, ದೇಗುಲದ ವೆಬ್ ಸೈಟ್ ನಿಂದ (http://www.kateeldevi.in/) ಇ-ಟಿಕೆಟ್ ಮೂಲಕ ಪ್ರವೇಶವನ್ನು ಕಾದಿರಿಸಬೇಕಾಗುತ್ತದೆ.
ಶೃಂಗೇರಿ ದೇವಾಲಯದ ದರ್ಶನ ಸಮಯ ಬದಲಾವಣೆ
ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಸೇರಿದಂತೆ ಹಲವು ನಿಯಮಗಳನ್ನು ಪಾಲಿಸುವಂತೆ ಸರಕಾರ ಸೂಚಿಸಿರುವುದರಿಂದ, ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ ವ್ಯವಸ್ಥೆ,ರಾಜ್ಯದಲ್ಲೇ ಮೊದಲ ಪ್ರಯೋಗವಾಗಲಿದೆ.
ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಈಗಾಗಲೇ ದೇವಾಲಯದ ಆವರಣದಲ್ಲಿ ಬಿಳಿಯ ಬಾಕ್ಸ್ ಅನ್ನು ಹಾಕಲಾಗಿದೆ. ಬೆಳಗ್ಗೆ 7.30 ರಿಂದ ರಾತ್ರಿ 7.30ರ ವರೆಗೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.
ಸ್ಥಳೀಯ ಭಕ್ತರಿಗೆ ಇ-ಪಾಸ್ ಅಗತ್ಯವಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ. ಜೊತೆಗೆ, ಸ್ಥಳೀಯರಿಗೆ ಬೆಳಗ್ಗೆ ಆರು ಗಂಟೆಯಿಂದ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ದೇವಾಲಯದಲ್ಲಿ ತೀರ್ಥ, ಪ್ರಸಾದದ ವ್ಯವಸ್ಥೆ ಇರುವುದಿಲ್ಲ.
ಮೈಸೂರು: ಚಾಮುಂಡಿಬೆಟ್ಟದ ಮೆಟ್ಟಿಲು ಬಾಗಿಲು ತೆರೆಯುವುದು ಯಾವಾಗ?
"ಥರ್ಮಲ್ ಸ್ಕ್ರೀನಿಂಗ್ ಮಾಡಿ ಭಕ್ತರನ್ನು ಒಳಗೆ ಬಿಡಲಾಗುವುದು, ಹಾಗಾಗಿ, ಸ್ಥಳಾವಕಾಶದ ಕೊರತೆ ಎದುರಾಗಬಾರದೆಂದು ಇ-ಟಿಕೆಟ್ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತೀ ಹದಿನೈದು ನಿಮಿಷಕ್ಕೆ ಅರವತ್ತು ಮಂದಿಗೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು" ಎಂದು ಆಡಳಿತ ಮಂಡಳಿ ಹೇಳಿದೆ.