ಕಾಞಂಗಾಡಿನಲ್ಲಿ ಕಾಶೀ ಮಠಾಧೀಶರ ದಿಗ್ವಿಜಯೋತ್ಸವ
ಮಂಗಳೂರು, ಅಕ್ಟೋಬರ್ 26: ಕಾಶೀ ಮಠಾಧೀಶ ಸಂಯಮೀಂದ್ರ ತೀರ್ಥ ಸ್ವಾಮೀಜಿ ಚಾತುರ್ಮಾಸ ವ್ರತಾಚರಣೆ ಅಂಗವಾಗಿ ಭಾನುವಾರ ಕಾಞಂಗಾಡಿನಲ್ಲಿ ದಿಗ್ವಿಜಯ ಮಹೋತ್ಸವ ನಡೆಯಿತು. ವಿವಿಧ ಸಾಂಸ್ಕೃತಿಕ ವೈವಿಧ್ಯಗಳೊಂದಿಗೆ ವೈಭವದಿಂದ ನಡೆದ ಮಹೋತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು.
ಕಾಞಂಗಾಡು ಹೊಸದುರ್ಗದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಚಾತುರ್ಮಾಸ ಸಂಪನ್ನಗೊಂಡಿತು. ಸಂಸ್ಥಾನದ ಪೀಠಾಧಿಪತಿಯಾಗಿ ಶ್ರೀಗಳ ಮೊದಲ ದಿಗ್ವಿಜಯ ಮಹೋತ್ಸವಕ್ಕೆ ಎಲ್ಲೆಡೆಯಿಂದ ಪಾಲ್ಗೊಂಡಿದ್ದ ಶಿಷ್ಯ ವರ್ಗದವರು ಸಂಭ್ರಮವನ್ನು ವ್ಯಕ್ತಪಡಿಸಿದರು. ಭಕ್ತಿ ಪರವಶರಾದ ಜನರು, ಜಯಘೋಷ ಮಾಡಿದರು.[ಬೆಂಗಳೂರಿನಲ್ಲಿ ಸುಗುಣೇಂದ್ರ ತೀರ್ಥರ ಚಾತುರ್ಮಾಸ್ಯ ವ್ರತ]
ಗುರು ಸ್ಮರಣ: ಕಾಶೀಮಠದ ವೃಂದಾವನಸ್ಥ ಯತಿವರ್ಯ ಸುಧೀಂದ್ರ ತೀರ್ಥ ಸ್ವಾಮೀಜಿ ಮೊದಲ ಪುಣ್ಯ ತಿಥಿ 2017ರ ಜನವರಿಯಲ್ಲಿ ಹರಿದ್ವಾರದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಗುರುವರ್ಯರ ಸಮಾಧಿ ಸ್ಥಳದಲ್ಲಿ ನಿರ್ಮಾಣಗೊಳ್ಳುತ್ತಿರುವ ಶಿಲಾಮಯ ವೃಂದಾವನದ ಪ್ರತಿಕೃತಿಯ ಟ್ಯಾಬ್ಲೋ ದಿಗ್ವಿಜಯ ಮಹೋತ್ಸವದಲ್ಲಿ ವಿಶೇಷ ಆಕರ್ಷಣೆಯಾಯಿತು. ಸಂಸ್ಥಾನದ ಮಠಾಧಿಪತಿ ದಿಗ್ವಿಜಯೋತ್ಸವದಲ್ಲಿ ಅವರ ಗುರುಗಳ ಸ್ಮರಣೆಗೂ ಈ ಮೂಲಕ ಅವಕಾಶ ದೊರೆತಂತಾಯಿತು.
ದಿಗ್ವಿಜಯ ಮಹೋತ್ಸವ
ಆಕರ್ಷಕ ರಜತ ಚಿತ್ತಾರದಿಂದ ಕೂಡಿದ ಕೆಂಪು ವರ್ಣದ ಪಾಮರಿಯನ್ನು ಹೊದ್ದ ಶ್ರೀಗಳನ್ನು ಸಂಸ್ಥಾನದ ಸಕಲ ಬಿರುದು ಗೌರವಾದರಗಳೊಂದಿಗೆ ಪುಷ್ಪಾಲಂಕೃತ ರಥದಲ್ಲಿರುವ ರಜತ ಪೀಠಕ್ಕೆ ಸ್ವಾಗತಿಸಲಾಯಿತು. ಮಹೋತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲ ಸಾಂಸ್ಕೃತಿಕ ವೈವಿಧ್ಯಗಳನ್ನು ವೀಕ್ಷಿಸಿದ ಶ್ರೀಗಳು ಪೀಠದಲ್ಲಿ ಕೂರುವುದರೊಂದಿಗೆ ದಿಗ್ವಿಜಯ ಮಹೋತ್ಸವ ಆರಂಭಗೊಂಡಿತು.
ಸಾಂಸ್ಕೃತಿಕ ವೈವಿಧ್ಯ
ತ್ರಿಶೂರಿನ ಆನೆಗಳು, ಎಪ್ಪತ್ತೈದಕ್ಕೂ ಅಧಿಕ ಕಲಾವಿದರನ್ನು ಒಳಗೊಂಡ ಪಂಚ ವಾದ್ಯ ಹಾಗೂ ಚೆಂಡೆ ಮೇಳಗಳ ತಂಡ, ತಮಿಳು ನಾಡಿನ ಕಾವಡಿ ಆಟ ತಂಡ, ತ್ರಿಶೂರಿನ ಹಾಗೂ ಮಂಗಳೂರಿನ ಹುಲಿವೇಷಧಾರಿಗಳು, ಕಲ್ಲಡ್ಕದ ಶಿಲ್ಪಗೊಂಬೆಗಳ ಬಳಗ, ಪಯ್ಯನೂರಿನ ಹದಿನೈದರಷ್ಟು ಪೌರಾಣಿಕ ಸ್ತಬ್ಧ ಚಿತ್ರಗಳು, ಪೂನಾದ ಜಲೂಸ್ ನಾಸಿಕ್ ಬ್ಯಾಂಡ್ ತಂಡ, ಪಂಡರಾಪುರದ ವಿಶೇಷ ವಾರಕರಿ ಸಂಕೀರ್ತನಾ ತಂಡ, ಹೀಗೆ ಸಾಂಸ್ಕೃತಿಕ ವೈವಿಧ್ಯಗಳು ರಂಗೇರಿಸಿದವು.
35 ಸಾವಿರ ಶಿಷ್ಯರು
ಕಾಞಂಗಾಡಿನ ಮುಖ್ಯ ಬೀದಿಯಲ್ಲಿ ನಡೆದ ಈ ವೈಭವದ ಮೆರವಣಿಗೆಗೆ ಕರ್ನಾಟಕ, ಕೇರಳ ಸೇರಿ ವಿವಿಧೆಡೆಯಿಂದ ಸಂಸ್ಥಾನದ ಮೂವತ್ತೈದು ಸಾವಿರಕ್ಕೂ ಅಧಿಕ ಶಿಷ್ಯವರ್ಗ, ಸಮಾಜ ಬಾಂಧವರು, ವಿವಿಧ ದೇವಳಗಳು, ಮಠ, ಮಂದಿರಗಳ ಆಡಳಿತ ಮೊಕ್ತೇಸರರು, ಪ್ರಮುಖರು ಪಾಲ್ಗೊಂಡು, ಶ್ರೀಗಳಿಂದ ಫಲ-ಮಂತ್ರಾಕ್ಷತೆ, ಪ್ರಸಾದ ಸ್ವೀಕರಿಸಿದರು.
ಚಾತುರ್ಮಾಸ ಸಂಪನ್ನ
ದಿಗ್ವಿಜಯ ಮೆರವಣಿಗೆ ಸಾಗುವ ಹಾದಿಯಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿತ್ತು. ಸಾರ್ವಜನಿಕರಿಗೆ ಸಂತರ್ಪಣೆ, ಫಲಾಹಾರದ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ದಿಗ್ವಿಜಯ ಮಹೋತ್ಸವ ತಡರಾತ್ರಿ 3.30ರ ವೇಳೆಗೆ ದೇವಳಕ್ಕೆ ಮರಳಿ ದೇವರ, ಸಂಸ್ಥಾನ ದೇವರ ಭೇಟಿಯೊಂದಿಗೆ ಸಂಪನ್ನಗೊಂಡಿತು. ದೇವಳದ ಆಡಳಿತ ಮಂಡಳಿ, ಚಾತುರ್ಮಾಸ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.