ಉಡುಪಿ; ಅಲೆಗಳ ಅಬ್ಬರಕ್ಕೆ ತೇಲುವ ಸೇತುವೆ ಪೀಸ್ ಪೀಸ್!
ಉಡುಪಿ, ಮೇ 9: ರಾಜ್ಯದ ಮೊದಲ ತೇಲುವ ಸೇತುವೆ ಎಂಬ ಪ್ರಸಿದ್ಧಿ ಪಾತ್ರವಾಗಿದ್ದ ಉಡುಪಿಯ ಮಲ್ಪೆಯ ತೇಲುವ ಸೇತುವೆ ಚಂಡಮಾರುತದ ಹೊಡೆತಕ್ಕೆ ಹಾನಿಯಾಗಿದೆ. ಬಂಗಾಳಕೊಲ್ಲಿಯಲ್ಲಿ ನಿರ್ಮಾಣವಾದ 'ಅಸನಿ' ಚಂಡಮಾರುತದ ಒತ್ತಡದಿಂದ ಆದಿತ್ಯವಾರ ಮಧ್ಯಾಹ್ನ ಬಳಿಕ ಅರಬ್ಬೀ ಸಮುದ್ರ ಪ್ರಕ್ಷುಬ್ಧವಾಗಿದೆ.
ಈ ಹಿನ್ನಲೆಯಲ್ಲಿ ಮಧ್ಯಾಹ್ನದ ಬಳಿಕ ಪ್ರವಾಸಿಗರಿಗೆ ತೇಲುವ ಸೇತುವೆ ಮೇಲೆ ಪ್ರವೇಶ ನಿರಾಕರಿಸಲಾಗಿತ್ತು. ರಾತ್ರಿ ವೇಳೆ ಕಡಲಬ್ಬರ ಮತ್ತೆ ಹೆಚ್ಚಾದ ಹಿನ್ನಲೆಯಲ್ಲಿ ಸೇತುವೆಗೆ ಹಾನಿಯಾಗಿದೆ. ಬ್ರಿಕ್ಸ್ಗಳು ಸಮುದ್ರದ ಅಲೆಯ ಅಬ್ಬರದಿಂದ ಹಾನಿಗೊಂಡಿವೆ.
Breaking; ಕರ್ನಾಟಕದ ಮೊದಲ ತೇಲುವ ಸೇತುವೆಗೆ ಹಾನಿ
ಈ ಸೇತುವೆ ನೋಡಲೆಂದೇ ಶನಿವಾರ ಮತ್ತು ಭಾನುವಾರ ಸಾವಿರಾರು ಪ್ರವಾಸಿಗರು ಬಂದಿದ್ದರು. ಉಡುಪಿ ಜಿಲ್ಲೆ ಮಾತ್ರವಲ್ಲದೆ ಹೊರಜಿಲ್ಲೆಗಳಿಂದ ಅಧಿಕ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿದ್ದರು. ಭಾನುವಾರ ಒಂದೇ ದಿನ ಮಲ್ಪೆ ಬೀಚ್ಗೆ 30 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದರು.
ಅಲೆಗಳ ಮೇಲೆ ವಾಂಕಿಂಗ್; ಮಲ್ಪೆಯ ತೇಲುವ ಸೇತುವೆ ವಿಶೇಷ
80 ಲಕ್ಷದಲ್ಲಿ ನಿರ್ಮಾಣ
3.5 ಮೀಟರ್ ಅಗಲ ಮತ್ತು 100 ಮೀಟರ್ ಉದ್ದದ ಈ ತೇಲುವ ಸೇತುವೆಯನ್ನು ಸ್ಥಳೀಯ ಮೂವರು ಉದ್ಯಮಿಗಳು ಸುಮಾರು 80 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದರು. ಆಗಮಿಸುವ ಪ್ರವಾಸಿಗರಿಗೆ ಲೈಫ್ ಜಾಕೆಟ್, ಲೈಫ್ ಗಾರ್ಡ್ಗಳು ಸೇರಿದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಪ್ರವಾಸಿಗರನ್ನು ಬಿಡಲಾಗಿತ್ತು. ಮೇ 6ರಂದು ಸೇತುವೆ ಉದ್ಘಾಟನೆಯಾಗಿತ್ತು.
ಸೇತುವೆ ಮರುಜೋಡಣೆ ಪ್ರಕ್ರಿಯೆ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ 'ಅಸನಿ' ಚಂಡಮಾರುತ ಉಂಟಾದ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನದಿಂದಲೇ ಕಡಲು ಪ್ರಕ್ಷುಬ್ದಗೊಂಡಿತ್ತು. ಬೃಹತ್ ಗಾತ್ರದ ಅಲೆಗಳು ಬಂದು ಅಪಾಯದ ಮುನ್ಸೂಚನೆ ಸಿಕ್ಕಿದ್ದವು. ಈ ಹಿನ್ನೆಲೆ ಭಾನುವಾರ ಸಂಜೆ 4 ಗಂಟೆಯಿಂದಲೇ ವಾಟರ್ ಸ್ಪೋರ್ಟ್ಸ ಮತ್ತು ತೇಲುವ ಸೇತುವೆ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ರಾತ್ರಿ ವೇಳೆಗೆ ಕಡಲು ಇನ್ನಷ್ಟು ಪ್ರಕ್ಷುಬ್ದಗೊಂಡು ರಕ್ಕಸ ಗಾತ್ರದ ಅಲೆಗಳು ಕಡಲತೀರಕ್ಕೆ ಅಪ್ಪಳಿಸಿದ ಪರಿಣಾಮ ತೇಲುವ ಸೇತುವೆಯು ಛಿದ್ರಗೊಂಡು ಅದರ ಬಿಡಿ ಭಾಗಗಳು ಸಮುದ್ರ ಪಾಲಾಗಿವೆ. ಮತ್ತೊಂದೆಡೆ ಸೇತುವೆಯನ್ನು ಮರುಜೋಡಿಸುವ ಪ್ರಕ್ರಿಯೆ ನಡೆಯುತ್ತಿದೆ.
ಸೇತುವೆ ಮೇಲೆ ಜಾರಿದ ಉಡುಪಿ ಶಾಸಕ
ಶನಿವಾರ ಉಡುಪಿ ಶಾಸಕ ರಘುಪತಿ ಭಟ್ ತೇಲುವ ಸೇತುವೆ ಮೇಲೆ ತೆರಳಿದ್ದರು. ಸೇತುವೆಯನ್ನು ವೀಕ್ಷಿಸಿ ವಾಪಸ್ ನಡೆದುಕೊಂಡು ಬರುತ್ತಿದ್ದ ವೇಳೆ ಅವರು ಕಡಲ ಅಲೆಯ ಅಬ್ಬರದ ಏರಿಳಿತಕ್ಕೆ ಸಿಲುಕಿ ಕಾಲುಜಾರಿ ಸೇತುವೆಯ ಮೇಲೆ ಬಿದ್ದಿದ್ದರು. ರಘುಪತಿ ಭಟ್ ತೇಲುವ ಸೇತುವೆಯ ಮೇಲೆ ಜಾರಿ ಬಿದ್ದದ್ದನ್ನು ನೆಟ್ಟಿಗರು ರಾಜಕೀಯ ನೆಲೆಯಲ್ಲಿ ವಿಡಂಬಣೆ ಮಾಡಿದ್ದರು. ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್ನಿಂದ ಬಿಜೆಪಿಗೆ ಕಾಲಿಡುತ್ತಿದ್ದಂತೆ ಬಿಜೆಪಿ ಶಾಸಕ ರಘುಪತಿ ಭಟ್ ಅವರು ಕಾಲು ಜಾರಿ ಬಿದ್ದಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಇನ್ನೂ ಕೆಲವರು ರಘುಪತಿ ಭಟ್ಟರ ಕಾಲ್ಗುಣ ನೋಡಿ, ಅವರು ಸೇತುವೆ ಮೇಲೆ ಜಾರಿ ಬಿದ್ದದ್ದೇ ತಡ, ತೇಲುವ ಸೇತುವೆಯೇ ಕುಸಿತ ಕಂಡಿದೆ ಎಂದು ಕಾಲೆಳೆದಿದ್ದರು.
ರಾಜ್ಯದ ಮೊದಲ ತೇಲುವ ಸೇತುವೆ
ರಾಜ್ಯದ ಮೊದಲ ತೇಲುವ ಸೇತುವೆ ಉದ್ಘಾಟನೆಗೊಂಡ ಕೇವಲ ಎರಡೇ ದಿನಕ್ಕೆ ಕುಸಿತ ಕಂಡಿದೆ. ಅಲೆಗಳ ಅಬ್ಬರಕ್ಕೆ ಸೇತುವೆ ತುಂಡಾಗಿದೆ. ಬ್ಲಾಕ್ಗಳು ಚೆಲ್ಲಾಪಿಲ್ಲಿಯಾಗಿದ್ದು, ವಿಡಿಯೋ ವೈರಲ್ ಆಗಿದೆ. ನಿರ್ವಹಣೆಯ ದೃಷ್ಟಿಯಿಂದ ತೇಲುವ ಸೇತುವೆ ಕಾರ್ಯ ಸ್ಥಗಿತಗೊಳಿಸಿದ್ದೇವೆ ಅಂತಾ ಸೇತುವೆ ಮೇಲ್ವಿಚಾರಕರು ಹೇಳಿದ್ದಾರೆ. ಥಾಯ್ ಲ್ಯಾಂಡ್ನಿಂದ 80 ಲಕ್ಷ ವೆಚ್ಚದಲ್ಲಿ ಆಮದು ಮಾಡಿಕೊಂಡಿದ್ದ ತೇಲುವ ಸೇತುವೆ ಇದಾಗಿದ್ದು, ಜಿಲ್ಲಾಡಳಿತದ ಅನುಮತಿ ಯೊಂದಿಗೆ ಮೂವರು ಉದ್ಯಮಿಗಳ ಬಂಡವಾಳದಿಂದ ಸೇತುವೆ ನಿರ್ಮಾಣ ಮಾಡಲಾಗಿತ್ತು.