ಎಸ್ಸೆಸ್ಸೆಲ್ಸಿಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳಿಬ್ಬರು ರಾಜ್ಯಕ್ಕೆ ತೃತೀಯ ಸ್ಥಾನ
ಮೂಡುಬಿದಿರೆ, ಮೇ 12 : ಬಹುಕಾತುರದಿಂದ ಕಾಯುತ್ತಿದ್ದ ಎಸ್ಎಸ್ಎಲ್ಸಿ ಫಲಿತಾಂಶ ಇಂದು (ಮೇ 12) ಪ್ರಕಟಗೊಂಡಿದೆ. ಇದರಲ್ಲಿ ಮೂಡುಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಆಳ್ವಾಸ್ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದು ಸಂಸ್ಥೆಗೆ ಹಾಗೂ ಹೆತ್ತವರಿಗೆ ಕೀರ್ತಿ ತಂದಿದ್ದಾರೆ.
ಅಕಾಶ್ ಎಂ ನಾಯರಿ ಮತ್ತು ದೀಕ್ಷಾ ಎಂ.ಎನ್ ಈ ಇಬ್ಬರು ವಿದ್ಯಾರ್ಥಿಗಳು 625 ಅಂಕಗಳಿಗೆ ತಲಾ 623 ಅಂಕ ಪಡೆಯುವುದರ ಮೂಲಕ ರಾಜ್ಯಕ್ಕೆ ಮೂರನೇ ಸ್ಥಾನಗಳಿಸಿದ್ದಾರೆ. [ನೂರಕ್ಕೆ ನೂರು ಮಾರ್ಕ್ಸ್ ತಗೊಳ್ಳೋದು ಅಂದ್ರೆ ಸುಮ್ನೇನಾ?]
ಬೆಂಗಳೂರು ಯಲಹಂಕ ನ್ಯೂಟೌನ್ ನಲ್ಲಿ ಬೇಕರಿ ಉದ್ಯಮ ನಡೆಸುತ್ತಿರುವ ಮಂಜುನಾಥ ಎನ್. ನಾಯರಿ ಹಾಗೂ ಗೀತಾ ಎಂ. ದಂಪತಿಯ ಪುತ್ರ ಆಕಾಶ್ ಎಂ. ನಾಯರಿ, ಗಣಿತ, ಇಂಗ್ಲಿಷ್, ವಿಜ್ಞಾನ ಹಾಗೂ ಸಮಾಜದಲ್ಲಿ 100ಕ್ಕೆ ನೂರು, ಕನ್ನಡದಲ್ಲಿ 100ಕ್ಕೆ 99, ಹಾಗೂ ಪ್ರಥಮ ಭಾಷೆ ಸಂಸ್ಕೃತದಲ್ಲಿ 125ಕ್ಕೆ 124 ಅಂಕಗಳನ್ನು ಪಡೆದಿದ್ದಾರೆ.
ಇನ್ನೋರ್ವ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಚಾಮರಾಜ ನಗರ ಜಿಲ್ಲೆಯ ಯಲಂದೂರಿನ ದೀಕ್ಷಾ, ಗಣಿತ ಹಾಗೂ ಇಂಗ್ಲೀಷ್ ನಲ್ಲಿ 99, ಉಳಿದ ಎಲ್ಲಾ ಮೂರು ವಿಷಯಗಳಲ್ಲಿ 100ಕ್ಕೆ 100 ಮತ್ತು ಕನ್ನಡದಲ್ಲಿ 125 ಅಂಕಗಳನ್ನು ಪಡೆದು ಈ ಸಾಧನೆ ಮಾಡಿದ್ದಾರೆ.