ಮಲಯಾಳಿ ಭಾಷೆ ಮಸೂದೆ ಖಂಡಿಸಿದ ಕರ್ನಾಟಕ ರಕ್ಷಣಾ ವೇದಿಕೆ
ಮಂಗಳೂರು,ಫೆಬ್ರವರಿ,06: ಕಾಸರಗೋಡು ಎಂದಿಗೂ ಕರ್ನಾಟಕದ ಭಾಗ, ಅಲ್ಲಿನ ಕನ್ನಡಿಗರ ಪರ ಧ್ವನಿ ಎತ್ತಲು ಸಾಧ್ಯವಾಗದ ಮಂಜೇಶ್ವರ ಕಾಸರಗೋಡಿನ ಇಬ್ಬರೂ ಶಾಸಕರೂ ಕೂಡಲೇ ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ವಕ್ತಾರ ರಹೀಂ ಉಚ್ಚಿಲ್ ಒತ್ತಾಯಿಸಿದರು.
ಕೇರಳ ಸರ್ಕಾರ ಕಾಸರಗೋಡು ಜಿಲ್ಲೆಯ ಗಡಿನಾಡ ಕನ್ನಡಿಗರ ಭಾಷಾ ಸ್ವಾತಂತ್ರ್ಯಕ್ಕೆ ಹಾಗೂ ಸಂವಿಧಾನ ಬದ್ಧ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಮಲಯಾಳಿ ಭಾಷೆ ಅಸ್ತಿತ್ವದ ಮಸೂದೆ ಜಾರಿಯಾದರೂ ಅದರ ವಿರುದ್ಧ ಧ್ವನಿ ಎತ್ತಲು ಶಾಸಕರು ವಿಫಲರಾಗಿದ್ದಾರೆ ಎಂದು ವಿರೋಧಿಸಿದ ಕರ್ನಾಟಕ ರಕ್ಷಣಾ ವೇದಿಕೆ ತಲಪಾಡಿಯಲ್ಲಿ ಶನಿವಾರ ಪ್ರತಿಭಟನೆ ಹಮ್ಮಿಕೊಂಡು ರಸ್ತೆ ತಡೆ ನಡೆಸಿದರು.[ಸೋಲಾರ್ ಹಗರಣ: ಉಮ್ಮನ್ ಚಾಂಡಿ ವಿರುದ್ಧ ಎಫ್ಐಆರ್ ಗೆ ಅನುಮತಿ]
ಕಾಸರಗೋಡಿನಲ್ಲಿ ಕನ್ನಡ ಭಾಷೆಯನ್ನು ನಿರ್ನಾಮ ಮಾಡುವ ಕೇರಳ ಸರಕಾರ ಕನ್ನಡಿಗರ ಸ್ವಾಭಿಮಾನವನ್ನು ಪ್ರಶ್ನಿಸಲು ಮುಂದಾಗಿದೆ. ಕಾಸರಗೋಡಿನ ಕನ್ನಡಿಗರು ಎಂದಿಗೂ ಅನಾಥರಲ್ಲ. ಅವರೊಂದಿಗೆ ಕರ್ನಾಟಕದ 5 ಕೋಟಿ ಜನ ಇದ್ದಾರೆ. ಭಾಷೆಯನ್ನು ಅಳಿಸಲು ಹೊರಟರೆ ಸಾಯುವವರೆಗೂ ಹೋರಾಡಿ ಕನ್ನಡಿಗರ ಅಸ್ತಿತ್ವ ಉಳಿಸುತ್ತೇವೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಕೇರಳದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಬೀದಿಪಾಲಾಗಲಿರುವ ಕನ್ನಡ ಶಾಲೆಗಳು: 1969ರಲ್ಲಿ ಸಂವಿಧಾನದಲ್ಲಿ ಉಲ್ಲೇಖದಂತೆ ಅವರವರ ಪ್ರಾದೇಶಿಕ ಭಾಷೆ ಉಪಯೋಗಿಸುವ ಮಸೂದೆಯಿದೆ. ಆದರೆ ಡಿಸೆಂಬರ್ ತಿಂಗಳಲ್ಲಿ ಕೇರಳ ಸರಕಾರ ಜಾರಿ ಮಾಡಿದ ಮಸೂದೆಯಲ್ಲಿ ಎಲ್ಲಾ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಲಯಾಳಿ ಭಾಷೆಯನ್ನೇ ಉಪಯೋಗಿಸಬೇಕು ಎಂದಿದೆ.
ಕರ್ನಾಟಕದ ಗಡಿನಾಡಲ್ಲಿರುವ 192 ಕನ್ನಡ ಮಾಧ್ಯಮ ಶಾಲೆಗಳು ಹಾಗೂ ಅದರಲ್ಲಿ ಶಿಕ್ಷಣ ಪಡೆಯುತ್ತಿರುವ ಸುಮಾರು 11,400 ಮಂದಿ ವಿದ್ಯಾರ್ಥಿಗಳು ಬೀದಿ ಪಾಲಾಗಲಿದ್ದಾರೆ. ವ್ಯವಹರಿಸುವ ಕಡತಗಳೆಲ್ಲವೂ ಮಲಯಾಳಿಯಲ್ಲೇ ಇದೆ ಎಂದು ಗಡಿನಾಡು ಕನ್ನಡಿಗ ಹಾಗೂ ಶಿಕ್ಷಕ ಸದಾಶಿವ ರಾವ್ ತಿಳಿಸಿದ್ದಾರೆ.[ಭಾರತದ ಹೆಣ್ಮಕ್ಕಳ ಶಿಕ್ಷಣಕ್ಕೆ ಆಸ್ಟ್ರೇಲಿಯಾದಿಂದ 4 ಲಕ್ಷ 80 ಸಾವಿರ?]
ರಸ್ತೆ ತಡೆ ಬಂಧನ : ಕರ್ನಾಟಕ ರಕ್ಷಣಾ ವೇದಿಕೆಯ ಸುಮಾರು 100 ರಷ್ಟು ಕಾರ್ಯಕರ್ತರು ತಲಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ನ್ನು ಅರ್ಧಗಂಟೆ ತಡೆದವರನ್ನು ಸಮಾಧಾನಿಸಲು ಯತ್ನಿಸಿ ಬಳಿಕ ಕಾರ್ಯಕರ್ತರನ್ನು ಬಂಧಿಸಿದರು.[ಕರವೇ ಜಿಲ್ಲಾಧ್ಯಕ್ಷ ಗಡಿಪಾರು ಖಂಡಿಸಿ, ಸಿಎಂಗೆ ಆನ್ ಲೈನ್ ಅರ್ಜಿ]
ಈ ವೇಳೆ ಜಿಲ್ಲಾಧ್ಯಕ್ಷ ಅನಿಲ್ ದಾಸ್, ನಝೀರ್ ಹುಸೈನ್ ಬೆಂಗ್ರೆ, ಉಡುಪಿ ಜಿಲ್ಲಾಧ್ಯಕ್ಷ ಎಸ್.ಆರ್.ಲೋಬೊ, ಸುದೇಶ್ ಶೇಟ್, ಸುಮಸೂದನ ಗೌಡ, ಅಶೋಕ್, ಸುಬ್ಬಯ್ಯ, ಎನ್.ಎ.ಹಂಝ, ಅರುಣ್ ಕುಮಾರ್, ಮೂಸಿರ್ ಅಹಮ್ಮದ್ ರಾಜೇಶ್, ಜಲೀಲ್ , ಮೊೈದೀನ್ ಮೊದಲಾದವರು ಉಪಸ್ಥಿತರಿದ್ದರು.