ವರ್ಗಾವಣೆ ಚಿಂತೆಯಲ್ಲಿ ಪೊಲೀಸರು ಮಲಬಾರಿ ಬಂಧನ ಅವಕಾಶ ಕೈ ಬಿಟ್ಟರಾ?
ಮಂಗಳೂರು, ಆಗಸ್ಟ್ 8: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ, ವಿದೇಶಕ್ಕೆ ಪರಾರಿಯಾಗಿದ್ದ ರಶೀದ್ ಮಲಬಾರಿ ಬಂಧನದ ಅವಕಾಶ ಕೈ ತಪ್ಪಿ ಹೋಗಿದೆ. ಆತನನ್ನು ಬಂಧಿಸಿ, ರಾಜ್ಯಕ್ಕೆ ಕರೆತರುವುದಕ್ಕೆ ರಾಜ್ಯ ಪೊಲೀಸರಿಗೆ ಇದ್ದ ಬಂಗಾರದಂಥ ಅವಕಾಶ ಕಣ್ಣೆದುರೇ ಕರಗಿಹೋಗಿದೆ.
ಕಳೆದ ಜೂನ್ 28ರಂದು ಅಬುಧಾಬಿ ಪೊಲೀಸರು ರಶೀದ್ ಮಲಬಾರಿಯನ್ನು ಬಂಧಿಸಿದ್ದರು. ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಈ ರಶೀದ್ ಮಲಬಾರಿಯನ್ನು ಬಂಧಿಸಿ, ಕರೆತರುವ ವಿಚಾರವಾಗಿ ರಾಜ್ಯ ಪೊಲೀಸ್ ಇಲಾಖೆಯು ಮೀನ-ಮೇಷ ಎಣಿಸುತ್ತಿತ್ತು. ಅಷ್ಟರಲ್ಲಿ ಮಲಬಾರಿಯನ್ನು ಅಬುಧಾಬಿ ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರಿನಿಂದ ಪರಾರಿಯಾಗಿದ್ದ ದಾವೂದ್ ಗ್ಯಾಂಗಿನ ರಶೀದ್ ಮಲಬಾರಿ ಬಂಧನ
ಆ ನಂತರ ಮತ್ತೆ ಭೂಗತನಾಗಿದ್ದಾನೆ. ಅಲ್ಲಿಗೆ ರಶೀದ್ ಮಲಬಾರಿಯ ಬಂಧನಕ್ಕೆ ಇದ್ದ ಅವಕಾಶವನ್ನು ರಾಜ್ಯ ಪೊಲೀಸ್ ಇಲಾಖೆ ಕೈ ಚೆಲ್ಲಿದೆ. ಇದೀಗ ಈ ವೈಫಲ್ಯಕ್ಕೆ ಯಾರು ಕಾರಣ ಎಂಬ ಪ್ರಶ್ನೆ ಕೇಳಲಾರಂಭಿಸಿದೆ. ಬಾಂಗ್ಲಾದೇಶದ ವೀಸಾದಡಿ ನಕಲಿ ಪಾಸ್ ಪೋರ್ಟ್ ನಲ್ಲಿ ಪ್ರಯಾಣಿಸಿದ ರಶೀದ್ ಮಲಬಾರಿಯನ್ನು ಅಬುಧಾಬಿ ಪೊಲೀಸರು ಬಂಧಿಸಿದ್ದರು.
ರಾಜ್ಯದಲ್ಲಿ ಆಧಿಕಾರಕ್ಕೆ ಬಂದಿರುವ ಮೈತ್ರಿ ಸರಕಾರದಲ್ಲಿ ವರ್ಗಾವಣೆ ಬಯಸಿ, ಅದಕ್ಕಾಗಿ ಓಡಾಡಿಕೊಂಡಿದ್ದ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಅವಾಂತರ ನಡೆದಿದೆ ಎಂಬುದು ಸದ್ಯಕ್ಕೆ ಜೋರಾಗಿ ಕೇಳಿಬರುತ್ತಿರುವ ಮಾಹಿತಿ. ರಶೀದ್ ನನ್ನು ವಶಕ್ಕೆ ಪಡೆಯಲು ರಾಜ್ಯ ಪೊಲೀಸರಿಗೆ 30 ದಿನಗಳ ಕಾಲಾವಕಾಶ ಇತ್ತು.
ಕರ್ನಾಟಕ, ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ತಮಿಳುನಾಡಿನಲ್ಲಿ ಹತ್ತಾರು ಪ್ರಕರಣಗಳಲ್ಲಿ ರಶೀದ್ ಮೋಸ್ಟ ವಾಂಟೆಡ್. ರಾಜ್ಯದ ಮಂಗಳೂರು, ಉಡುಪಿ, ಬೆಳಗಾವಿ, ಬೆಂಗಳೂರಿನಲ್ಲಿ ಕೊಲೆ, ಕೊಲೆಬೆದರಿಕೆ, ಅಪಹರಣ, ಬೆದರಿಕೆ , ಹಫ್ತಾ ವಸೂಲಿ ಸೇರಿದಂತೆ ಒಟ್ಟು 16 ಪ್ರಕರಣಗಳು ಅವನ ವಿರುದ್ಧ ದಾಖಲಾಗಿವೆ.
ರಶೀದ್ ಮಲಬಾರಿ ವಿರುದ್ಧದ ಆರೋಪ ಹಾಗೂ ಆತನಿಗೆ ದಾವೂದ್ ಇಬ್ರಾಹಿಂ ಜತೆಗೆ ಇರುವ ನಂಟನ್ನು ಸಾಬೀತುಪಡಿಸುವ ದಾಖಲಾತಿಗಳು ಮಂಗಳೂರು ಪೊಲೀಸರ ಬಳಿ ಇತ್ತು. ರಶೀದ್ ವಿರುದ್ಧ ಇರುವ ಎಲ್ಲ ದಾಖಲಾತಿಗಳನ್ನು ಒಟ್ಟಾಗಿಸಿ, ಇಂಟರ್ ಪೋಲ್ ಪೊಲೀಸರ ಮೂಲಕ ಅಬುಧಾಬಿಗೆ ರವಾನಿಸಿ, ಹಸ್ತಾಂತರ ಬೇಡಿಕೆಯನ್ನು ಕ್ರಮ ಬದ್ಧವಾಗಿ ಮಾಡಿದ್ದರೆ ಸಾಕಿತ್ತು. ಆತ ಇಷ್ಟೊತ್ತಿಗಾಗಲೇ ರಾಜ್ಯದ ಜೈಲಿನಲ್ಲಿರುತ್ತಿದ್ದ.