ಕರಾವಳಿಯಲ್ಲಿ ಅಬ್ಬರಿಸುತ್ತಿದೆ ಮಳೆ; ಅಪಾಯದಲ್ಲಿದ್ದ 85 ಜನರ ರಕ್ಷಣೆ
ಮಂಗಳೂರು, ಆಗಸ್ಟ್ 11: ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮಳೆಯ ಆರ್ಭಟ ಹೆಚ್ಚಾಗಿದ್ದು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ನೂರಾರು ಮನೆಗಳು ಜಲಾವೃತವಾಗಿವೆ. ಚಾರ್ಮಾಡಿ, ನೆರಿಯ, ಬಂಟ್ವಾಳದ ಆನಡ್ಕ, ಪಾಣೆಮಗಳೂರು, ಭಂಡಾರಿ ಬೆಟ್ಟು, ದೈವಗಿಡ್ಡೆ, ಜಪ್ಪಿನಮೊಗರು ಮೊದಲಾದೆಡೆ ಸೇರಿ ತಗ್ಗು ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗಿದೆ.
500ಕ್ಕೂ ಮಿಕ್ಕಿದ ಮನೆಗಳು ಜಲಾವೃತವಾಗಿರುವುದಾಗಿ ಅಂದಾಜಿಸಲಾಗಿದ್ದು, ಸಂತ್ರಸ್ತರಿಗೆ ಅಲ್ಲಲ್ಲಿ ಗಂಜಿ ಕೇಂದ್ರಗಳನ್ನೂ ತೆರೆಯಲಾಗಿದೆ. ನದಿ ತೀರದಲ್ಲಿರುವ ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ನೇತ್ರಾವತಿ ನದಿಯ ನೀರಿನ ಮಟ್ಟ ವಿಪರೀತ ಏರಿಕೆಯಾದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಬಹುತೇಕ ಭಾಗ ಹಾಗೂ ಬೆಳ್ತಂಗಡಿ ತಾಲೂಕಿನ ಬಹುತೇಕ ಕಡೆ ಜಲಾವೃತಗೊಂಡಿದೆ.
ಮಹಾ ಮಳೆಗೆ ಚಿಕ್ಕಮಗಳೂರಿನಲ್ಲಿ ಮುಂದುವರಿದ ಸಾವಿನ ಸರಣಿ; ಗುಡ್ಡ ಕುಸಿತ, ಸಂಪರ್ಕ ಕಡಿತ
ಬೆಳ್ತಂಗಡಿಯ ಚಾರ್ಮಾಡಿ , ಬಾಂಜಾರು ಮಲೆಯಲ್ಲಿ ಸೇತುವೆ ಕೊಚ್ಚಿ ಹೋಗಿದ್ದು, ಬಂಜಾರುಮಲೆಯಲ್ಲಿ ಅಪಾಯದಲ್ಲಿದ್ದ 85 ಜನರನ್ನು ಎನ್ ಡಿಆರ್ ಎಫ್ ತಂಡ ರಕ್ಷಣೆ ಮಾಡಿದೆ. ಇಬ್ಬರು ಗರ್ಭಿಣಿಯರು ಮತ್ತು ಎರಡು ಹಸುಗೂಸನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.
ಈ ಮಧ್ಯೆ ಬಂಟ್ವಾಳ ಪೇಟೆ ಬಹುತೇಕ ಜಲಾವೃತವಾಗಿದ್ದು, ಮಂಗಳೂರು- ಕಡೂರು ರಸ್ತೆಯ ಜಕ್ರಿಬೆಟ್ಟು ಎಂಬಲ್ಲಿ ನೇತ್ರಾವತಿ ನದಿ ನೀರು ರಸ್ತೆಗೆ ನುಗ್ಗಿದ ಪರಿಣಾಮ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿತ್ತು.
ಪ್ರವಾಹದ ಭೀತಿಯಲ್ಲಿದ್ದ ಉಪ್ಪಿನಂಗಡಿಯಲ್ಲಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ನೀರಿನ ಮಟ್ಟ ಸಂಜೆ ಆಗುತ್ತಿದ್ದಂತೆ ಇಳಿಕೆಯಾಗಿದೆ. ಆದರೆ ಬಂಟ್ವಾಳ, ಮಂಗಳೂರಿನ ಜಪ್ಪಿನಮೊಗರು ಮೊದಲಾದ ಪ್ರದೇಶಗಳಲ್ಲಿ ನೇತ್ರಾವತಿ ನೀರು ನುಗ್ಗುತ್ತಿದ್ದು, ಹಲವು ಪ್ರದೇಶಗಳು ದ್ವೀಪದಂತಾಗಿವೆ. ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ಮಂಗಳೂರಿನ ಮೀನುಗಾರಿಕೆ ಬಂದರಿನಲ್ಲಿ ಲಂಗರು ಹಾಕಿದ ನೂರಾರು ದೋಣಿಗಳಿಗೂ ತೊಂದರೆಯಾಗಿದೆ.
ಬಂದರು ಪ್ರದೇಶದ ಹಿನ್ನೀರಿನಲ್ಲಿ ದೋಣಿಗಳನ್ನು ಲಂಗರು ಹಾಕಿರುವ ಪ್ರದೇಶದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ದೋಣಿಗಳು ನೀರಿನಿಂದ ಮೇಲೇಳುತ್ತಿವೆ. ಇದರಿಂದಾಗಿ ಅವುಗಳಿಗೆ ಹಾನಿಯಾಗುವ ಆತಂಕದಲ್ಲಿ ಮೀನುಗಾರರಿದ್ದಾರೆ. ಮಂಗಳೂರಿನ ಸುಲ್ತಾನ ಬತ್ತೇರಿ ಪ್ರದೇಶದಲ್ಲಿಯೂ ನೀರಿನ ಮಟ್ಟ ಹೆಚ್ಚುತ್ತಿದ್ದು, ಸುತ್ತಮುತ್ತಲ ಜನರಲ್ಲಿ ಆತಂಕ ಹೆಚ್ಚಿಸಿದೆ.
17 ಜಿಲ್ಲೆಗಳ 80 ತಾಲೂಕು ಪ್ರವಾಹ ಪೀಡಿತ, ಸರ್ಕಾರದ ಘೋಷಣೆ
ಮಳೆ ನೀರಿನಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿ ಹೋದ ಘಟನೆ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ. ಪುತ್ತೂರಿನ ಜಿಡೆಕಲ್ಲು ಎಂಬಲ್ಲಿ ಘಟನೆ ನಡೆದಿದ್ದು, ಮೃತ ಪಟ್ಟವರನ್ನು ಜನಾರ್ದನ (30) ಎಂದು ಗುರುತಿಸಲಾಗಿದೆ. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಕಾಲು ಸಂಕದಿಂದ ಆಕಸ್ಮಿಕವಾಗಿ ಬಿದ್ದ ಪರಿಣಾಮ ನೀರಿನಲ್ಲಿ ಕೊಚ್ಚಿಹೋಗಿ, ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.