ದಕ್ಷಿಣಕನ್ನಡ: ಬಂಟ ಸಮುದಾಯಕ್ಕೆ ಬಿಜೆಪಿ ಮಣೆ, ಭುಗಿಲೆದ್ದ ಅಸಮಾಧಾನ
ಮಂಗಳೂರು, ಏಪ್ರಿಲ್ 21: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಜಿಲ್ಲೆಯ ಎಲ್ಲಾ 8 ವಿಧಾನ ಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಬಿಜೆಪಿ ಘೋಷಿಸಿದ್ದು 8 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಜಿಲ್ಲೆಯ ಪ್ರಭಾವಿ ಬಂಟ ಸಮುದಾಯಕ್ಕೆ ಬಿಜೆಪಿ ವರಿಷ್ಠರು ಟಿಕೆಟ್ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದ್ದು ಜಿಲ್ಲೆಯ ಕಮಲ ಪಾಳಯದಲ್ಲಿ ಬಂಡಾಯ ಸ್ಪೋಟಗೊಳ್ಳುವ ಪರಿಸ್ಥಿತಿ ಸೃಷ್ಠಿಯಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಹರೀಶ್ ಪೂಂಜಾ, ಬಂಟ್ವಾಳ ಕ್ಷೇತ್ರಕ್ಕೆ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮಂಗಳೂರು ವಿಧಾನ ಸಬಾ ಕ್ಷೇತ್ರದಿಂದ ಸಂತೋಷ್ ರೈ ಬೋಳಿಯಾರ್ ಮತ್ತು ಮಂಗಳೂರು ಉತ್ತರ ಕ್ಷೇತ್ರ ದಿಂದ ಡಾ. ಭರತ್ ಶೆಟ್ಟಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ . ಈ ಎಲ್ಲಾ ಅಭ್ಯರ್ಥಿಗಳು ಪ್ರಭಾವಿ ಬಂಟ ಸಮುದಾಯಕ್ಕೆ ಸೇರಿದವರು ಎಂಬುದು ಗಮನಾರ್ಹ.
ಕಗ್ಗಂಟಾಗಿದ್ದ ಮಂಗಳೂರಿನ 3 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು ಘೋಷಣೆ
ಜಿಲ್ಲೆಯ ಬಿಜೆಪಿ ಪಾಳಯಲ್ಲಿ ಬಂಡಾಯ ಉಂಟಾಗುವ ಪರಿಸ್ಥಿತಿ ಇದ್ದು, ಈಗಾಗಲೇ ಮಾಜಿ ಸಚಿವ ಕೃಷ್ಣ ಪಾಲೇಮರ್ ಅವರು ಭಿನ್ನಾಭಿಪ್ರಾಯದ ಧನಿ ಎತ್ತಿದ್ದಾರೆ. ಬಿಜೆಪಿ ವರಿಷ್ಠರು ಸಾಮಾಜಿಕ ನ್ಯಾಯ ಕದಡಿದ್ದಾರೆ, ಬಿಜೆಪಿಯ ಹಿಂದುಳಿದ ಕಾರ್ಯಕರ್ತರಿಗೆ ಅವಮಾನ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಿಂದೂ ವಿಚಾರ ಧಾರೆ, ಸಂಘಟನೆ ಶಕ್ತಿ ಮೇಲೆ ಈ ಬಾರಿ ಗೆಲುವು: ನಳಿನ್
ನಾಲ್ಕು ಬಂಟ ಸಮುದಾಯದ ಅಭ್ಯರ್ಥಿಗಳ ವಿವರ ತಿಳಿಯಲು ಮುಂದೆ ಓದಿ
ಬಂಟ ಸಮುದಾಯಕ್ಕೆ ಸೇರಿದ ಡಾ.ಭರತ್ ಶೆಟ್ಟಿ
ಮಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಗಿಟ್ಟಿಸಿರುವ ಡಾ. ಭರತ್ ಶೆಟ್ಟಿ ಕೂಡ ಬಂಟ ಸಮುದಾಯಕ್ಕೆ ಸೇರಿದವರು. ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಭರತ್ ಶೆಟ್ಟಿ ಬಿಜೆಪಿಯ ಯುವ ಮೋರ್ಚಾದ ನಾಯಕತ್ವ ವಹಿಸಿಕೊಂಡಿದ್ದರು. ಜೊತೆಗೆ ಬಿಜೆಪಿ ರಾಜ್ಯ ಘಟಕದಲ್ಲೂ ಪ್ರಭಾವ ಬೀರಬಲ್ಲ ಚಾಕಚಕ್ಯತೆ ಡಾ. ಭರತ್ ಶೆಟ್ಟಿ ಹೊಂದಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಎ.ಜೆ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಡಿನ್ ಆಗಿ ಸೇವೆ ಸಲ್ಲಿಸುತ್ತಿದ್ದು ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಮರನಾಥ್ ಶೆಟ್ಟಿ ಅವರ ಅಳಿಯ. ಬಿಜೆಪಿ , ಜೆಡಿಎಸ್ ಮೈತ್ರಿ ಸರಕಾರದ ಸಂದರ್ಭದಲ್ಲಿಜೆಡಿಎಸ್ ನಲ್ಲಿದ್ದ ಡಾ. ಭರತ್ ಶೆಟ್ಟಿ ಬಳಿಕ ತಮ್ಮ ನಿಷ್ಟೆಯನ್ನು ಬಿಜೆಪಿಗೆ ಬದಲಾಯಿಸಿದ್ದರು.
ಬೆಳ್ತಂಗಡಿ ಕ್ಷೇತ್ರದಿಂದ ಹರೀಶ್ ಪೂಂಜಾ
ಬೆಳ್ತಂಗಡಿ ಕ್ಷೇತ್ರದಿಂದ ಸ್ಪರ್ಧಿಸಲು ಅಣಿಯಾಗಿರುವ ಬಿಜೆಪಿ ಯುವ ಮುಖಂಡ ಹರೀಶ್ ಪೂಂಜಾ ಕೂಡ ಬಂಟ ಸಮುದಾಯಕ್ಕೆ ಸೇರಿದವರು. ವಿದ್ಯಾರ್ಥಿ ಪರಿಷತ್ ನಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ ಪೂಂಜಾ ಅರವಿಂದ ಲಿಂಬಾವಳಿ ಅವರ ಅಪ್ತರು ಎನ್ನು ಮಾತಿದೆ . ವೃತ್ತಿಯಲ್ಲಿ ಹೈಕೋರ್ಟ್ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಪೂಂಜಾ ರಾಜ್ಯ ನಾಯಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ.
ಯುಟಿ ಖಾದರ್ ಎದುರು ಸಂತೋಶ್ ರೈ
ಮಂಗಳೂರು ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ನ ಅಭ್ಯರ್ಥಿ ಸಚಿವ ಯು .ಟಿ ಖಾದರ್ ವಿರುದ್ದ ಬಿಜೆಪಿ ಈ ಬಾರೀ ಬಿಜೆಪಿ ಯುವ ಮುಖಂಡ ಸಂತೋಷ್ ರೈ ಬೋಳಿಯಾರ್ ಅವರನ್ನು ಕಣಕ್ಕಿಳಿಸಿದೆ . ಸಂತೋಷ್ ರೈ ಬೋಳಿಯಾರ್ ಕೂಡ ಬಂಟ ಸಮುದಾಯಕ್ಕೆ ಸೇರಿದವರು. ಜಿಲ್ಲಾ ಪಂಚಾಯತ್ ಸದಸ್ಯರಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವ ಸಂತೋಷ್ ಕುಮಾರ್ ಅವರಿಗೆ ಕಳೆದ ಬಾರಿ ಟಿಕೆಟ್ ದೊರಕಿರಲಿಲ್ಲ. ಆದರೆ ವಿಧಾನಸಭಾ ಚುನಾವಣೆಯತ್ತ ಆಗಲೇ ಗಮನ ಹರಿಸಿದ್ದ ಸಂತೋಷ್ ರೈ, ಮುಸ್ಲಿಂ ಸಮುದಾಯದವರಲ್ಲೂ ಚಿರಪರಿಚಿತರು.
ಬಂಟ್ವಾಳ ಕ್ಷೇತ್ರದಿಂದ ರಾಜೇಶ್ ನಾಯ್ಕ
ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಕುತೂಹಲ ಕೆರಳಿಸಿರುವ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಚಿವ ಬಿ. ರಮಾನಾಥ ರೈ ಅವರಿಗೆ ಎದುರಾಗಿ ಉಳಿಪಾಡಿ ರಾಜೇಶ್ ನಾಯ್ಕ್ ಅಖಾಡಕ್ಕೆ ಇಳಿದಿದ್ದಾರೆ . ಸಾವಯವ ಕೃಷಿಕರಾಗಿರುವ ರಾಜೇಶ್ ನಾಯ್ಕ್ ಕಳೆದ ಬಾರಿ 2013 ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ರಮಾನಾಥ್ ರೈ ವಿರುದ್ಧ ಪರಾಭವ ಗೊಂಡಿದ್ದರು. ಆದರೆ ಈ ಬಾರಿ ಮತ್ತೆ ಕ್ಷೇತ್ರದಿಂದ ಸ್ಪರ್ಧಿಸಲು ರಾಜೇಶ್ ನಾಯ್ಕ್ ಟಿಕೆಟ್ ಪಡೆಯಲು ಸಫಲರಾಗಿದ್ದಾರೆ. ಬಂಟ ಸಮುದಾಯಕ್ಕೆ ಸೇರಿದ ರಾಜೇಶ್ ನಾಯ್ಕ್ ಈಗಾಗಲೇ ಕ್ಷೇತ್ರದಾದ್ಯಂತ ತಿರುಗಾಡಿ ಪಕ್ಷ ಸಂಘಟಿಸಿದ್ದಾರೆ.
ಸಂಸದ ನಳೀನ್ ಕುಮಾರ್ ಕಟೀಲ್ ಪ್ರಭಾವ?
ಈ ಬಾರಿ ಚುನಾವಣೆಗೆ ಬಿಜೆಪಿ ವರಿಷ್ಠರು ಬಂಟ ಸಮುದಾಯದವರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಬಿಜೆಪಿ ವರಿಷ್ಠರ ಈ ಧೋರಣೆ ಯ ಹಿಂದೆ ಸಂಸದ ನಳಿನ್ ಕುಮಾರ್ ಕಟೀಲ್ ಪ್ರಭಾವ ವಿದೆ ಎಂದು ಆರೋಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಅಸಮಾಧಾನ ಗೊಂಡಿದ್ದು ಜಿಲ್ಲೆ ಯಲ್ಲಿ ಬಂಡಾಯ ಭುಗಿಲೇಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.