ಕರ್ನಾಟಕ- ಕೇರಳ ಗಡಿ ಈಗ ಭಾರತ- ಪಾಕಿಸ್ತಾನ ಗಡಿಯಂತಾಗಿದೆ; ಕೇರಳಿಗರ ಆಕ್ರೋಶ
ಮಂಗಳೂರು, ಆಗಸ್ಟ್ 03: ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಮಂಗಳೂರು- ಕೇರಳ ಸಂಪರ್ಕದ ತಲಪಾಡಿ ಗಡಿಭಾಗದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಒಂದು ಕೆಎಸ್ಆರ್ಪಿ ತುಕಡಿ ಸೇರಿದಂತೆ ನೂರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆಯಂತೆ ಎಡಿಜಿಪಿ ಪ್ರತಾಪ್ ರೆಡ್ಡಿ ಕರ್ನಾಟಕ- ಕೇರಳ ಗಡಿಭಾಗದ ತಲಪಾಡಿ ಚೆಕ್ಪೋಸ್ಟ್ಗೆ ಭೇಟಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ತಲಪಾಡಿ ಗಡಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದ ಎಡಿಜಿಪಿ ಪ್ರತಾಪ್ ರೆಡ್ಡಿ, ಕರ್ನಾಟಕ ಹಾಗೂ ಕೇರಳ ಗಡಿಯಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆ ಸೇರಿ ತಪಾಸಣೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
ದಿಢೀರ್ ಕೋವಿಡ್ ಪರೀಕ್ಷೆ ನಿಲ್ಲಿಸಿದ ದಕ್ಷಿಣ ಕನ್ನಡ ಜಿಲ್ಲಾಡಳಿತ: ಕೇರಳಿಗರ ಆಕ್ರೋಶ!
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರರವರು ಎಡಿಜಿಪಿ ಪ್ರತಾಪ್ ರೆಡ್ಡಿಗೆ ಮಾಹಿತಿ ನೀಡಿದ್ದು, ಮಂಗಳೂರು ಕಮಿಷನರ್ ಎನ್. ಶಶಿಕುಮಾರ್, ಎಸ್ಪಿ ಖುಷಿಕೇಷ್ ಸೋನಾವಣೆ ಸಾಥ್ ನೀಡಿದ್ದಾರೆ. ಕೊರೊನಾ ನೆಗೆಟಿವ್ ರಿಪೋರ್ಟ್ ಇಲ್ಲದೇ ಗಡಿ ಪ್ರವೇಶ ಕೊಡಬೇಡಿ ಅಂತ ಖಡಕ್ ಸೂಚನೆ ನೀಡಲಾಗಿದ್ದು, ಪೊಲೀಸ್ ಅಧಿಕಾರಿಗಳು ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆದೇಶ ಮಾಡಿದ್ದಾರೆ.
ನೆಗೆಟಿವ್ ವರದಿ ಇಲ್ಲದವರಿಗೆ ಪ್ರವೇಶವಿಲ್ಲ
ತಲಪಾಡಿ ಗಡಿಯಲ್ಲಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪ್ರತಾಪ್ ರೆಡ್ಡಿ, "ರಾಜ್ಯ ಸರ್ಕಾರದ ಸೂಚನೆಯಂತೆ ಕೊರೊನಾ ನೆಗೆಟಿವ್ ವರದಿ ಇಲ್ಲದವರಿಗೆ ಕರ್ನಾಟಕ ಪ್ರವೇಶ ನೀಡುವುದಿಲ್ಲ. ಕೇವಲ ತುರ್ತು ಭೇಟಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೇರಳ ಭಾಗದ ವಿದ್ಯಾರ್ಥಿಗಳು ಪರೀಕ್ಷಾ ಹಾಲ್ ಟಿಕೆಟ್ ತೋರಿಸಿದರೆ ಬಿಡಲಾಗುತ್ತದೆ. ಕಾಸರಗೋಡು ಭಾಗದಲ್ಲಿ ಕೊರೊನಾ ಸೋಂಕು ಅತೀ ಹೆಚ್ಚು ಇದ್ದು, ಹೀಗಾಗಿ ಬಿಗಿ ತಪಾಸಣೆ ಮಾಡುತ್ತಿದ್ದೇವೆ,'' ಎಂದರು.
ರೈಲು ಮಾರ್ಗವಾಗಿ ಬಂದವರನ್ನೂ ಪರೀಕ್ಷೆ
"ಕೇರಳದಿಂದ ರೈಲು ಮಾರ್ಗವಾಗಿ ಬಂದವರನ್ನೂ ಪರೀಕ್ಷೆ ಮಾಡುತ್ತಿದ್ದೇವೆ. ಮಂಗಳೂರಿನ ಟೌನ್ಹಾಲ್ನಲ್ಲಿ ಪರೀಕ್ಷಾ ಕೇಂದ್ರ ತೆರೆದಿದ್ದೇವೆ. ಕಾಸರಗೋಡು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ದಕ್ಷಿಣ ಕನ್ನಡ ಜಿಲ್ಲೆಯ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಉಭಯ ಜಿಲ್ಲೆಗಳ ನಡುವೆ ಯಾವುದೇ ಗೊಂದಲಗಳಿಲ್ಲ. ಕೇರಳದಲ್ಲಿ ಕೊರೊನಾ ಸೋಂಕು ಪ್ರಕರಣ ಕಡಿಮೆಯಾಗುವ ತನಕ ಈ ನಿರ್ಬಂಧ ಇರುತ್ತದೆ,'' ಎಂದು ಎಡಿಜಿಪಿ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ
ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ ನೀಡುತ್ತಿದ್ದಂತೆಯೇ ಹೆದ್ದಾರಿ ಬಂದ್ ಮಾಡಿದ್ದಾರೆ. ತಲಪಾಡಿ ಗಡಿ ಬಂದ್ ವಿರೋಧಿಸಿ ಕೇರಳಿಗರಿಂದ ಗಡಿಭಾಗದಲ್ಲಿ ಪ್ರತಿಭಟನೆ ನಡೆಸಿದರು. ಕೇರಳ ಭಾಗದ ರಸ್ತೆ ಬಂದ್ ಮಾಡಿ ಕೇರಳಿಗರು ಪ್ರತಿಭಟನೆ ಮಾಡಿದ್ದು, ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇರಳಕ್ಕೆ ತೆರಳುವ ರಸ್ತೆಗೆ ಅಡ್ಡಲಾಗಿ ನಿಂತು ಪ್ರತಿಭಟನೆ ಮಾಡಿದ್ದರಿಂದ, ಕೆಲಹೊತ್ತು ತಲಪಾಡಿ ಗಡಿಯಲ್ಲಿ ಕೇರಳಕ್ಕೆ ತೆರಳಲು ವಾಹನಗಳು ಸಾಲು ನಿಂತಿದ್ದವು.
ಕರ್ನಾಟಕ ಸರ್ಕಾರದ ಆಕ್ರೋಶ
ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೇರಳ ಪ್ರತಿಭಟನಾಕಾರರು, ಕರ್ನಾಟಕ ಸರ್ಕಾರದ ಧೋರಣೆ ಕೇಂದ್ರ ಸರ್ಕಾರದ ಕಾನೂನುನಿಗೆ ವಿರುದ್ಧವಾಗಿದೆ. ಆದೇಶದ ಪ್ರಕಾರ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುವಂತಿಲ್ಲ. ಆದರೂ ಕರ್ನಾಟಕ ಸರ್ಕಾರ ಹೆದ್ದಾರಿ ಬಂದ್ ಮಾಡಿದೆ. ಕೇರಳದಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚಾಗಿದ್ದಲ್ಲಿ, ಗಡಿಯಲ್ಲಿ ಆರ್ಟಿ- ಪಿಸಿಆರ್ ಟೆಸ್ಟ್ ಮಾಡಬೇಕು. ಈಗ ಆ ಟೆಸ್ಟ್ ಕೂಡಾ ನಿಲ್ಲಿಸಲಾಗಿದೆ,'' ಎಂದು ದೂರಿದರು.
"ಗಡಿನಾಡ ಕನ್ನಡಿಗರು ಅತೀ ಹೆಚ್ಚಾಗಿ ಮಂಗಳೂರನ್ನು ಆಶ್ರಯಿಸುತ್ತಾರೆ. ಹೀಗಾಗಿ ಬಹಳ ಸಮಸ್ಯೆಯಾಗುತ್ತಿದೆ. ಕೇರಳ- ದಕ್ಷಿಣ ಕನ್ನಡ ಗಡಿಯಲ್ಲಿ ಪೊಲೀಸರು ಲಾಠಿ ಹಿಡಿದು ನಿಲ್ಲಿಸುತ್ತಿದ್ದಾರೆ. ಕೇರಳ ಭಾಗದಿಂದ ಬರುವವರನ್ನು ಅಪರಾಧಿ ಭಾವನೆಯಿಂದ ನೋಡಿಕೊಳ್ಳಲಾಗುತ್ತಿದೆ,'' ಎಂದು ಗಡಿನಾಡ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.