ಸಿಎಂ ಬೊಮ್ಮಾಯಿ ಪರ ನಿಂತು ಕೇರಳಿಗರಿಗೆ ಯು.ಟಿ.ಖಾದರ್ ಫುಲ್ ಕ್ಲಾಸ್
ಮಂಗಳೂರು, ಆಗಸ್ಟ್ 13: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕೇರಳ ಗಡಿ ಭೇಟಿ ರದ್ದಾದ ವಿಚಾರದಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಯು.ಟಿ.ಖಾದರ್ ಅವರು ಕೇರಳದ ಕೆಲವು ಸಂಘಟನೆಗಳಿಗೆ ಫುಲ್ ಕ್ಲಾಸ್ ನೀಡುವ ಮೂಲಕ, ರಾಜಕೀಯ ಬೇರೆ, ರಾಜ್ಯದ ವಿಚಾರ ಬೇರೆ ಎಂದು ಸಾರಿದ್ದಾರೆ.
ಎರಡು ದಿನಗಳ ಮುಖ್ಯಮಂತ್ರಿಗಳ ಕರಾವಳಿ ಜಿಲ್ಲೆಗಳ ಪ್ರವಾಸದ (ದಕ್ಷಿಣ ಕನ್ನಡ, ಉಡುಪಿ) ಅಂತಿಮ ಚರಣವಾಗಿ, ಸಿಎಂ ಬೊಮ್ಮಾಯಿ, ಕೇರಳ ಜಿಲ್ಲೆಗೆ ಹೊಂದಿಕೊಂಡಿರುವಂತಹ ಗಡಿಗಳಿಗೆ ಭೇಟಿ ನೀಡಬೇಕಿತ್ತು. ಆದರೆ, ಅದು ರದ್ದಾಗಿತ್ತು.
ಉಳ್ಳಾಲದಲ್ಲಿ ಹಿಂದೂ ಸಂಘಟನೆಗಳಿಗೆ ಸವಾಲೆಸೆದ ಯು.ಟಿ. ಖಾದರ್!
ದಕ್ಷಿಣ ಕನ್ನಡ ಜಿಲ್ಲಾಡಳಿತ ಮುಖ್ಯಮಂತ್ರಿಗಳ ಭೇಟಿಗೆ ಸಜ್ಜಾಗಿತ್ತು, ಸೂಕ್ತ ಬಂದೋಬಸ್ತ್ ಮಾಡಿತ್ತು. ಆದರೆ, ಉಡುಪಿ ಜಿಲ್ಲೆಯ ಭೇಟಿಯ ವೇಳೆ, ಗುಪ್ತಚರ ಇಲಾಖೆಯ ಮಾಹಿತಿ ಬಂದ ನಂತರ, ಸಿಎಂ ಈ ಕಾರ್ಯಕ್ರಮವನ್ನು ರದ್ದು ಪಡಿಸಿದ್ದರು.
ಕರ್ನಾಟಕದ ಸಿಎಂ ಹೆದರಿ ಗಡಿ ಭೇಟಿಯನ್ನು ರದ್ದು ಮಾಡಿದ್ದಾರೆ ಎನ್ನುವ ಸಂದೇಶಗಳು ಸಾಮಾಜಿಕ ತಾಣದಲ್ಲಿ ಹರಿದಾಡಲಾರಂಭಿಸಿದ್ದವು. ಇದಕ್ಕೆ, ಖಡಕ್ ತಿರುಗೇಟು ನೀಡಿರುವ ಖಾದರ್, ಅವರು ನಮ್ಮ ಮುಖ್ಯಮಂತ್ರಿಗಳು, ನಮ್ಮ ವಿಚಾರವನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಮಕ್ಕಳು ಬ್ಯಾಟ್ ಕೊಳ್ಳಲು ಸಹಾಯ ಮಾಡಿದ ಯು. ಟಿ. ಖಾದರ್
ಗಡಿ ಭೇಟಿ ರದ್ದಾದ ಹಿನ್ನಲೆಯಲ್ಲಿ ಉಡುಪಿಯಲ್ಲೇ ಸಿಎಂ ಉಳಿದಿದ್ದರು
ಎರಡು ದಿನಗಳ ದಕ್ಷಿಣ ಕನ್ನಡ, ಉಡುಪಿ ಪ್ರವಾಸದ ವೇಳೆ, ಮೊದಲ ದಿನ ಮಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ವಾಸ್ತವ್ಯ ಹೂಡಬೇಕಾಗಿತ್ತು. ಆದರೆ, ಗಡಿ ಭೇಟಿ ರದ್ದಾದ ಹಿನ್ನಲೆಯಲ್ಲಿ ಉಡುಪಿಯಲ್ಲೇ ಸಿಎಂ ಉಳಿದಿದ್ದರು. ಕೇರಳದ ಕೆಲವು ಸಂಘಟನೆಗಳು ಗಡಿ ಭೇಟಿಯ ವೇಳೆ (ತಲಪಾಡಿ ಗಡಿ) ಸಿಎಂ ವಿರುದ್ದ ಪ್ರತಿಭಟನೆ ನಡೆಸಲು ಮುಂದಾಗಿದ್ದವು. ಈ ಪ್ರತಿಭಟನೆಯ ಬಗ್ಗೆ ಗುಪ್ತಚರ ಇಲಾಖೆ, ಸಿಎಂ ಕಚೇರಿಗೆ ಮಾಹಿತಿಯನ್ನು ನೀಡಿತ್ತು. (ಗುಪ್ತಚರ ಇಲಾಖೆ ಸಿಎಂ ಸುಪರ್ದಿಯಲ್ಲೇ ಇದೆ)
ಕೇರಳದಿಂದ ಬರುವವರಿಗೆ ನೆಗೆಟೀವ್ ವರದಿ ಕಡ್ಡಾಯ ಎನ್ನುವ ರೂಲ್ಸ್
ಕೇರಳದಿಂದ ಬರುವವರಿಗೆ ನೆಗೆಟೀವ್ ವರದಿ ಕಡ್ಡಾಯ ಎನ್ನುವ ರೂಲ್ಸ್ ಅನ್ನು ಬೊಮ್ಮಾಯಿ ಸರಕಾರ ತಂದಿತ್ತು. ಇದು ಗಡಿ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿತ್ತು, ಆದರೆ ಸಿಎಂ ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಹಾಗಾಗಿ, ಬೊಮ್ಮಾಯಿಯವರು ಗಡಿ ಭೇಟಿಗೆ ಬಂದಾಗ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲು ಕೇರಳದ ಕೆಲವು ಸಂಘಟನೆಗಳು ಮುಂದಾಗಿದ್ದವು. ಆದರೆ, ಸಿಎಂ ಭೇಟಿ ರದ್ದಾದ ಹಿನ್ನಲೆಯಲ್ಲಿ, 'ಕರ್ನಾಟಕದ ಸಿಎಂ ನಮಗೆ ಹೆದರಿ ಇಲ್ಲಿಗೆ ಬರಲಿಲ್ಲ' ಎಂದು ಸಾಮಾಜಿಕ ತಾಣದಲ್ಲಿ ಈ ಸಂಘಟನೆಗಳು ವ್ಯಂಗ್ಯವಾಡಿದ್ದವು.
ಬಸವರಾಜ ಬೊಮ್ಮಾಯಿಯವರು ನಮ್ಮ ಮುಖ್ಯಮಂತ್ರಿಗಳು
ಈ ಬಗ್ಗೆ ಪ್ರತಿಕ್ರಿಯಿಸಿರುವ ಯು.ಟಿ.ಖಾದರ್, "ಕೇರಳದಲ್ಲಿ ತೊಂಬತ್ತು ಪರ್ಸೆಂಟ್ ಜನ ಒಳ್ಳೆಯವರು, ಈ ರೀತಿಯ ಐದೋ, ಹತ್ತೋ ಪರ್ಸೆಂಟ್ ಜನಗಳು/ಸಂಘಟನೆಗಳು ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿಯವರು ನಮ್ಮ ಮುಖ್ಯಮಂತ್ರಿಗಳು, ನಮ್ಮ ರಾಜ್ಯದ ಜನತೆಯ ಆರೋಗ್ಯದ ದೃಷ್ಟಿಯಿಂದ ಸೂಕ್ತವಾದ ಕ್ರಮಗಳನ್ನು ಅವರು ತೆಗೆದುಕೊಳ್ಳುತ್ತಾರೆ"ಎಂದು ಕೇರಳದ ಸಂಘಟನೆಗಳಿಗೆ ತಿರುಗೇಟು ನೀಡಿದ್ದಾರೆ.
ಅವರು ನಮ್ಮ ಸಿಎಂ, ಅವರಿಗೆ ಅವಮಾನ ಮಾಡಿದರೆ ನಮಗೆ ಸಹಿಸಲು ಸಾಧ್ಯವಿಲ್ಲ
"ಕೇರಳದ ಸಂಘಟನೆಗಳ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ, ಅವರು ನಮ್ಮ ಸಿಎಂ, ಅವರಿಗೆ ಅವಮಾನ ಮಾಡಿದರೆ ನಮಗೆ ಸಹಿಸಲು ಸಾಧ್ಯವಿಲ್ಲ. ಕರ್ನಾಟಕ ಮತ್ತು ಕೇರಳದವರು ಗಡಿಯಲ್ಲಿ ಸಹೋದರರ ರೀತಿಯಲ್ಲಿ ಬದುಕುತ್ತಿದ್ದೇವೆ. ಈ ಸೌಹಾರ್ದಯುತ ವಾತಾವರಣವನ್ನು ಹಾಳು ಮಾಡುವ ಪ್ರಯತ್ನವನ್ನು ಮಾಡಬೇಡಿ" ಎಂದು ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.