ಕಾಂತಾರ ಸಿನಿಮಾ: ದೈವ ಕೂಗು ಅನುಕರಿಸದಿರಿ, ನಂಬಿಕೆಗೆ ಬೆಲೆ ಕೊಡಿ: ರಿಷಬ್ ಶೆಟ್ಟಿ ಮನವಿ
ಮಂಗಳೂರು, ಅಕ್ಟೋಬರ್ 04: ದೈವ ಆಕರ್ಷಣೆ ಆದಾಗ ಮಾಡುವ ಕೂಗನ್ನು ಯಾರೂ ಅನುಕರಣೆ ಮಾಡಬೇಡಿ ಎಂದು ಕಾಂತಾರ ಚಿತ್ರದ ನಟ ರಿಷಬ್ ಶೆಟ್ಟಿ ಮಂಗಳೂರಿನಲ್ಲಿ ಹೇಳಿದ್ದಾರೆ.
ಕಾಂತಾರ ಚಿತ್ರ ತಂಡ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಮಾತನಾಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಸಿನಿಮಾದಲ್ಲಿ ನನ್ನ ಪಾತ್ರ ದೈವಾ ವೇಶದಲ್ಲಿ ಬೊಬ್ಬೆಯಿಡುವ ಒಂದು ದೃಶ್ಯವಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಅದರ ಅನುಕರಣೆ ಮಾಡಲಾಗುತ್ತಿದೆ. ದೈವಾರಾಧನೆ ಒಂದು ಆಚಾರಣೆಯ ಭಾಗವಾಗಿದ್ದು, ಅದು ನಂಬಿಕೆಯ ಸಂಗತಿ ಆಗಿದೆ. ದೈವಾರಾಧನೆಯ ಆಳ, ಅಗಲ ಎಷ್ಟು, ಏನು ಎಂದು ತಿಳಿದು ಎಲ್ಲರೂ ವ್ಯವಹಾರ ಮಾಡಬೇಕು ಎಂದು ಹೇಳಿದ್ದಾರೆ. ದಯವಿಟ್ಟು ಯಾರೂ ದೈವದಂತೆ ಕೂಗು ಹಾಕುವುದನ್ನು ಯಾರೂ ಅನುಕರಣೆ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
ಕಾಂತಾರ ಸಿನಿಮಾದಲ್ಲಿ ಬರುವ ಪಂಜುರ್ಲಿ, ಗುಳಿಗ ದೈವ ಶಕ್ತಿ ಏನು? ತುಳುನಾಡಿನಲ್ಲಿ ಯಾಕಷ್ಟು ಪ್ರಾಮುಖ್ಯತೆ?
ಕಾಂತಾರ ಸಿನಿಮಾವನ್ನು ನಿರ್ಮಿಸುವ ಮೊದಲೇ ಅದನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಎಂಬ ಒತ್ತಾಯ ಕೇಳಿ ಬಂದಿತ್ತು. ಆದರೆ ಮೊದಲಾಗಿ ಕನ್ನಡದಲ್ಲೇ ಮಾಡಬೇಕು ಎನ್ನುವ ಒತ್ತಾಯದಿಂದ ಈ ಸಿನಿಮಾವನ್ನು ಕನ್ನಡದಲ್ಲಿ ಮಾತ್ರ ನಿರ್ಮಾಣ ಮಾಡಲಾಗಿದೆ. ಇದೀಗ ಈ ಸಿನಿಮಾಕ್ಕೆ ವಿಶ್ವಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಸಂತೋಷದ ವಿಚಾರ ಎಂದು ರಿಷಭ್ ಶೆಟ್ಟಿ ಹೇಳಿದ್ದಾರೆ. ಇದೀಗ ಸಿನಿಮಾದ ಬಗ್ಗೆ ಎಲ್ಲೆಡೆ ಜನರು ಮಾತನಾಡತೊಡಗಿದ್ದು, ಬೇರೆ ಭಾಷೆಗಳಿಗೂ ಡಬ್ ಮಾಡಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿದೆ. ಎರಡು ದಿನಗಳಲ್ಲಿ ಕಾಂತಾರ ಸಿನಿಮಾವನ್ನು ಇತರ ಭಾಷೆಗಳಿಗೂ ಡಬ್ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದ್ದಾರೆ.
ಕಾಂತಾರ ಸಿನಿಮಾದ ಬಗ್ಗೆ ನಟ ರಿಷಬ್ ಹೇಳಿದ್ದೇನು?
ಇತ್ತೀಚಿನ ದಿನಗಳಲ್ಲಿ ಸಿನಿಮಾಗಳು ಹೌಸ್ ಫುಲ್ ಆಗಿ ಪ್ರದರ್ಶನ ಆಗುವುದು, ಸಿನಿಮಾ ಟಿಕೆಟ್ ಸೋಲ್ಡ್ ಔಟ್ ಆಗುವುದು ಕನಸಿನ ಮಾತಾಗಿದೆ. ಆದರೆ ಕಾಂತಾರ ಸಿನಿಮಾ ಹೌಸ್ ಫುಲ್ ಆಗಿ ಪ್ರದರ್ಶನ ಕಂಡಿದ್ದು, ಜನರು ಟಿಕೆಟ್ಗಾಗಿ ಕಾಯುವ ಸ್ಥಿತಿ ನಿರ್ಮಾಣ ಆಗಿರುವುದು ಸಂತೋಷದ ವಿಚಾರ. ಕಾಂತಾರ ಸಿನಿಮಾ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷದ ಕಥೆಯಿಂದ ಕೂಡಿದೆ. ದೈವಾರಾಧನೆಯ ಹಿನ್ನೆಲೆಯುಳ್ಳ ಈ ಸಿನಿಮಾವನ್ನು ನಾವು ಅತ್ಯಂತ ಶ್ರದ್ಧೆ ಭಕ್ತಿಯಿಂದ ಮಾಡಿದ್ದೇವೆ. ಒಟ್ಟಿನಲ್ಲಿ ನಾವು ಈ ಸಿನಿಮಾ ಮಾಡಿದ್ದೇವೆ ಅನ್ನುವುದಕ್ಕಿಂತ, ಆ ದೈವವೇ ನಮ್ಮಿಂದ ಈ ಸಿನಿಮಾ ಮಾಡಿಸಿದೆ ಎನ್ನುವುದೇ ಸೂಕ್ತ ಎಂದು ರಿಷಬ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಮಂಗಳೂರಿನಲ್ಲಿ ಪಿಲಿ ಪರ್ಬ ಅಬ್ಬರ- ಪೊಳಲಿ ಟೈಗರ್ಸ್ ಗೆ ಪಿಲಿ ಕಿರೀಟ
ಖಡಕ್ ಆಗಿ ತೆರೆ ಮೇಲೆ ಕಾಣಿಸಿಕೊಂಡ ಸಪ್ತಮಿ
ಇನ್ನು ಸಿನಿಮಾದ ನಾಯಕಿ 'ಲೀಲಾ' ಪಾತ್ರದಲ್ಲಿ ಸಪ್ತಮಿ ಗೌಡ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಧನಂಜಯ್ ಅಭಿನಯದ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಅವರು ಪಾದಾರ್ಪಣೆ ಮಾಡಿದ್ದಾರೆ. ಹಾಗೆಯೇ ಅವರು ಕಾಂತಾರದ ಮೂಲಕ ಕನ್ನಡದಲ್ಲಿ ಎರಡನೇ ಸಿನಿಮಾದಲ್ಲಿ ಪಾತ್ರ ಮಾಡಿದ್ದಾರೆ. ಕಾಂತಾರ ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಅವರು 'ಇದು ತಮ್ಮ ಎರಡನೇ ಸಿನಿಮಾ ಆಗಿದೆ. ಇದರಲ್ಲಿ ಪಾರೆಸ್ಟ್ ಆಫೀಸರ್ ಗಾರ್ಡ್ ಆಗಿ ಕಾಣಿಸಿಕೊಂಡಿದ್ದೇನೆ. ಇದು ಹಾಗೆ ಹೋಗಿ ಬಂದು ಹೋಗುವ ಪಾತ್ರವಲ್ಲ. ನನ್ನ ಪಾತ್ರಕ್ಕೆ ಅದರದ್ದೇ ಆದ ತೂಕ ಇದೆ' ಎಂದು ಹೇಳಿದರು.
ಕಾಂತರ ಸಿನಿಮಾ ನೋಡಿ ಎಂದು ನಟಿ ಮನವಿ
ಸಿನಿಮಾ ಬಿಡುಗೆರ ಆದ ಬಳಿಕ ನನ್ನ ಲೀಲಾ ಪಾತ್ರ ಹಾಗೂ ಸಿಂಗಾರ ಸಿರಿ ಹಾಡಿಗೆ ಬಹಳಷ್ಟು ಜನರು ಪ್ರೀತಿ ತೋರಿಸುತ್ತಿದ್ದಾರೆ. ಈ ಸಿನಿಮಾಕ್ಕಾಗಿ ನಾನು ಮಂಗಳೂರು ಭಾಷೆಯನ್ನು ಕಲಿತು ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದೇನೆ. ಆದರೆ ಪ್ರೇಕ್ಷಕರು ನಾನು ಮಂಗಳೂರು ಹುಡುಗಿ ಅಂತಲೇ ನಂಬಿದ್ದಾರೆ. ಅಷ್ಟು ಚೆನ್ನಾಗಿ ಪಾತ್ರ ಮೂಡಿ ಬಂದಿದೆ. ಆದ್ದರಿಂದ ಎಲ್ಲರೂ ಕಾಂತಾರ ಸಿನಿಮಾ ನೋಡಿ ಎಂದು ಮನವಿ ಮಾಡಿದ್ದಾರೆ.
ನರ್ತಕ ಮುಖೇಶ್ ನೀಡಿದ ಸಲಹೆ ಏನು?
ದೈವಾರಾಧನೆಯ ಕಥೆಯುಳ್ಳ ಸಿನಿಮಾ, ನಾಟಕ ಇತ್ಯಾದಿ ಮಾಡುವ ಸಂದರ್ಭದಲ್ಲಿ ಬಹಳ ಜಾಗರೂಕತೆಯಿಂದ ಇರಬೇಕಾಗುತ್ತದೆ. ಸ್ವಲ್ಪ ದಾರಿ ತಪ್ಪಿದ್ದರೂ ಇಡೀ ಸಿನಿಮಾ ತಂಡ ಭಾರೀ ಟೀಕೆಗೆ, ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಕಾಂತಾರ ಸಿನಿಮಾವೂ ಕಾಡು, ಪ್ರಕೃತಿ-ಮನುಷ್ಯ ಸಂಬಂಧ, ಕರಾವಳಿಯ ದೈವಾರಾಧನೆಯ ಹಿನ್ನೆಲೆ ಇರುವ ಸಿನಿಮಾ ಆಗಿದೆ. ದೈವಾರಾಧನೆಯ ವಿಚಾರದಲ್ಲಿ ಸಿನಿಮಾ ತಂಡಕ್ಕೆ ಸಲಹೆ - ಸಹಕಾರ ನೀಡಿರುವ ದೈವ ನರ್ತಕ ಮುಖೇಶ್ ಅವರು ಸಿನಿಮಾ ತಂಡದ ಬಗ್ಗೆ ತಮ್ಮ ಅಭಿಪ್ರಾಯವನ್ನು ಈ ರೀತಿಯಾಗಿ ಹಂಚಿಕೊಂಡಿದ್ದಾರೆ.
ಕಾಂತಾರ ಆತ್ಮಕ್ಕೆ ಮುಟ್ಟುವ ಕಥೆ ಆಗಿದೆ. ದೈವಾರಾಧನೆಯ ಹಿನ್ನೆಲೆಯುಳ್ಳ ಈ ಸಿನಿಮಾವನ್ನು ಇಡೀ ತಂಡವು ಶ್ರದ್ಧಾ ಭಕ್ತಿಯಿಂದ ಮಾಡಿದೆ. ಮದ್ಯ-ಮಾಂಸವನ್ನು ತ್ಯಜಿಸಿ ಈ ಸಿನಿಮಾ ಮಾಡಲಾಗಿದೆ. ಅಲ್ಲದೆ ಕೋಲದ ಶೂಟಿಂಗ್ ನಡೆಯುವ ಸ್ಥಳದಲ್ಲಿ ಚಪ್ಪಲಿಯನ್ನು ಹಾಕದೆ ಎಲ್ಲರೂ ನಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದ್ದಾರೆ.