ಕೃಷಿಸಿರಿ ಸಮ್ಮೇಳನದಲ್ಲಿ ಕಂಬಳ ಕೋಣಗಳ ಸೌಂದರ್ಯ ಸ್ಫರ್ಧೆ
ಮಂಗಳೂರು, ಡಿಸೆಂಬರ್ 02 : ಅಲ್ಲಿ ಹತ್ತಾರು ಜೋಡಿಗಳು ನವ ತರುಣರಂತೆ ಶೃಂಗಾರಗೊಂಡು ಮಿರಿ ಮಿರಿ ಮಿನುಗುತ್ತಿದ್ದರು.ನಾವ್ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ತಮ್ಮ ಸೌಂದರ್ಯವನ್ನು ನೆರೆದವರ ಮುಂದೆ ಪ್ರದರ್ಶಿಸುತ್ತಿದ್ದರು. ಆ ಜೋಡಿಗಳ ಕಟ್ಟುಮಸ್ತಾದ ದೇಹ ಸೌಂದರ್ಯವನ್ನು ನೋಡಲು ನೆರೆದವರೂ ಮುಗಿ ಬೀಳುತ್ತಿದ್ದರು.
'ರಾಷ್ಟ್ರಗೀತೆ ಹಾಡುವವನು ದೇಶಪ್ರೇಮಿ, ಹಾಡದವನು ದೇಶದ್ರೋಹಿ ಎನ್ನುವುದು ಸರಿಯಲ್ಲ'
ಈ ರೀತಿ ಬಾಡಿ ಬಿಲ್ಡರ್ಗಳಂತೆ ತಮ್ಮ ಕಟ್ಟುಮಸ್ತಾದ ದೇಹ ಸೌಂದರ್ಯವನ್ನು ಪ್ರದರ್ಶಿಸುತ್ತಿರುವ ಕಂಬಳದ ಕೋಣಗಳು. ಅಂತಿಂತ ಕೋಣಗಳಲ್ಲ ತುಳುನಾಡಿ ಜನಪದ ಕ್ರೀಡೆ ಕಂಬಳದ ಗದ್ದೆಯಲ್ಲಿ ಸ್ಪರ್ಧಾಳುಗಳಾಗಿ ಓಡುವ ಓಟದ ಕೋಣಗಳು. ಕಂಬಳ ಗದ್ದೆಯಲ್ಲಿ ಓಡಬೇಕಾಗಿದ್ದ ಈ ಕೋಣಗಳು ಈ ರೀತಿ ಶೃಂಗಾರಗೊಂಡು ನಿಂತಿದ್ದವು. ಈ ದೃಶ್ಯ ಕಂಡುಂದಿದ್ದು ಮೂಡಬಿದ್ರೆಯಲ್ಲಿ .
ಜೈನ ಕಾಶಿ ಮೂಡಬಿದ್ರೆಯಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯ ಭಾಗವಾದ ಕೃಷಿಸಿರಿಯಲ್ಲಿ ಈ ಜೋಡಿ ಕೋಣಗಳು ಸ್ಪರ್ಧಾಳುಗಳಾಗಿ ಭಾಗವಹಿಸಿದವು.ಕೃಷಿಸಿರಿ ಸಮ್ಮೇಳನದ ಭಾಗವಾಗಿ ಕಂಬಳ ಓಟದ ಕೋಣಗಳ ಸೌಂದರ್ಯ ಸ್ಫರ್ಧೆ ಏರ್ಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಪರ್ಧೆಯಲ್ಲಿ ಸುಮಾರು 8 ಜೋಡಿ ಕೋಣಗಳು ಸ್ಪರ್ಧಾಳುಗಳಾಗಿ ಭಾಗವಹಿಸಿದವು. ಸ್ಪರ್ಧೆ ಆರಂಭಕ್ಕೂ ಮುನ್ನಾ ಮೆರವಣಿಗೆಯಲ್ಲಿ ಈ ಕೋಣಗಳನ್ನು ಕರೆ ತಂದಿದ್ದು ಬಳಿಕ ತಮ್ಮ ಸೌಂದರ್ಯವನ್ನು ನೆರೆದ ಜನರ ಮುಂದೆ ಪ್ರದರ್ಶಿಸಿದವು.
ಸ್ಪರ್ಧೆಯಲ್ಲಿ ಭಾಗಿಯಾದ ಕೋಣಗಳನ್ನು ಕಂಬಳದಂದು ಓಟಕ್ಕೆ ಸಿದ್ದತೆ ಪಡಿಸುವಂತೆ ಶೃಂಗಾರಗೊಳಿಸಲಾಗಿತ್ತು.ಜೊತೆಗೆ ಕೋಣಗಳ ಕಟ್ಟುಮಸ್ತಾದ ದೇಹ ಸೌಂದರ್ಯವನ್ನೂ ಇಲ್ಲಿ ಪ್ರದರ್ಶಿಸಲಾಗಿತ್ತು.ಎಲ್ಲಾ 8 ಜೋಡಿಗಳನ್ನು ಅದರ ಸೌಂದರ್ಯ,ದೇಹ ಸೌಂದರ್ಯ ಹಾಗೂ ಶೃಂಗಾರಗೊಳಿಸಿದ ರೀತಿಯಿಂದ ತೀರ್ಪಗಾರರು ಗುರುತಿಸಿ ಮೂರು ಬಹುಮಾನಗಳನ್ನು ನೀಡಲಾಯಿತು.
ಮೊದಲ ಸ್ಥಾನಕ್ಕೆ 50 ಸಾವಿರ, ದ್ವಿತೀಯ ಸ್ಥಾನಕ್ಕೆ 30 ಸಾವಿರ ಹಾಗೂ ತೃತೀಯ ಸ್ಥಾನಕ್ಕೆ 20 ಸಾವಿರ ಹೀಗೆ ಒಟ್ಟು ಒಂದು ಲಕ್ಷದ ರೂಪಾಯಿ ಬಹುಮಾನವನ್ನು ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಕೋಣಗಳ ಮಾಲಕರಿಗೆ ವಿತರಿಸಲಾಯಿತು.ಕಂಬಳದ ಕೋಣಗಳನ್ನು ಕೇವಲ ಕಂಬಳ ಇದ್ದಾಗ ಮಾತ್ರ ಹೊರ ತರುತ್ತಿದ್ದ ಮಾಲಕರು ಇಂದು ಮಾತ್ರ ಕಂಬಳದಂತೆಯೇ ಶೃಂಗರಿಸಿ ಸ್ಪರ್ಧೆಗಾಗಿ ಕರೆತಂದಿದ್ದರು.ಕನ್ನಡ ನುಡಿಸಿರಿಯ ಕಾರ್ಯಕ್ರಮದಲ್ಲೂ ಕಂಬಳದ ಕೋಣಗಳಿಗೆ ತಮ್ಮ ಸೌಂದರ್ಯವನ್ನು ಪ್ರದರ್ಶಿಸಲು ಸಂಘಟಕರು ಅನುವು ಮಾಡಿಕೊಟ್ಟಿದ್ದು ಕೋಣಗಳ ಮಾಲಕರಿಗೂ ಖುಷಿತಂದಿತ್ತು.
ಕಂಬಳದಲ್ಲಿ ಮಾತ್ರ ಈ ಕೋಣಗಳನ್ನು ನೋಡುತ್ತಿದ್ದ ಜನರಿಗೆ ಇದೀಗ ಕೃಷಿಸಿರಿಗೂ ಬಂದಿರುವುದನ್ನು ಕಂಡು ಖುಷಿಪಟ್ಟರು. ಕೆಲವರಂತೂ ಕಂಬಳದ ಕೋಣಗಳ ಜೊತೆ ಸೆಲ್ಫಿ ತೆಗೆದು ಸಂಭ್ರಮಿಸಿದರು.ಒಟ್ಟಿನಲ್ಲಿ ತುಳುನಾಡಿ ಜನಪದ ಕ್ರೀಡೆ ಕಂಬಳದ ಕೋಣಗಳು ಸಾಹಿತ್ಯ ಸಮ್ಮೇಳದಲ್ಲೂ ತನ್ನ ಸೌಂದರ್ಯವನ್ನು ಪ್ರದರ್ಶಿಸಿ ಕನ್ನಡದ ಕಂಪಿನೊಂದಿಗೆ ಕಂಬಳದ ಕಂಪನ್ನು ಪಸರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.