ಗಣರಾಜ್ಯೋತ್ಸವ ಸ್ತಬ್ಧ ಚಿತ್ರದಲ್ಲಿ ಮಂಗಳೂರಿನ ಕಮಲಾದೇವಿ; ಪರಿಚಯ
ಮಂಗಳೂರು, ಜನವರಿ 19; ಗಣರಾಜ್ಯೋತ್ಸವ ಸಂಭ್ರಮಕ್ಕೆ ರಾಷ್ಟ್ರ ಸಜ್ಜಾಗಿದೆ. ಹೊಸ ಸಮವಸ್ತ್ರದೊಂದಿಗೆ ಭಾರತೀಯ ಸೇನೆಯ ಯೋಧರು ರಾಜಪಥದಲ್ಲಿ ಸಿಂಹದ ಹೆಜ್ಜೆಯನ್ನಿಡಲು ತರಬೇತಿ ಪಡೆದಿದ್ದಾರೆ. ಈ ನಡುವೆ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸುವ ಸ್ತಬ್ಧ ಚಿತ್ರಗಳ ಕುರಿತು ರಾಜಕೀಯ ಆರೋಪ ಪ್ರತ್ಯಾರೋಪ ನಡೆದಿದೆ.
ರಾಜ್ಯದಿಂದ 'ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು' ಎಂಬ ವಿಷಯಾಧಾರಿತ ಸ್ತಬ್ಧಚಿತ್ರ ಈ ಬಾರಿಯ ಗಣರಾಜ್ಯೋತ್ಸವ ದಿನಾಚರಣೆಗೆ ಆಯ್ಕೆಯಾಗಿದೆ. ಈ ಸ್ತಬ್ಧಚಿತ್ರದಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯರ ಚಿತ್ರ ಇರಲಿದೆ.
ಗಣರಾಜ್ಯೋತ್ಸವ ಪರೇಡ್; ಕರ್ನಾಟಕದ ಸ್ತಬ್ಧಚಿತ್ರ ಆಯ್ಕೆ
ಯಾರಿದು ಕಮಲಾದೇವಿ ಚಟ್ಟೋಪಾಧ್ಯಾಯ?. ಬಂಗಾಳಿ ಹೆಸರು ಹೊಂದಿರುವ ಕಮಲಾದೇವಿಗೆ ರಾಜ್ಯದ ಸಂಬಂಧವೇನು? ಎಂಬುವುದರ ಬಗ್ಗೆ ಹಲವು ಮಂದಿಗೆ ಗೊಂದಲವಿದೆ. ಕಮಲಾದೇವಿ ಅವರ ಹುಟ್ಟೂರು ರಾಜ್ಯದ ಕಡಲನಗರಿ ಮಂಗಳೂರು ಎನ್ನುವುದು ವಿಶೇಷ.
ನಾರಾಯಣ ಗುರು ಸ್ತಬ್ಧ ಚಿತ್ರ; ಆರೋಪಗಳಿಗೆ ಉತ್ತರಿಸಿದ ಬಿಜೆಪಿ ನಾಯಕರು
ಸ್ವಾತಂತ್ರ್ಯ ಹೋರಾಟಗಾರ್ತಿ, ದೇಶ ಕಂಡ ಅಪೂರ್ವ ಸಮಾಜ ಸುಧಾರಕಿ ಕಮಲಾದೇವಿ ಚಟ್ಟೋಪಾಧ್ಯಾಯ ಮೂಲತಃ ಮಂಗಳೂರಿನವರಾಗಿದ್ದಾರೆ. 1903 ಎಪ್ರಿಲ್ 3 ರಂದು ಮಂಗಳೂರಿನಲ್ಲಿ ಜನಿಸಿದ ಕಮಲಾದೇವಿ ದೇವಿ ತನ್ನ 87ವರ್ಷದ ಜೀವಿತಾವಧಿಯಲ್ಲಿ ಅಪೂರ್ವ ಸಾಧನೆ ಮೆರೆದಿದ್ದಾರೆ.
ಲಾಲ್ ಬಾಗ್; ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ರದ್ದು
ಮಂಗಳೂರಿನ ಅನಂತಯ್ಯ ಧಾರೇಶ್ವರ್ ಮತ್ತು ಗಿರಿಜಾಬಾಯಿ ದಂಪತಿಯ ಪುತ್ರಿಯಾಗಿ ಜನಿಸಿದ ಕಮಲಾದೇವಿಯ ಬಾಲ್ಯ ವರ್ಣರಂಜಿತವಾಗಿರಲಿಲ್ಲ. ಕೇವಲ 15ನೇ ವರ್ಷದಲ್ಲಿ ಬಾಲ್ಯ ವಿವಾಹ ಎಂಬ ಶಾಪಕ್ಕೆ ಗುರಿಯಾದರು. ತಂದೆ ಆ ಕಾಲದ ಜಿಲ್ಲಾಧಿಕಾರಿಯಾಗಿದ್ದರೂ, ಕುಟುಂಬಿಕರ ಆಸ್ತಿಯ ವ್ಯಾಮೋಹಕ್ಕೆ ಕಮಲಾದೇವಿ ಕುಟುಂಬ ತಂದೆ ನಿಧನದ ಬಳಿಕ ತೀವ್ರ ಸಂಕಷ್ಟಕ್ಕೆ ಒಳಗಾಯಿತು.
ಗಂಡನ ಪಿಂಚಣಿಯ ಹಣದಲ್ಲೇ ಕಮಲಾದೇವಿ ತಾಯಿ ಮಕ್ಕಳನ್ನು ಸಾಕಿದರು. 1917ರಲ್ಲಿ ಬಾಲ್ಯ ವಿವಾಹವಾದ ಕಮಲಾದೇವಿ ಅವರ ಪತಿ ಮದುವೆಯಾದ ಎರಡೇ ವರ್ಷದಲ್ಲಿ ತೀರಿಕೊಂಡರು. ಬಾಲ್ಯದಲ್ಲಿ ಜೀವ ಕೊಟ್ಟ ತಂದೆ, ಜೀವನ ನೀಡಬೇಕಾಗಿದ್ದ ಗಂಡ ತೀರಿ ಹೋದರೂ ಧೃತಿಗೆಡದ ಕಮಲಾದೇವಿ ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಚೆನ್ನೈಗೆ ತೆರಳಿದರು.
ಚೆನ್ನೈನಲ್ಲಿ ಶ್ರೇಷ್ಠ ಕವಿ, ನಾಟಕಗಾರ ಹರೀಂದ್ರನಾಥ ಚಟ್ಟೋಪಾಧ್ಯಾಯ ಪರಿಚಯವಾಯಿತು. ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರು ಸತಿಪತಿಗಳಾದರು. ಗಂಡನೊಂದಿಗೆ ಲಂಡನ್ಗೆ ತೆರಳಿದ ಕಮಲಾದೇವಿ ಲಂಡನ್ನ ಬೆಡ್ ಫೋರ್ಡ್ ಕಾಲೇಜು ಸೇರಿಕೊಂಡು ಸಮಾಜಶಾಸ್ತ್ರದ ಅಧ್ಯಯನ ಮಾಡಿದರು.
ಲಂಡನ್ನಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ಭಾರತದಲ್ಲಿ ಮಹಾತ್ಮ ಗಾಂಧೀಜಿ ಮಾಡುತ್ತಿರುವ ಅಸಹಕಾರ ಚಳುವಳಿಯ ವಿಚಾರ ತಿಳಿದು ಸರ್ವಸ್ವವನ್ನು ಬಿಟ್ಟು ಗಾಂಧಿ ಜೊತೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು. ಈ ವೇಳೆ ದೇಶದಲ್ಲಿ ಹಲವು ಸುಧಾರಣೆಗಳನ್ನು ಕಮಲಾದೇವಿ ತಂದಿದ್ದಾರೆ.
ಸ್ವಾತಂತ್ರ್ಯ ಸಂಗ್ರಾಮ, ಮಹಿಳಾ ಸಬಲೀಕರಣ, ಕರಕುಶಲ, ಕೈ ಮಗ್ಗ ಕಲೆಗೆ ಹೊಸ ದಿಕ್ಕನ್ನು ಕಮಲಾದೇವಿ ತಂದಿದ್ದಾರೆ. ದೇಶದಲ್ಲಿ ನಿರಾಶ್ರಿತರ ಪುನರ್ ಜೀವನಕ್ಕಾಗಿ ವಿಶೇಷ ಶ್ರಮವನ್ನು ಕಮಲಾದೇವಿ ಹಾಕಿದ್ದಾರೆ. ಎರಡನೆಯ ಜಾಗತಿಕ ಯುದ್ಧ ಪ್ರಾರಂಭವಾದಾಗ ಕಮಲಾದೇವಿ ಜಗತ್ತನ್ನು ಸುತ್ತು ಹಾಕುತ್ತಾ, ಭಾರತದ ಸ್ವಾತಂತ್ರ್ಯಕ್ಕಾಗಿ ಜಾಗತಿಕ ಸದಭಿಪ್ರಾಯ ಮೂಡಿಸಲು ಪ್ರಯತ್ನಪಟ್ಟರು.
ಸ್ವಾತಂತ್ರ್ಯದ ಜೊತೆಯಲ್ಲಿಯೇ ದೇಶವಿಭಜನೆಯಾಗಿ ಲಕ್ಷಾಂತರ ನಿರಾಶ್ರಿತರು ಭಾರತಕ್ಕೆ ಬರತೊಡಗಿದಾಗ, ಕಮಲಾದೇವಿ 'ಭಾರತೀಯ ಸಹಕಾರಿ ಒಕ್ಕೂಟ'ವನ್ನು ಸ್ಥಾಪಿಸಿ, ನಿರಾಶ್ರಿತರ ಪುನರ್ವಸತಿಗೆ ಪ್ರಯತ್ನಿಸಿದರು. ಕಮಲಾದೇವಿಯವರ ಪ್ರಯತ್ನದ ಫಲವಾಗಿ ದೆಹಲಿಯಲ್ಲಿ ಫರಿದಾಬಾದ್ ಎಂಬ ಗ್ರಾಮವನ್ನು ಸ್ಥಾಪಿಸಿ ಸುಮಾರು ಮೂವತ್ತು ಸಾವಿರ ಪಠಾಣರಿಗೆ ನೆಲೆಯಾದರು.
ಕಲೆ ಹಾಗೂ ಕರಕೌಶಲ್ಯಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕಮಲಾದೇವಿ ಅನೇಕ ಕರಕುಶಲ ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸಿದ್ದಾರೆ. ಇವರ ವಿಶೇಷ ಸಾಧನೆಗೆ ಪದ್ಮಭೂಷಣ ಪ್ರಶಸ್ತಿ, ಪದ್ಮ ವಿಭೂಷಣ ಪ್ರಶಸ್ತಿ, ರಾಮನ್ ಮ್ಯಾಗಸ್ಸೇ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳು ಸಂದಿವೆ.
Recommended Video
ಒಟ್ಟಿನ್ನಲ್ಲಿ ರಾಜ್ಯದ ಕರಕುಶಲ ವಸ್ತುಗಳ ಬಗ್ಗೆಯೇ ಪ್ರಧಾನವಾದ ಅಂಶವನ್ನಿಟ್ಟುಕೊಂಡು ಈ ಬಾರಿ ಗಣರಾಜ್ಯೋತ್ಸವದ ಸ್ತಬ್ಧಚಿತ್ರಗಳ ಪರೇಡ್ನಲ್ಲಿ ಪಾಲ್ಗೊಳ್ಳಲಿದೆ. ಈ ಸ್ತಬ್ಧ ಚಿತ್ರದಲ್ಲಿ ಚಿತ್ರಣವಾಗಿರುವ ಕಮಲಾದೇವಿ ನಮ್ಮ ರಾಜ್ಯದ ಕರಾವಳಿಯ ಭಾಗದವರು ಅನ್ನೋದೇ ಹೆಮ್ಮೆಯ ಸಂಗತಿಯಾಗಿದೆ.