ಕಾವ್ಯ ಆತ್ಮಹತ್ಯೆ ಪ್ರಕರಣ: ಆ.9 ರಂದು ಮಂಗಳೂರಿನಲ್ಲಿ ಪ್ರತಿಭಟನೆ
ಮಂಗಳೂರು, ಆಗಸ್ಟ್ 4: ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಪೂಜಾರಿ ಸಾವಿನ ಪಾರದರ್ಶಕ ತನಿಖೆಯ ಒತ್ತಾಯಿಸಿ 'ಜಸ್ಟೀಸ್ ಫಾರ್ ಕಾವ್ಯ' ಹೋರಾಟ ಸಮಿತಿ ಆಗಸ್ಟ್ 9 ರಂದು ಬೃಹತ್ ಪ್ರತಿಭಟನಾ ಜಾಥಾ ಹಮ್ಮಿಕೊಂಡಿದೆ.
ಆಳ್ವಾಸ್ ನ ಕಾವ್ಯ ನಿಗೂಢ ಸಾವಿನ ತನಿಖೆ ಕೈಗೆತ್ತಿಕೊಂಡ ಮಕ್ಕಳ ಆಯೋಗ
ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ 'ಜಸ್ಟಿಸ್ ಫಾರ್ ಕಾವ್ಯ' ಹೋರಾಟ ಸಮಿತಿಯ ದಿನಕರ್ ಶೆಟ್ಟಿ, "ಜುಲೈ 20 ರಂದು ಮೂಡಬಿದಿರೆಯ ಆಳ್ವಾಸ್ ಸಂಸ್ಥೆಯ ಹಾಸ್ಟೆಲ್ ನಲ್ಲಿ ನೇಣು ಬಿಗಿದ ರೀತಿಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿ ಕಾವ್ಯ ಸಾವು ಸಂಭವಿಸಿತ್ತು. ಈ ಘಟನೆಯ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿ ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ," ಎಂದು ಹೇಳಿದರು.
ಘಟನೆ ನಡೆದು ಹನ್ನೆರಡು ದಿನಗಳು ಕಳೆದಿದೆ. ಆದರೆ ಕಾವ್ಯ ಪೂಜಾರಿ ಸಾವಿನ ಕಾರಣದ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ ಎಂದು ಕಿಡಿಕಾರಿದರು.
ಆಳ್ವರ ತೇಜೋವಧೆ ಖಂಡನೀಯ: ಕ್ಯಾ. ಗಣೇಶ್ ಕಾರ್ಣಿಕ್
"ಪ್ರಕರಣದ ಕುರಿತು ಪೊಲೀಸ್ ತಂಡ ತನಿಖೆ ನಡೆಸಿದೆ. ಆದರೆ ಈವರೆಗೆ ಪ್ರಕರಣದ ತನಿಖೆಯ ಮಾಹಿತಿಯನ್ನು ಪೊಲೀಸ್ ಇಲಾಖೆ ಸಾರ್ವಜನಿಕರ ಮುಂದೆ ಇಟ್ಟಿಲ್ಲ," ಎಂದು ದಿನಕರ್ ಶೆಟ್ಟಿ ವಿಷಾದ ವ್ಯಕ್ತಪಡಿಸಿದರು.
ಪೊಲೀಸ್ ಇಲಾಖೆಯ ಈ ನಡೆ ಅಚ್ಚರಿ ಮೂಡಿಸಿದೆ ಎಂದು ಹೇಳಿದ ಅವರು ಕಾವ್ಯಾಳ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೋರಾಟ ತೀವ್ರಗೊಳಿಸುವ ದೃಷ್ಟಿಯಿಂದ ಆಗಸ್ಟ್ ಒಂಬತ್ತುರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು .