ಮಂಗಳೂರಿನಲ್ಲೂ ಪ್ರಾಮಾಣಿಕರಿದ್ದಾರೆ: ಉದಾಹರಣೆಗೆ...
ಮಂಗಳೂರು, ನವೆಂಬರ್,15: ಚಿನ್ನ ಸಿಕ್ಕರೆ ಸಾಕು ಎನ್ನುವ ಜನ ಈಗಿದ್ದಾರೆ. ಆದರೆ ಇಲ್ಲೊಬ್ಬರು ತನಗೆ ಸಿಕ್ಕ ಲಕ್ಷಾಂತರ ರು ಮೌಲ್ಯದ ವಡವೆಯನ್ನು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಇವರು ಬಂಟ್ವಾಳ ತಾಲ್ಲೂಕಿನ ಬಾಳ್ತಿಲ ಗ್ರಾಮದ ನಿವಾಸಿ ಹಮೀದ್ ಇವರು ತಮಗೆ ಸಿಕ್ಕ ವಡವೆಯನ್ನು ಮರಳಿಸಿ ಪ್ರಾಮಾಣಿಕತೆಗೆ ಸಾಕ್ಷಿಯಾಗಿದ್ದಾರೆ.
ಭಾನುವಾರ ಬೆಳಗ್ಗೆ ಯಾವುದೋ ಕೆಲಸದ ನಿಮಿತ್ತ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹಮೀದ್ ಅವರಿಗೆ ಪ್ಲಾಸ್ಟಿಕ್ ಕವರೊಂದು ಸಿಕ್ಕಿದೆ. ಕವರ್ನ್ನು ಬಿಡಿಸಿ ನೋಡಿದಾಗ ಅವರಿಗೆ ಶಾಕ್ ಕಾದಿತ್ತು. ಯಾಕೆಂದರೆ ಅದರಲ್ಲಿ ಕಂಡಿದ್ದು ಬರೋಬ್ಬರಿ 320 ಗ್ರಾಂ ತೂಕದ ಚಿನ್ನಾಭರಣಗಳು.[ಈ ಆಟೋ ಚಾಲಕನ ಪ್ರಾಮಾಣಿಕತೆಗೆ ಬೆಲೆಕಟ್ಟಲು ಸಾಧ್ಯವೆ?]
ಆಭರಣವನ್ನು ವಾರಸುದಾರರಿಗೆ ಹಿಂದಿರುಗಿಸಬೇಕೆಂದು ನಿರ್ಧರಿಸಿ ಕೂಡಲೇ ಬಾಳ್ತಿಲ ಗ್ರಾಮ ಪಂಚಾಯತ್ ಸದಸ್ಯ ಶಿವಕುಮಾರ್ರ ಬಳಿ ಬಂದು ನಡೆದ ವಿಚಾರವನ್ನು ತಿಳಿಸಿ, ವಾರಸುದಾರರಿಗೆ ಒಪ್ಪಿಸುವಂತೆ ಮನವಿ ಮಾಡಿಕೊಂಡರು. ಶಿವಕುಮಾರ್ ಅವರು ಕೂಡಲೇ ಹಮೀದ್ ಅವರೊಂದಿಗೆ ಬಂಟ್ವಾಳ ನಗರ ಠಾಣೆಗೆ ಆಗಮಿಸಿ ಚಿನ್ನಾಭರಣಗಳನ್ನು ಪೊಲೀಸರಿಗೊಪ್ಪಿಸುವಂತೆ ಕೋರಿದ್ದರು.[ಕಳ್ಳನ ಹೆಂಡತಿಯ ಪ್ರಾಮಾಣಿಕತೆ. ಅಪರಾಧ ವರದಿಯಲ್ಲಿ ಒಂದು ನೀತಿ ಕತೆ]
ಇತ್ತ ಸೋಮವಾರ ಪಾಣೆ ಮಂಗಳೂರಿನ ನರಸಿಂಹ ಪ್ರಭು ಎಂಬುವರು ಚಿನ್ನಾಭರಣ ಕಳೆದುಕೊಂಡ ಕುರಿತು ದೂರು ನೀಡಲೆಂದು ಬಂಟ್ವಾಳ ನಗರ ಠಾಣೆಗೆ ಆಗಮಿಸಿದ್ದರು. ಹಮೀದ್ ಮತ್ತು ಶಿವಕುಮಾರ್ ಅವರು ತಂದೊಪ್ಪಿಸಿರುವ ಆಭರಣಗಳು ಅವರದ್ದೇ ಎಂದು ಖಚಿತಪಡಿಸಿಕೊಂಡರು. ಕೂಡಲೇ ಹಮೀದ್ ಮತ್ತು ಶಿವಕುಮಾರ್ ಅವರನ್ನು ಕರೆಸಿ ಅವರ ಸಮಕ್ಷಮದಲ್ಲಿ ಚಿನ್ನಾಭರಣಗಳನ್ನು ನರಸಿಂಹ ಪ್ರಭು ಅವರಿಗೆ ಹಸ್ತಾಂತರಿಸಲಾಯಿತು. ಧರ್ಮದ ಹೆಸರಿನಲ್ಲಿ ಕಿತ್ತಾಟ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಮರಳಿಸಿದ ಹಮೀದ್ ಅವರ ಪ್ರಾಮಾಣಿಕತೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನೂ ಇವರ ಪ್ರಾಮಾಣಿಕತೆಯನ್ನು ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಸಿ.ಬಿ.ವೇದಮೂರ್ತಿ, ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ರವೀಶ್ .ಆರ್, ಬಂಟ್ವಾಳ ನಗರ ಠಾಣೆಯ ಎಸ್ಸೈ ನಂದಕುಮಾರ್ ಉಪಸ್ಥಿತರಿದ್ದರು.