ಮಂಗಳೂರನ್ನು ಹಸಿರಾಗಿಸುವ ಹಾದಿಯಲ್ಲಿ ಜೀತ್ ಮಿಲನ್
ಮಂಗಳೂರು, ಮೇ 31: ಬಿರು ಬಿಸಿಲು, ಮಳೆ ಇಲ್ಲ, ನೀರಿಲ್ಲ ಎಂದು ದೂರುವ ಮಂದಿಯಲ್ಲಿ ಗಿಡ ನೆಟ್ಟು ಪರಿಸರ ರಕ್ಷಿಸಬೇಕು ಎಂದು ಮುಂದಾಗುವವರು ಬೆರಳೆಣಿಕೆಯಷ್ಟೆ. ಆದರೆ ಮಂಗಳೂರಿನ ಈ ಪರಿಸರ ಪ್ರೇಮಿಯೊಬ್ಬರು ಸದ್ದಿಲ್ಲದೆ ಕಳೆದ 13 ವರ್ಷಗಳಿಂದ ತಮ್ಮ ಸ್ವಂತ ಖರ್ಚಿನಲ್ಲೇ ಲಕ್ಷಕ್ಕೂ ಅಧಿಕ ಮರಗಳನ್ನು ಬೆಳೆಸಿ, ಪೋಷಿಸಿ ನಗರವನ್ನು ಹಸಿರಾಗಿರಿಸಲು ಪ್ರಯತ್ನ ಪಡುತ್ತಿದ್ದಾರೆ.
ಅವರೇ ಮಂಗಳೂರಿನ ಮಾರ್ಗನ್ಸ್ ಗೇಟ್ ನಿವಾಸಿ ಜೀತ್ ಮಿಲನ್ ರೋಶ್. ಉದ್ಯಮಿಯಾಗಿರುವ ಇವರು, ತಮ್ಮ ಹೆಚ್ಚಿನ ಸಮಯವನ್ನು ಕಳೆಯುವುದು ಮರಗಿಡಗಳೊಡನೆ. ನಗರದಲ್ಲೂ ಹಸಿರು ತುಂಬಿರಬೇಕು ಎಂಬ ಆಶಯದೊಂದಿಗೆ 2004ರಿಂದ ಜಿಲ್ಲೆಯ ಅನೇಕ ಕಡೆ ಗಿಡಗಳನ್ನು ನೆಡುತ್ತಾ ಬಂದಿದ್ದಾರೆ. ತನ್ನ ಉದ್ಯೋಗದ ಒಂದು ಪಾಲು ಹಣವನ್ನು ಮರಗಿಡಗಳ ಸಂರಕ್ಷಣೆಗಾಗೆಂದೇ ಮೀಸಲಿಟ್ಟಿದ್ದಾರೆ.
ನೀರಿನ ಅಭಾವದ ನಡುವೆ ಶಾಲೆಗಳು ಪುನಾರಂಭ
ಆದರೆ ರಸ್ತೆ ಬದಿಗಳಲ್ಲಿ ತಾವು ನೆಟ್ಟ ಗಿಡಗಳು ರಸ್ತೆ ಅಗಲೀಕರಣ, ನಗರೀಕರಣದ ನೆಪದಲ್ಲಿ ತಮ್ಮೆದುರೇ ನಾಶವಾಗುವುದನ್ನು ಕಂಡು ಮರುಗಿದರು. ಬಳಿಕ ಇವರು ಗಿಡಗಳನ್ನು ಬೆಳೆಸಲು ಆಯ್ಕೆ ಮಾಡಿಕೊಂಡಿದ್ದು ಸ್ಮಶಾನಗಳನ್ನು. ಈಗಾಗಲೇ ನಗರದ ವಿವಿಧ ಶ್ಮಶಾನಗಳಲ್ಲಿ ಸಾವಿರಾರು ಗಿಡಗಳನ್ನು ನೆಟ್ಟಿದ್ದಾರೆ. ಅಲ್ಲಿ ಗಿಡ ನೆಟ್ಟರೆ ಕಳ್ಳರ ಕಾಟ ಇರುವುದಿಲ್ಲ. ಸರಕಾರ, ಸ್ಥಳೀಯ ಆಡಳಿತ ಅಭಿವೃದ್ಧಿ ಕಾರ್ಯಕ್ಕಾಗಿ ಮರ ಕಡಿಯುವುದಿಲ್ಲ ಎಂಬ ಉದ್ದೇಶ ಇದರ ಹಿಂದಿದೆ.
ಈಗ ಅವರು ಬೆಳೆಸಿರುವ ಸುಮಾರು 60 ಬಗೆಯ ವಿವಿಧ ತಳಿಯ ಸುಮಾರು 5 ಸಾವಿರಕ್ಕೂ ಅಧಿಕ ಗಿಡಗಳು ನಗರದ ಮಧ್ಯಭಾಗದಲ್ಲಿರುವ ವಿವಿಧ ಸ್ಮಶಾನಗಳಲ್ಲಿ ಬೆಳೆದು ನಿಂತಿವೆ. ನಗರದ ನಂದಿಗುಡ್ಡ ಹಿಂದೂ ರುದ್ರಭೂಮಿ, ಬ್ರಹ್ಮ ಸಮಾಜದ ಸ್ಮಶಾನ, ವಿವಿಧ ಕ್ರೈಸ್ತ ರುದ್ರಭೂಮಿಗಳಲ್ಲಿ ಅವರು ಬೆಳೆಸಿರುವ ಮರಗಳನ್ನು ನಾವು ಕಾಣಬಹುದು. ಅಲ್ಲದೆ ಕಂಕನಾಡಿ ಜಂಕ್ಷನ್ ನಿಂದ ಮಾರ್ನಮಿಕಟ್ಟ, ಮಂಗಳೂರು ಕ್ಲಬ್, ನಂದಿಗುಡ್ಡ, ಮಾರ್ಗನ್ ಗೇಟ್ ರಸ್ತೆಗಳಲ್ಲಿ, ವಾಮಂಜೂರು ಡಂಪಿಂಗ್ ಯಾರ್ಡ್ ನಲ್ಲಿ ಮರಗಳನ್ನು ಬೆಳೆಸಿದ್ದಾರೆ. ಜೀತ್, ಗಿಡ ಮರಗಳನ್ನು ಬೆಳೆಸುವುದಷ್ಟೇ ಅಲ್ಲ, ಅವರ ನೇತೃತ್ವದಲ್ಲಿ ನಗರದಲ್ಲಿ 25ಕ್ಕೂ ಹೆಚ್ಚಿನ ಮರಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸ್ಥಳಾಂತರಿಸಲಾಗಿದೆ.
ನೀರಿನ ಅಭಾವ: ವಿದ್ಯಾರ್ಥಿಗಳಿಗೆ ಷರತ್ತು ವಿಧಿಸಿದ ಹಾಸ್ಟೆಲ್ ಮಾಲೀಕರು
ಜೀತ್ ಅವರ ಪರಿಸರ ರಕ್ಷಣೆಯ ಕಾಯಕದಲ್ಲಿ ಪತ್ನಿ ಸೆಲ್ಮಾ ಮರಿಯಾ ರೋಶ್ ಕೂಡ ಸಾಥ್ ನೀಡುತ್ತಾರೆ. ಬರೀ ಗಿಡಗಳನ್ನು ನೆಟ್ಟು ಬಿಡುವುದಷ್ಟೇ ಅಲ್ಲ, ನಿರಂತರವಾಗಿ ಅವುಗಳನ್ನು ಪೋಷಿಸುವ ಜವಾಬ್ದಾರಿಯನ್ನೂ ಹೊತ್ತಿದ್ದಾರೆ ಜೀತ್. ಬೇಸಿಗೆಯ ಸಂದರ್ಭ ಸ್ವಂತ ಹಣದಿಂದ ಟ್ಯಾಂಕರ್ ಮೂಲಕ ನೀರು ತಂದು ಸ್ಮಶಾನದೊಳಗಡೆ ಗಿಡಗಳಿಗೆ ನೀರು ಹಾಯಿಸಿ ಆರೈಕೆ ಮಾಡುತ್ತಾರೆ. ಆಡು, ದನಗಳು ಗಿಡಗಳನ್ನು ತಿನ್ನದಂತೆ ಬೇಲಿ ನಿರ್ಮಿಸಿ ರಕ್ಷಿಸುತ್ತಾರೆ.
ಮಂಗಳೂರಿನಲ್ಲಿ ಶುಭ ಸಮಾರಂಭಗಳಿಗೂ ತಟ್ಟಿದ ನೀರಿನ ಬಿಸಿ
ಆಲ, ಅಶ್ವತ್ಥ, ಹೊನ್ನೆ, ಹೊಂಗೆ, ಶ್ರೀಗಂಧ, ರಕ್ತಚಂದನ, ಕದಂಬ, ಈಚಲು, ಹಲಸು, ಹೆಬ್ಬಲಸು, ಮಾವು, ಬೆಟ್ಟದ ನೆಲ್ಲಿ, ತೇಗ, ಬೀಟಿ, ನೇರಳೆ, ಕುಂಟಾಲ, ಬುಗರಿ, ಹುಳಿ ಮುಂತಾದ ಅಳಿವಿನಂಚಿನಲ್ಲಿರುವ ಮರಗಳನ್ನು ರಕ್ಷಿಸಿ ಬೆಳೆಸುತ್ತಿರುವುದು ಇವರ ಹೆಗ್ಗಳಿಕೆ.