ಬೆಲೆ ಏರಿಕೆ ನಿರೀಕ್ಷೆಯಲ್ಲಿ ಕರಾವಳಿ ಮಲ್ಲಿಗೆ ಬೆಳೆಗಾರರು
ಮಂಗಳೂರು, ಆಗಸ್ಟ್ 10 : ಮಲ್ಲಿಗೆ ಕರಾವಳಿ ಭಾಗದ ಪ್ರಮುಖ ವಾಣಿಜ್ಯ ಬೆಳೆ. ಕರಾವಳಿಯಲ್ಲಿ ಪ್ರತಿ ಮಳೆಗಾಲದಲ್ಲಿ ಉಡುಪಿ ಮಲ್ಲಿಗೆ ಇಳುವರಿ ಹೆಚ್ಚಾಗಿ ಮಾರುಕಟ್ಟೆಗಳಲ್ಲಿ ಬೇಡಿಕೆ ಕಡಿಮೆಯಾಗುತ್ತದೆ. ಆದರೆ ಈ ಬಾರಿ ಆಟಿ ತಿಂಗಳಿನಲ್ಲಿ ಮಲ್ಲಿಗೆ ಇಳುವರಿ ಹೆಚ್ಚಿದ್ದರೂ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಾಗಿತ್ತು.
ಆದರೆ, ಸದ್ಯಕ್ಕೆ ಮಲ್ಲಿಗೆ ಮಾರುಕಟ್ಟೆ ಕುಸಿದಿದ್ದು, ಮಲ್ಲಿಗೆ ಅಟ್ಟೆಯೊಂದಕ್ಕೆ 130ರಿಂದ 150 ರು. ವರೆಗೆ ಕನಿಷ್ಠ ದರ ನಿಗದಿಯಾಗಿದೆ.[ನಾಗರ ಪಂಚಮಿ, ಮಾರುಕಟ್ಟೆಯಲ್ಲಿ ಕೇದಗೆ ಘಮ]
ಶಂಕರಪುರದಲ್ಲಿ ಬೆಳೆಯುವ ಮಲ್ಲಿಗೆ ಹೂವಿಗೆ ಏಪ್ರಿಲ್, ಮೇ ತಿಂಗಳಿನಲ್ಲಿ ಭರ್ಜರಿ ಬೇಡಿಕೆ ಇರುತ್ತದೆ. ಈ ಸೀಸನ್ ನಲ್ಲಿ ಮದುವೆಗಳು ಹೆಚ್ಚು ನಡೆಯುತ್ತವೆ. ಆಗ ರಾಜ್ಯ, ಹೊರರಾಜ್ಯವಲ್ಲದೆ ವಿದೇಶಕ್ಕೂ ಮಲ್ಲಿಗೆ ರಫ್ತಾಗುತ್ತದೆ. ಒಳ್ಳೆ ಬೆಲೆಯೂ ಸಿಗುತ್ತದೆ.
ಈ ಬಾರಿ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಸಾಕಷ್ಟು ಮಳೆಯಾಗಿದ್ದು, ಮಲ್ಲಿಗೆ ಇಳುವರಿ ಹೆಚ್ಚಾಗಿತ್ತು. ಪ್ರಾರಂಭದಲ್ಲಿ ಮಲ್ಲಿಗೆ ಬೆಳೆಗಾರರು ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸಬೇಕಾದ ಪ್ರಮೇಯ ಎದುರಾಗಿತ್ತು. ಆಟಿ ತಿಂಗಳಲ್ಲಿ ಸಾಧಾರಣವಾಗಿ ಪೂರಕ ಮಳೆಯಾಗಿ ಇಳುವರಿ ಹೆಚ್ಚಿದ್ದು, ಮಾರುಕಟ್ಟೆ ಧಾರಣೆಯಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ.[ನೀನಿರಲೇ ಇಲ್ಲ ಮಲ್ಲಿಗೆಯು ಘಮಿಸಿದಾಗ]
ಮಳೆಗಾಲದಲ್ಲಿ ಶಂಕರಪುರ ಭಾಗದ ಎಲ್ಲ ಮನೆಗಳಲ್ಲಿಯೂ ಹೇರಳವಾಗಿ ಮಲ್ಲಿಗೆ ಬೆಳೆಯುವುದರಿಂದಾಗಿ ಮಾರುಕಟ್ಟೆ ಬೆಲೆ ಇಳಿಮುಖವಾಗಿದೆ. ಹೊರ ರಾಜ್ಯಗಳಿಂದ ಬೇಡಿಕೆ ಬಂದರೆ ಮಾತ್ರ ಮಾರುಕಟ್ಟೆಗಳಲ್ಲಿ ಉತ್ತಮ ದರ ದೊರೆಯುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಈ ಭಾಗದಲ್ಲಿ ಮಲ್ಲಿಗೆ ಬೆಳೆಗಾರರ ಸಂಖ್ಯೆ ಅಧಿಕವಾಗಿದೆ. ಆದರೆ ಲಾಭದ ದೃಷ್ಟಿಯಲ್ಲಿ ನೋಡುವುದಾದರೆ ಕೃಷಿಕರಿಗೆ ನಿರೀಕ್ಷಿತ ಮಟ್ಟದಲ್ಲಿ ಫಲ ದೊರೆತಿಲ್ಲ. ಸೋಣ ಆರಂಭವಾಗುವುದರಿಂದ ಇನ್ನಷ್ಟೇ ಮಾರುಕಟ್ಟೆ ಚೇತರಿಸಿಕೊಳ್ಳಬೇಕಾಗಿದೆ.