ಮತ್ತಷ್ಟು ಪುಢಾರಿಗಳ ರಾಸಲೀಲೆ ಬಯಲಾಗಲಿ : ಪೂಜಾರಿ
ಹೆಚ್, ವೈ ಮೇಟಿ ನಂತರ ಇತರೆ ಶಾಸಕ ಹಾಗೂ ಸಚಿವರ ಲೈಗಿಕ ಹಗರಣಗಳ ಸಿಡಿಗಳನ್ನು ಬಯಲು ಮಾಡವೇ ಎಂದು ಆರ್ ಟಿಐ ಕಾರ್ಯಕರ್ತ ರಾಜಶೇಖರ್ ಹೇಳಿದ್ದರು. ಅವುಗಳನ್ನು ಶೀಘ್ರ ಬಯಲು ಮಾಡಲಿ ಎಂದು ಜನಾರ್ಧನ ಪೂಜಾರಿ ಆಗ್ರಹಿಸಿದ್ದಾರೆ.
ಮಂಗಳೂರು, ಡಿಸೆಂಬರ್ 15 : ಕೇವಲ ಎಚ್, ವೈ ಮೇಟಿ ರಾಸಲೀಲೆ ಪ್ರಕರಣವಲ್ಲ ಇನ್ನು ಹಲವು ಶಾಸಕರ ಹಾಗೂ ಸಚಿವರ ಇಂತಃ ರಾಸಲೀಲೆಗಳನ್ನು ಬಯಲು ಮಾಡುತ್ತೇನೆಂದು ಹೇಳಿರುವ ಆರ್ ಟಿಐ ಕಾರ್ಯಕರ್ತ ರಾಜಶೇಖರ್, ಕೂಡಲೇ ಇನ್ನುಳಿದವರ ರಾಸಲೀಲೆಗಳನ್ನು ಬಹಿರಂಗ ಪಡಿಸಬೇಕೆಂದು ಕಾಂಗ್ರೆಸ್ ನ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಆಗ್ರಹಿಸಿದರು.
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೂಜಾರಿ, ಎಚ್.ವೈ.ಮೇಟಿಯವರ ರಾಸಲೀಲೆ ಪ್ರಕರಣ ರಾಜ್ಯದ ಮಾನ ಹರಾಜು ಮಾಡಿತು ಎಂದು ಆಕ್ರೋಶ ವ್ಯಕ್ತಪಡಿಸಿದರು. [ಎಚ್ ವೈ ಮೇಟಿ ರಾಸಲೀಲೆ ಪ್ರಕರಣ ಸಿಐಡಿ ತನಿಖೆಗೆ]
ಶೀಘ್ರವೇ ಆರ್ ಟಿಐ ಕಾರ್ಯಕರ್ತ ರಾಜಶೇಖರ್ ಇನ್ನುಳಿದ ಸಚಿವರ, ಶಾಸಕರ ರಾಸಲೀಲೆ ಪ್ರಕರಣವನ್ನ ಬಯಲು ಮಾಡಬೇಕೆಂದರು. ನೈತಿಕತೆ ಮರೆತವರು ತಮ್ಮ ಸಂಪುಟದಲ್ಲಿರುವ ಬಗ್ಗೆ ಸಿಎಂ ಸಿದ್ದರಾಮಯ್ಯನವರಿಗೆ ಗೊತ್ತಿಲ್ಲದಿರುವುದು ದುರಂತ ಎಂದು ಹೇಳಿದ ಪೂಜಾರಿ ಸಿದ್ದರಾಮಯ್ಯರನ್ನ ಮೂರ್ಖ ಅನ್ನಬೇಕೋ? ಎಂದರು. [ಮೇಟಿ ಸಿಡಿ ಆಯ್ತು, ಇನ್ನೆರಡು ಸಿಡಿ ಯಾವ ಶಾಸಕರದ್ದು ?]
ಸಂಪುಟದಲ್ಲಿ ಯಾರು ಏನೇನು ಅನ್ನೋದು ಸಿಎಂಗೆ ಗೊತ್ತು. ಆರ್ ಟಿಐ ಕಾರ್ಯಕರ್ತ ರಾಜಶೇಖರ್ ಇನ್ನುಳಿದವರ ಮಾನ ಹರಾಜು ಹಾಕುವ ಮುಂಚೆ ಸಿಎಂ ಸಂಪುಟದಲ್ಲಿರುವ ' ರಾಸಲೀಲೆ' ಸಚಿವರನ್ನ ವಜಾಗೊಳಿಸಿ ರಾಜ್ಯದ ಹಾಗೂ ಪಕ್ಷದ ಮಾನ ಕಾಪಾಡಿ ಎಂದು ಮನವಿ ಮಾಡಿದರು.
ಈ ರಾಸಲೀಲೆ ಪ್ರಕರಣದ ಬಗ್ಗೆ ಗಂಭೀರತೆ ವಹಿಸಿ ಅಬಕಾರಿ ಸಚಿವರನ್ನ ರಾಜೀನಾಮೆ ನೀಡುವಂತೆ ಮಾಡಿದ ಮಾಧ್ಯಮದವರನ್ನ ಸಹ ಹೊಗಳಿದರು.
ಇದೇ ವೇಳೆ ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾರನ್ನ ಗುಣಗಾನ ಮಾಡಿದ ಪೂಜಾರಿ ಸಿಎಂ ಸಿದ್ದರಾಮಯ್ಯ' ಅಮ್ಮ' ನನ್ನ ನೋಡಿ ಕಲಿಯಲು ಸಾಕಷ್ಟಿದೆ ಎಂದರು.
ನೋಟ್ ಬ್ಯಾನ್ ಬಗ್ಗೆ ಪೂಜಾರಿ ಆಕ್ರೋಶ: ಜನರು ದುಡ್ಡಿಗಾಗಿ ಪರದಾಡುತ್ತಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡಿ ಎಂದು ಜನರು ಅಂಗಲಾಚಿದರೂ ಪ್ರಧಾನಿ ಸುಮ್ಮನೆ ಕೂತಿದ್ದಾರೆ ಎಂದು ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
ಯಾವ ಕಾರಣಕ್ಕಾಗಿ ನೀವು ಈ ತೀರ್ಮಾನವನ್ನು ತೆಗೆದುಕೊಂಡಿದ್ದೀರಿ? ಯಾರ ಹಿತಕ್ಕಾಗಿ ನೋಟನ್ನ ನಿಷೇಧಿಸಿದ್ದೀರಿ? ಎಂದು ಪ್ರಶ್ನಿಸಿದ ಪೂಜಾರಿ ನರೇಂದ್ರ ಮೋದಿಗೆ ಪ್ರಧಾನಿ ಸ್ಥಾನದಲ್ಲಿ ಕೂರಲು ಅರ್ಹತೆ ಇಲ್ಲ. ಬೇರೆಯವರಿಗೆ ಅಧಿಕಾರ ಹಸ್ತಾಂತರಿಸಿ ಎಂದು ಹೇಳಿದರು.
ಇದೊಂದು ಮೂರ್ಖತನದ ಪರಮಾವಧಿ ಎಂದ ಪೂಜಾರಿ ಬಡಜನರ, ರೈತರು ಕಣ್ಣೀರು ಹಾಕುವಂತೆ ಮಾಡಿದ ಪ್ರಧಾನಿ ಮುಂದೆ ಅನಾಹುತವನ್ನ ಎದುರಿಸಬೇಕಾದಿತು ಎಂದು ಎಚ್ಚರಿಕೆ ನೀಡಿದರು.