ಮಹಾಪ್ರತಿಜ್ಞೆ ಮುರಿದ ಜನಾರ್ದನ ಪೂಜಾರಿ; ದೇವರಲ್ಲಿ ಕ್ಷಮೆ ಯಾಚನೆ
ಮಂಗಳೂರು, ಜುಲೈ 1: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಾಡಿದ್ದ ಮಹಾ ಪ್ರತಿಜ್ಞೆಯನ್ನು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ಧನ ಪೂಜಾರಿ ಮುರಿದಿದ್ದಾರೆ. ನಗರದ ಕುದ್ರೋಳಿ ದೇವಸ್ಥಾನಕ್ಕೆ ನಿನ್ನೆ ಜನಾರ್ದನ ಪೂಜಾರಿ ಭೇಟಿ ನೀಡಿ ಗೋಕರ್ಣನಾಥನಲ್ಲಿ ಕ್ಷಮೆ ಯಾಚಿಸಿದ್ದಾರೆ.
ಜನಾರ್ದನ ಪೂಜಾರಿಗೆ ಜೀವ ಬೆದರಿಕೆ ಒಡ್ಡಿದ್ದ ವ್ಯಕ್ತಿಯ ಬಂಧನ
ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಸೋತರೆ ದೇವಸ್ಥಾನಕ್ಕೆ ಕಾಲಿಡುವುದಿಲ್ಲ ಎಂದು ಬಹಿರಂಗ ಸಭೆಯಲ್ಲಿ ಜನಾರ್ದನ ಪೂಜಾರಿ ಪ್ರತಿಜ್ಞೆ ಮಾಡಿದ್ದರು. ಅಷ್ಟೆ ಅಲ್ಲದೇ ಮಿಥುನ್ ರೈ ಸೋತರೆ ಚರ್ಚ್, ಮಸೀದಿಗಳಿಗೂ ಕಾಲಿಡುವುದಿಲ್ಲ ಎಂದಿದ್ದರು.
ಭಾರಿ ಚರ್ಚೆಗೆ ಸಿಲುಕಿದ ಜನಾರ್ದನ ಪೂಜಾರಿ ಮಹಾಪ್ರತಿಜ್ಞೆ
ಇಂದು ಏಕಾಏಕಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಜನಾರ್ದನ ಪೂಜಾರಿ, ಗೋಕರ್ಣನಾಥ ಹಾಗೂ ಪರಿವಾರ ದೇವರ ದರ್ಶನ ಪಡೆದರು. ಗೋಕರ್ಣನಾಥನ ಮುಂದೆ ಕ್ಷಮೆ ಯಾಚಿಸಿ ಭಾವುಕರಾದರು. ದೇವರ ದರ್ಶನದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ನಾನು ಕ್ಷೇತ್ರಕ್ಕೆ ಭೇಟಿ ನೀಡಲ್ಲ ಎಂದು ಹೇಳಿ ದೊಡ್ಡ ತಪ್ಪು ಮಾಡಿದ್ದೇನೆ. ನನ್ನ ಹೇಳಿಕೆಗೆ ಪಶ್ಚಾತ್ತಾಪ ಪಡುತ್ತಿದ್ದೇನೆ. ಯಾರೂ ಇಂತಹ ತಪ್ಪು ಮಾಡಬಾರದು. ಇದಕ್ಕೆ ಎಲ್ಲರ ಹತ್ತಿರ ಕ್ಷಮೆ ಕೇಳುತ್ತಿದ್ದೇನೆ' ಎಂದು ಹೇಳಿದರು.
ತಪ್ಪನ್ನು ಸರಿ ಮಾಡದೆ ಸತ್ತರೆ ದೇವರು ಕ್ಷಮಿಸಲ್ಲ. ಅದಕ್ಕೆ ಇಂದು ನನ್ನ ತಪ್ಪಿಗೆ ಕ್ಷಮೆ ಯಾಚಿಸಿದ್ದೇನೆ. ಇವತ್ತು ಮಧ್ಯಾಹ್ನ ಮಲಗಿದ್ದ ಸಮಯದಲ್ಲಿ, ದೇವರ ಭೇಟಿಗೆ ನಿರ್ಧರಿಸಿದೆ. ದೇವರ ಆದೇಶ ಬಂದದ್ದರಿಂದ ಕೂಡಲೇ ಹೊರಟೆ. ತಪ್ಪು ಮಾಡಿದ್ದನ್ನು ತಿದ್ದಲು ಕೂಡಲೇ ಹೊರಡು ಎಂದು ದೇವರ ಆದೇಶವಿತ್ತು. ಅದರಂತೆ ಕ್ಷೇತ್ರಕ್ಕೆ ಬಂದು ಕ್ಷಮೆ ಯಾಚಿಸಿದ್ದೇನೆ ಎಂದು ಹೇಳಿದರು.
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಮೋದಿ ಅಲೆಯಿದೆ ಎಂದ ಜನಾರ್ದನ ಪೂಜಾರಿ
ಚರ್ಚ್, ಮಸೀದಿಗೂ ತೆರಳುವುದಿಲ್ಲ ಎಂದು ಚುನಾವಣೆ ಸಮಯ ಹೇಳಿದ್ದೆ. ಆದರೆ, ಈಗ ಅಲ್ಲಿಗೂ ಹೋಗಿ ಕ್ಷಮೆ ಯಾಚಿಸಿ ನನ್ನ ತಪ್ಪನ್ನು ಸರಿಪಡಿಸಿಕೊಳ್ಳುತ್ತಿದ್ದೇನೆ ಎಂದರು.