ನೆರೆ ಅಪಾಯದಲ್ಲಿದ್ದ ಜನಾರ್ಧನ ಪೂಜಾರಿ ರಕ್ಷಣೆ
ಮಂಗಳೂರು, ಆಗಸ್ಟ್ 10: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂಜಾನೆಯಿಂದ ಭಾರೀ ಗಾಳಿ ಮಳೆ ಮುಂದುವರೆದಿದೆ. ನೇತ್ರಾವತಿ ನೀರಿನ ಮಟ್ಟ ತೀವ್ರವಾಗಿ ಹೆಚ್ಚಾಗುತ್ತಿದೆ. ನೇತ್ರಾವತಿ ನದಿಯ ಅಪಾಯದ ಮಟ್ಟ 8.5 ಆಗಿದ್ದು, ತಡರಾತ್ರಿ ವೇಳೆಗೆ 11.7 ಮೀಟರ್ ತಲುಪಿತ್ತು. ಮುಂಜಾನೆ ಕೊಂಚ ಶಾಂತವಾದ ನೇತ್ರಾವತಿ 11.6 ಮೀ ಮಟ್ಟದಲ್ಲಿ ಹರಿಯುತ್ತಿದೆ.
ಇಂದು ಮುಂಜಾನೆಯಿಂದ ಮಳೆಯಾಗುತ್ತಿರುವ ಕಾರಣ ಪ್ರವಾಹ ನೀರು ಮತ್ತೆ ಏರಿಕೆಯಾಗುವ ಸಾಧ್ಯತೆಯಿದ್ದು, ತೀರವಾಸಿಗಳು ಆತಂಕಗೊಂಡಿದ್ದಾರೆ. ನೇತ್ರಾವತಿ ತೀರದ 100ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದು ಅಪಾಯದಲ್ಲಿದ್ದ 300ಕ್ಕೂ ಹೆಚ್ಚು ಮಂದಿಯನ್ನು ಎನ್ ಡಿ ಆರ್ ಎಫ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 10ರಂದು ಶಾಲಾ- ಕಾಲೇಜುಗಳಿಗೆ ರಜಾ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ನೇತ್ರಾವತಿಗೆ ಹರಿದು ಬರುತ್ತಿದೆ. ಶಂಭೂರು ಎಎಂಆರ್ ನ 26 ಗೇಟುಗಳಲ್ಲಿ ನೇತ್ರಾವತಿ ನದಿ ನೀರು ಹೊರಬಿಡಲಾಗಿದ್ದು, ತುಂಬೆಯಲ್ಲಿ 8.5 ಮೀ.ಎತ್ತರದಲ್ಲಿ ನೀರು ಸಂಗ್ರಹಗೊಂಡು ಹರಿಯುತ್ತಿದೆ. ಅಣೆಕಟ್ಟಿನಿಂದ ಗಂಟೆಗೊಮ್ಮೆ ಸೈರನ್ ಬಾರಿಸಿ ನೀರು ಬಿಡಲಾಗುತ್ತಿದೆ.
ನೇತ್ರಾವತಿ ನದಿಯ ನೆರೆಯ ನೀರು ಬಂಟ್ವಾಳದ ಬಿ ಸಿ ರೋಡ್ ಬಳಿ ಇರುವ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಅವರ ಮನೆಗೂ ನುಗ್ಗಿದೆ. ನದಿ ನೀರು ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿರುವ ಕಾರಣ ಅಪಾಯದಲ್ಲಿದ್ದ ಜನಾರ್ಧನ ಪೂಜಾರಿ ಹಾಗು ಅವರ ಕುಟುಂಬಸ್ಥರನ್ನು ಎನ್ ಡಿಆರ್ ಎಫ್ ತಂಡ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ.