'ಸಾಲ ಮೇಳದ ಸಂಗ್ರಾಮ' ಪೂಜಾರಿ ಆತ್ಮಚರಿತ್ರೆ ಜ.26ಕ್ಕೆ ಬಿಡುಗಡೆ
ಮಂಗಳೂರು, ಜನವರಿ 22 : 'ಸಾಲ ಮೇಳದ ಸಂಗ್ರಾಮ ಎಂಬ ಹೆಸರಿನ ನನ್ನ ಆತ್ಮ ಚರಿತ್ರೆಯನ್ನು ಜ.26ರಂದು ಬಿಡುಗಡೆ ಮಾಡಲಿದ್ದೇನೆ' ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಹೇಳಿದರು.
ಸೋಮವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 'ನನ್ನ ಆತ್ಮಕಥೆ ಹೆಸರು 'ಸಾಲ ಮೇಳದ ಸಂಗ್ರಾಮ' ಎಂದು ಇಟ್ಟಿದ್ದೇನೆ. ರಾತ್ರಿ ಹಗಲೆನ್ನದೆ ಆತ್ಮಕಥೆಯನ್ನು ಬರೆದು ಮುಗಿಸಿದ್ದೇನೆ. ನೆನಪಿಗೆ ಬಂದ ಎಲ್ಲಾ ವಿಷಯಗಳನ್ನು ನಮೂದಿಸಿದ್ದೇನೆ' ಎಂದರು.
ಪೂಜಾರಿ ಆತ್ಮಚರಿತ್ರೆ ಬಿಡುಗಡೆಗೆ ಸಿದ್ಧ, ರಾಜ್ಯ ರಾಜಕಾರಣದಲ್ಲಿ ತಳಮಳ
'ಬಾಲ್ಯದ ಕಷ್ಟ, ಜೀವನದ ಸವಾಲು, ವಕೀಲ ವೃತ್ತಿ ಜೀವನದ ಪಾಠ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜೊತೆಗಿನ ಒಡನಾಟ, ರಾಜಕೀಯ ಜೀವನದ ಬಗ್ಗೆ ಬರೆದಿದ್ದೇನೆ. ಯಾರಿಗೂ ನೋವು ಮಾಡುವ ಉದ್ದೇಶದ ಬರಹ ಇಲ್ಲ. ಎಲ್ಲಿಯೂ ಬಣ್ಣದ ಮಾತುಗಳಿಲ್ಲ' ಎಂದು ಪೂಜಾರಿ ಸ್ಪಷ್ಟಪಡಿಸಿದರು.
'ರಾಜಕೀಯ ಏರುಪೇರುಗಳನ್ನು ಆತ್ಮ ಕಥೆಯಲ್ಲಿ ಸೇರಿಸಿದ್ದೇನೆ . ಕುದ್ರೋಳಿ ಸೇರಿದಂತೆ ಬೇರೆ ದೇವಸ್ಥಾನದ ಚರಿತ್ರೆಯನ್ನೂ ಬರೆದಿದ್ದೇನೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಂದ ಆತ್ಮಕಥೆ ಬಿಡುಗಡೆಗೊಳಿಸುವ ಆಸೆಯಿತ್ತು. ಆದರೆ, ನನ್ನ ಆತ್ಮಚರಿತ್ರೆಯನ್ನು ನಾನೇ ಬಿಡುಗಡೆ ಮಾಡಿದರೆ ಉತ್ತಮವೆಂದು ನಿರ್ಧರಿಸಿದ್ದೇನೆ' ಎಂದರು.
'ಆಡಳಿತದಲ್ಲಿ ಎಡವಿದಾಗ ಮುಖ್ಯಮಂತ್ರಿ ಜೊತೆ ಮಾತನಾಡಿ ಅವರಿಗೆ ಸಲಹೆ ಕೂಡಾ ನೀಡಿದ್ದೇನೆ. ಆದರೆ, ಯಾವ ಸಲಹೆಯನ್ನೂ ಅವರು ಸ್ವೀಕರಿಸಿಲ್ಲ. ಮುಂದಿನ 20 ವರ್ಷಗಳ ಕಾಲ ಸಿಎಂ ಆಗಿ ಎಂದು ಕೂಡಾ ಹೇಳಿದ್ದೆ ಈ ಎಲ್ಲಾ ವಿಚಾರಗಳ ಬಗ್ಗೆ ಪುಸ್ತಕದಲ್ಲಿ ನಮೂದಿಸಿದ್ದೇನೆ' ಎಂದು ವಿವರಣೆ ನೀಡಿದರು.
'ವೀರಪ್ಪ ಮೊಯ್ಲಿ ಅವರ ಅಣ್ಣನಮಗ ಸಂಜೀವ ಮೊಯ್ಲಿ ಕುರಿತು ಪುಸ್ತಕದಲ್ಲಿದೆ. ಚಿಕ್ಕಮಗಳೂರು ಚುನಾವಣೆ ಸಂದರ್ಭ ಇಂದಿರಾ ಗಾಂಧಿ ಮಾಡಿದ ಭಾಷಣದ ಅನುವಾದ ಪುಸ್ತಕದಲ್ಲಿದೆ. ಸಾಲದ ಹೋರಾಟದಲ್ಲಿ ನನ್ನ ಒಟ್ಟಿಗೆ ಇದ್ದರವ ಬಗ್ಗೆ, ಪತ್ರಿಕಾ ಸ್ನೇಹಿತರ ಬಗ್ಗೆ ಕೂಡಾ ಆತ್ಮಕಥೆಯಲ್ಲಿ ನಮೂದಿಸಿದ್ದೇನೆ' ಎಂದು ಹೇಳಿದರು.
'ಪುಸ್ತಕ ಬಿಡುಗಡೆಯಾದ ಬಳಿಕ ಕೆಲ ದಿನಗಳಲ್ಲಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಖುದ್ದಾಗಿ ಪುಸ್ತಕ ನೀಡುತ್ತೇನೆ' ಎಂದು ಪೂಜಾರಿ ತಿಳಿಸಿದರು.