ಒಂದಲ್ಲಾ ಒಂದಿನ ಚಿದಂಬರಂ ಅಕ್ರಮ ಬಯಲಿಗೆ ಬರುತ್ತೆ; ಜನಾರ್ದನ ಪೂಜಾರಿ ಹಳೇ ವಿಡಿಯೋ ವೈರಲ್
ಮಂಗಳೂರು ಆಗಸ್ಟ್ 23: ಸಿಬಿಐ ವಶದಲ್ಲಿರುವ ಮಾಜಿ ಸಚಿವ ಪಿ. ಚಿದಂಬರಂ ಅವರ ಬಗ್ಗೆ ಈ ಹಿಂದೆ ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ನೀಡಿದ್ದ ಎಚ್ಚರಿಕೆಯ ಮಾತುಗಳು ಈಗ ಚರ್ಚೆಗೆ ಬಂದಿವೆ. ಅಂದು ಜನಾರ್ದನ ಪೂಜಾರಿ ನೀಡಿದ್ದ ಎಚ್ಚರಿಕೆ ನಿಜವಾಗುತ್ತಾ ಎಂಬುದರ ಬಗ್ಗೆ ಕಾಂಗ್ರೆಸ್ ವಲಯದಲ್ಲೇ ಗಂಭೀರ ಚರ್ಚೆ ನಡೆಯುತ್ತಿದೆ.
ಆ ಹೆಂಗಸಿನ ತಪ್ಪೊಪ್ಪಿಗೆ, ಪಿ ಚಿದಂಬರಂ ಬಂಧನಕ್ಕೆ ಕಾರಣವಾಯ್ತು
ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಅವರ ಹಗರಣಗಳ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಈ ಹಿಂದೆಯೇ ಕಾಂಗ್ರೆಸ್ ಗೆ ಎಚ್ಚರಿಕೆ ನೀಡಿದ್ದರು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅವರು ಹೇಳಿದ್ದ ಮಾತು ಈಗ ನಿಜವಾಗಲಿದೆಯೇ ಎಂಬ ಆತಂಕ ಕಾಂಗ್ರೆಸ್ ಮುಖಂಡರನ್ನು ಕಾಡತೊಡಗಿದೆ. ಈ ಕುರಿತ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ ವಿಧಾನಸಭೆ ಚನಾವಣೆ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಪ್ರಚಾರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಜನಾರ್ದನ ಪೂಜಾರಿ ಕೆಲ ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದರು. ಜೊತೆಗೆ ಚಿದಂಬರಂ ಅವರ ಅಕ್ರಮಗಳ ಬಗ್ಗೆಯೂ ಮಾತನಾಡಿದ್ದರು.
"ಚಿದಂಬರಂ ಅವರ ಏನು ಮಾಡಿದ್ದಾರೆ ಎಂಬುದು ನಿಮಗೆ ಗೊತ್ತಿದೆಯಾ? ಅದೆಲ್ಲಾ ಬಿಜೆಪಿ ಅವರಿಗೆ ಗೊತ್ತಾದರೆ ಚಿದಂಬರಂ ಅವರನ್ನು ಸುಮ್ಮನೇ ಬಿಡುತ್ತಾರ? ಚಿದಂಬರಂ ಅವರು ಮಾಡಿದ್ದೆಲ್ಲಾ ಬಿಜೆಪಿ ಅವರಿಗೆ ಗೊತ್ತಾದರೆ ಕಾಂಗ್ರೆಸ್ ಸರ್ವನಾಶವಾಗುತ್ತದೆ. ನೋಡಿ, ಒಂದಲ್ಲಾ ಒಂದು ದಿನ ಬಿಜೆಪಿಯವರು ಚಿದಂಬರಂ ಅವರ ಅಕ್ರಮಗಳನ್ನು ಬಯಲಿಗೆ ತರುತ್ತಾರೆ" ಎಂದಿದ್ದರು.