ಯಾರಿಗೆ ಸಿಗುತ್ತೆ ಮುಲ್ಕಿ-ಮೂಡಬಿದಿರೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್?
ಮಂಗಳೂರು, ಜನವರಿ 15: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಭಾರೀ ಕುತೂಹಲ ಕೆರಳಿಸಿದ ಕ್ಷೇತ್ರ ಮುಲ್ಕಿ ಮೂಡಬಿದರೆ ವಿಧಾನ ಸಭಾ ಕ್ಷೇತ್ರ. ಭಾರಿ ನಿರೀಕ್ಷೆಯ ಕ್ಷೇತ್ರವಾದ ಮುಲ್ಕಿ- ಮೂಡಬಿದಿರೆಗೆ ಈ ಭಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರು ಎನ್ನುವುದು ಕುತೂಹಲ ಹಾಗೂ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ಕ್ಷೇತ್ರದಿಂದ ಕಳೆದ 4 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಭಯಚಂದ್ರ ಜೈನ್ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುವ ಸುಳಿವು ಈ ಹಿಂದೆಯೇ ನೀಡಿದ್ದರು. ಈ ಬಾರಿ ಕ್ಷೇತ್ರ ದಿಂದ ಸ್ಪರ್ಧಿಸಲು ಯುವಕರಿಗೆ ಅವಕಾಶ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.
ಪ್ರಮುಖವಾಗಿ ವಿಧಾನಪರಿಷತ್ ಮುಖ್ಯಸಚೇತಕರಾಗಿರುವ ಐವನ್ ಡಿಸೋಜಾ ಹಾಗೂ ದಕ್ಷಿಣಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಟಿಕೆಟ್ ಆಕಾಂಕ್ಷಿಗಳ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ನಡುವೆ ಮಂಗಳೂರು ಮೇಯರ್ ಕವಿತಾ ಸನಿಲ್ ಹೆಸರೂ ಕೂಡಾ ಕೇಳಿ ಬರುತ್ತಿತ್ತು. ಆದರೆ ಇತ್ತಿಚಿನ ಮಾಹಿತಿಯಂತೆ ಕವಿತಾ ಸನಿಲ್ ಸ್ಪರ್ದೆಯಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗಿದೆ.
ಆದರೆ ಹೆಚ್ಚು ಕಾರ್ಯೋನ್ಮುಖವಾಗಿ ರಂಗಕ್ಕೆ ಇಳಿದಿದ್ದು ಎಂ ಎಲ್ ಸಿ ಐವನ್ ಡಿಸೋಜಾ ಮತ್ತು ಮಿಥುನ್ ರೈ. ಟಿಕೆಟ್ ಪೈಪೊಟಿಗೆ ಬಿದ್ದ ಈ ಇಬ್ಬರು ಮುಲ್ಕಿ ಮೂಡಬಿದರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುವ ಸಣ್ಣ ಪುಟ್ಟ ಕೋಳಿ ಅಂಕ ದಿಂದ ಹಿಡಿದು ಕಂಬಳದವರೆಗೆ, ಸತ್ಯ ನಾರಾಯಣ ಪೂಜೆಯಿಂದ ಹಿಡಿದು ಗೋ ಪೂಜೆವರೆಗೂ ಎಲ್ಲೆಂದರಲ್ಲಿ ಈ ಇಬ್ಬರು ನಾಯಕರು ನಾ ಮುಂದು ತಾ ಮುಂದು ಎಂದು ಫೋಸ್ ಕೊಟ್ಟಿದೇ ಕೊಟ್ಟಿದ್ದು.
ಐವನ್ ಡಿಸೋಜಾ ಇದಕ್ಕಿಂದ ಒಂದು ಹೆಜ್ಜೆ ಮುಂದೆ ಹೋಗಿ ಮೂಡಬಿದರೆಯಲ್ಲೆ ಕಚೇರಿಯೊಂದನ್ನು ತೆರೆದು ತಮ್ಮ ಪ್ರಭಾವ ಹಾಗೂ ಅಧಿಕಾರವನ್ನು ಬಳಿಸಿಕೊಂಡು ಮುಲ್ಕಿ-ಮೂಡಬಿದಿರೆ ಕ್ಷೇತ್ರದಲ್ಲಿ ಕೆಲವೊಂದು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡರು. ಆದರೆ ಇತ್ತಿಚೆನ ಮಾಹಿತಿ ಪ್ರಕಾರ ಮುಲ್ಕಿ ಮೂಡಬಿದರೆ ಕ್ಷೇತ್ರದ ಸಿಟ್ಟಿಂಗ್ ಎಂ ಎಲ್ ಎ ಅಭಯಚಂದ್ರ ಜೈನ್ ಅವರನ್ನೆ ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ.
ಬಿಜೆಪಿ ರಾಷ್ಟ್ರ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಚುನಾವನೆಯನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದು, ಅಮಿತ್ ಶಾ ತಂತ್ರಗಾರಿಕೆ ಮುಂದೆ ಕಾಂಗ್ರೆಸ್ ಹೈ ಕಮಾಂಡ್ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ದವಿಲ್ಲ. ಈ ಹಿನ್ನೆಲೆಯಲ್ಲಿ ಗೆಲ್ಲುವ ಕುದುರೆ ಅಭಯಚಂದ್ರ ಜೈನ್ ಅವರನ್ನೆ ಕಣಕ್ಕಿಳಿಯಲು ಸೂಚಿಸಲಿದೆ ಎಂದು ಹೇಳಲಾಗಿದೆ.
ಈ ಪರಿಣಾಮ ಐವನ್ ಡಿಸೋಜಾ ಹಾಗು ಮಿಥುನ್ ರೈ ಅವರು ಅಭ್ಯರ್ಥಿಯಾಗಲು ನಡೆಸುತ್ತಿರುವ ಪೈಪೋಟಿಗೆ ತಣ್ಣಿರೆರೆಚಿದಂತಾಗಿದೆ. ಐವನ್ ಡಿಸೋಜಾ ಹಾಗೂ ಮಿಥುನ್ ರೈ ಸಾಧ್ಯವಾದಷ್ಟು ಮಟ್ಟಿಗೆ ಕಾಂಗ್ರೆಸ್ ಪಕ್ಷದ ಹಾಗೂ ಸರಕಾರದ ಸಾಧನೆಯ ವಿಚಾರವನ್ನು ಕ್ಷೇತ್ರದ ಜನತೆಗೆ ತಲುಪಿಸುತ್ತಿದ್ದು, ಅಭಯಚಂದ್ರ ಜೈನ ಈ ಇಬ್ಬರನ್ನೂ ಅವರಿಗೆ ತಿಳಿಯದ ರೀತಿಯಲ್ಲಿ ತನ್ನ ಪ್ರಚಾರಕರಾಗಿ ಬಳಸಿಕೊಂಡಿದ್ದಾರೆ ಎಂಬ ಗುಸುಗುಸು ಸುದ್ದಿ ಹರಡುತ್ತಿದೆ.
ಈ ನಡುವೆ ಐವನ್ ಡಿಸೋಜಾ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ದ ಮೇಲೂ ಕಣ್ಣಿಟ್ಟಿದ್ದಾರೆ. ಇನ್ನೊಂದು ಮಾಹಿತಿ ಪ್ರಕಾರ ಬೀದರ್ ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯದವರು ಹೆಚ್ಚಾಗಿರುವ ಕ್ಷೇತ್ರ ಒಂದರ ಮೇಲೂ ಐವನ್ ಆಸಕ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ.