ಐಎಂಎ ಎಫೆಕ್ಟ್; ಮಂಗಳೂರಿನ ಆಭರಣ ಮಳಿಗೆಗಳ ಮೇಲೆ ಐಟಿ ದಾಳಿ
ಮಂಗಳೂರು, ಜೂನ್ 27: ಬೆಂಗಳೂರಿನಲ್ಲಿ ಐಎಂಎ ಹಗರಣ ಬೆಳಕಿಗೆ ಬರುತ್ತಿದ್ದಂತೆ ತೆರಿಗೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಮಂಗಳೂರಿನ ಆಭರಣ ಮಳಿಗೆಗಳ ಮೇಲೆ ಐಟಿ ದಾಳಿ ನಡೆದಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಂಗಳೂರಿನಲ್ಲಿ ಕೇರಳ ಮೂಲದ ಆಭರಣ ಮಳಿಗೆಗಳು, ಅವುಗಳ ಮಾಲೀಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಕ್ರಿಕೆಟ್ ಬೆಟ್ಟಿಂಗ್; ಮಂಗಳೂರಿನಲ್ಲಿ ನಾಲ್ವರ ಬಂಧನ, 54 ಲಕ್ಷ ರೂಪಾಯಿ ವಶ
ಕಾಸರಗೋಡು, ಮಂಗಳೂರು, ಉಡುಪಿಗಳಲ್ಲಿ ಐಟಿ ತಂಡಗಳು ತೆರಳಿ ತಪಾಸಣೆ ಕೈಗೊಳ್ಳುತ್ತಿವೆ. ಮಂಗಳೂರಿನಲ್ಲಿ ಸಿಟಿಗೋಲ್ಡ್ ಹಾಗೂ ಸುಲ್ತಾನ್ ಗೋಲ್ಡ್ ಜುವೆಲ್ಲರಿಗಳ ಮೇಲೆ ದಾಳಿ ನಡೆಸಲಾಗಿದೆ. ಐಎಂಎ ಜುವೆಲ್ಲರಿ ಹಗರಣ ನಡೆದ ಹಿನ್ನೆಲೆಯಲ್ಲಿ ಆಭರಣ ಸಂಸ್ಥೆಗಳ ಮೇಲೆ ನಿಗಾ ಇರಿಸಿರುವ ಐಟಿ ಇಲಾಖೆ ಈ ದಾಳಿ ನಡೆಸುತ್ತಿದೆ ಎಂದು ಹೇಳಲಾಗಿದೆ.
ಆದಾಯ ತೆರಿಗೆ ಇಲಾಖೆಯ ಮಂಗಳೂರು, ಬೆಂಗಳೂರು ಹಾಗೂ ಗೋವಾದಿಂದ ಅಧಿಕಾರಿಗಳ ತಂಡ ಈ ದಾಳಿಯಲ್ಲಿ ಭಾಗವಹಿಸಿವೆ ಎಂದು ಹೇಳಲಾಗಿದೆ. ಕಡತಗಳ ಪರಿಶೀಲನೆ ಇನ್ನೂ ಮುಂದುವರೆದಿದ್ದು ಹೆಚ್ಚಿನ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.