'ಇಂದಿರಾ ಗಾಂಧಿಗೆ ಬಂಗಾರಪ್ಪ ಹೊಡೆಯಲು ಹೋಗಿದ್ದರು ಅನ್ನೋದು ಸುಳ್ಳು'
ಮಂಗಳೂರು, ಫೆಬ್ರವರಿ 9: ಜನಾರ್ದನ ಪೂಜಾರಿ ಆತ್ಮಕಥೆ 'ಸಾಲಮೇಳದ ಸಂಗ್ರಾಮ'ದಲ್ಲಿ ಪ್ರಸ್ತಾಪವಾಗಿರುವ ಮಾಜಿ ಮುಖ್ಯಮಂತ್ರಿ, ದಿವಂಗತ ಸಾರೆಕೊಪ್ಪ ಬಂಗಾರಪ್ಪ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಪುತ್ರ ಮಧು ಬಂಗಾರಪ್ಪ ವ್ಯಗ್ರರಾಗಿದ್ದಾರೆ.
ಈ ಕುರಿತು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು "ಇಂದಿರಾಗಾಂಧಿಯವರಿಗೆ ಬಂಗಾರಪ್ಪ ಹೊಡೆಯಲು ಹೋಗಿದ್ದಾರೆ ಅನ್ನುವುದು ಸುಳ್ಳು. ಹೊಡೆಯುವ ಚಾಳಿ ಬಂಗಾರಪ್ಪನರದ್ದಲ್ಲ. ಹೊಡೆಯುವ ಚಾಳಿ ಕರಾವಳಿಯ ಜನರದ್ದು. ಜನಾರ್ದನ ಪೂಜಾರಿಯಂತವರಿಂದ ಕರಾವಳಿಯಲ್ಲಿ ಹೊಡೆಯುವ ಚಾಳಿ ಬಂದಿದೆ," ಎಂದು ಕಿಡಿಕಾರಿದರು.
ಜನಾರ್ದನ ಪೂಜಾರಿ ಆತ್ಮಕಥೆಯಲ್ಲಿನ ಕೆಲವು ಸ್ಫೋಟಕ ಸತ್ಯಗಳು!
"ಜನಾರ್ದನ ಪೂಜಾರಿ ಗೆದ್ದಿರೋದಕ್ಕಿಂತ ಸೋತಿರೋದು ಜಾಸ್ತಿ. ಜನಾರ್ದನ ಪೂಜಾರಿಯವರ ವಯಸ್ಸಿಗೆ ಗೌರವ ಕೊಡುತ್ತೇನೆಯೇ ಹೊರತು ವ್ಯಕ್ತಿಗೆ ಕೊಡುವುದಿಲ್ಲ. ಜನಾರ್ದನ ಪೂಜಾರಿಯವರದ್ದು ಆತ್ಮಚರಿತ್ರೆ ಅಲ್ಲ. ಅದು ಪೂಜಾರಿಯ ಪಾಪದ ಕೊಡ," ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನಾರ್ದನ ಪೂಜಾರಿಯವರಿಗೆ ಅರಳು-ಮರಳು ಎಂದು ವಾಗ್ದಾಳಿ ನಡೆಸಿದ ಸೊರಬ ಜೆಡಿಎಸ್ ಶಾಸಕ ಮಧು ಬಂಗಾರಪ್ಪ, "ಕರಾವಳಿ ಗಲಭೆಗೆ ಜನಾರ್ದನ ಪೂಜಾರಿಯೂ ಕಾರಣ. ಅವರು ಕಲ್ಲಡ್ಕ ಪ್ರಭಾಕರ್ ಭಟ್ ರನ್ನು ಹತ್ರ ಕರೆಸಿಕೊಂಡಿದ್ದಾರೆ. ಜನಾರ್ದನ ಪೂಜಾರಿ ನಿಜವಾದ ಆರ್.ಎಸ್.ಎಸ್ ಸ್ವಯಂ ಸೇವಕ," ಎಂದು ಹರಿಹಾಯ್ದರು.