ಕುಸಿಯುತ್ತಿದೆಯಾ ಬೆಳ್ತಂಗಡಿಯಲ್ಲಿರುವ ಗಡಾಯಿಕಲ್ಲು ಬೆಟ್ಟ?
ಮಂಗಳೂರು ಜೂನ್ 24: ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ ಹಿನ್ನೆಲೆಯುಳ್ಳ ಗಡಾಯಿಕಲ್ಲು ಬೆಟ್ಟ ಅಥವಾ ಜಮಾಲಾಬಾದ್ ಕುಸಿಯುತ್ತಿದೆಯಾ ? ಇಂತಹದೊಂದು ಆತಂಕ ಬೆಳ್ತಂಗಡಿ ಪರಿಸದ ಜನರಲ್ಲಿ ಮನೆ ಮಾಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿವೆ.
ದಕ್ಷಿಣಕನ್ನಡ ಜಿಲ್ಲೆಯ ಗಡಾಯಿಕಲ್ಲು ಬೆಟ್ಟದಲ್ಲಿ ಬಿರುಕು ಬಿಟ್ಟಿದ್ದು, ಬೆಟ್ಟದ ಒಂದು ಪಾರ್ಶ್ವದಲ್ಲಿ ಗುಡ್ಡದ ಮಣ್ಣು ಕುಸಿದು ಬಿದ್ದಿದೆ. ಸ್ಥಳೀಯರ ಮಾಹಿತಿ ಪ್ರಕಾರ ಈ ಘಟನೆ ಸಂಭವಿಸುವ ವೇಳೆ ಪರಿಸರದಲ್ಲಿ ಭಾರೀ ಶಬ್ದವೂ ಕೇಳಿಸಿಕೊಂಡಿತ್ತು ಎಂದು ಹೇಳಲಾಗಿದೆ.
ಮಂಚಿಕೆರೆಯಲ್ಲಿ ಭೂಮಿ ಬಿರುಕು ಬಿಟ್ಟಿರುವುದು ಏಕೆ?
ಚಾರಣಪ್ರೀಯರ ಹಾಟ್ ಸ್ಪಾಟ್ ಆಗಿರುವ ಬೆಳ್ತಂಗಡಿಯ ಈ ಪ್ರವಾಸಿತಾಣ ನರಸಿಂಹಗಢ ಎಂದೂ ಕರೆಯಲಾಗುತ್ತದೆ. ಭೂಮಿಯಿಂದ 1700 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಭಾರೀ ಶಬ್ಧ ಕೇಳಿಬಂದಿದ್ದು,ಕಲ್ಲಿನ ಒಂದು ಪಾರ್ಶ್ವದಲ್ಲಿ ಕುಸಿತವಾಗಿದೆ ಎಂದು ಹೇಳಲಾಗಿದೆ.
ಬೆಳ್ತಂಗಡಿ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಈ ಗಡಾಯಿಕಲ್ಲು ಭೂಮಿಯಿಂದ ನೂರಾರು ಅಡಿ ಎತ್ತರದಲ್ಲಿರುವ ಈ ಪರ್ವತವು ಪ್ರಸಿದ್ದ ಪ್ರವಾಸಿ ತಾಣ ಮತ್ತು ಟ್ರಕ್ಕಿಂಗ್ ಸ್ಪಾಟ್ ಆಗಿಯೂ ಗುರುತಿಸಿಕೊಂಡಿದೆ. ಆದರೆ ಈ ಘಟನೆಯನ್ನು ಅರಣ್ಯ ಇಲಾಖೆ ಅಲ್ಲಗಳೆದಿದ್ದು , ಪರ್ವತಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಮಂಚಿಕೆರೆಯಲ್ಲಿ ಬಿರುಕು ಬಿಟ್ಟ ಭೂಮಿ; ಜನರ ಆತಂಕ
ಗಡಾಯಿಕಲ್ಲು ಕುಸಿಯುತ್ತಿದೆ ಎನ್ನುವ ಸುದ್ದಿ ಸ್ಥಳೀಯ ಲಾಯಿಲ, ಇಂದಬೆಟ್ಟು, ಕೊಲ್ಲಿ, ಮಲವಂತಿಗೆ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ಬೆಳ್ತಂಗಡಿ ವನ್ಯಜೀವಿವಲಯದ ವ್ಯಾಪ್ತಿಯಲ್ಲಿ ಬರುವ ಗಡಾಯಿಕಲ್ಲಿನ ಬಿರುಕಿನ ಬಗ್ಗೆ ಅರಣ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದು,ಇದರಿಂದ ಯಾವುದೇ ಅನಾಹುತ ಸಂಭವಿಸೋದಿಲ್ಲ ಅಂತಾ ಸ್ಪಷ್ಟನೆ ನೀಡಿದೆ.
ಮೊದಲು ಹಿಂದೂ ರಾಜರುಗಳ ಕೋಟೆಯಾಗಿದ್ದ ನರಸಿಂಹ ಗಢಕ್ಕೆ 1794ರಲ್ಲಿ ಟಿಪ್ಪುಸುಲ್ತಾನ್ ದಾಳಿ ಮಾಡಿ ವಶ ಪಡಿಸಿಕೊಂಡ ಬಳಿಕ ಜಮಾಲಾಬಾದ್ ಕೋಟೆ ಎಂದು ಮರುನಾಮಕರಣ ಮಾಡಿದ್ದ.ನರಸಿಂಹ ಗಢದಲ್ಲಿ ಇಂದಿಗೂ ಟಿಪ್ಪು ಸುಲ್ತಾನ್ ಕಾಲದ ಫಿರಂಗಿಗಳು ಕಾಣಸಿಗುತ್ತಿದ್ದು,ಪ್ರವಾಸಿಗರ ನೆಚ್ಚಿನ ತಾಣವಾಗಿದೆ..